ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿ ಅಭ್ಯರ್ಥಿ ಗೆಲುವಿಗೆ ನೆರವಾಗಬೇಕೆಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್ ಮನವಿ ಮಾಡಿದರು.
ಮಂಡ್ಯದ ಗಾಂಧಿನಗರದ 1 ನೇ ಕ್ರಾಸ್ನಲ್ಲಿ ಶನಿವಾರ ಸಂಜೆ ಮಂಡ್ಯ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ಭೂತ್ ವಿಜಯ ಸಂಕಲ್ಪ ಅಭಿಯಾನದಲ್ಲಿ ಸರ್ಕಾರದ ಜನಕಲ್ಯಾಣ ಯೋಜನೆಗಳ ಮಾಹಿತಿ ನೀಡುವ ಸ್ಟಿಕಸ್ಸ್ ಮತ್ತು ಪೋಸ್ಟರ್-ಗೋಡೆ ಬರಹ ಅಂಟಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಕಲ್ಯಾಣ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಶ್ರದ್ಧೆಯಿಂದ ಮಾಡಬೇಕೆಂದು ಕಿವಿಮಾತು ಹೇಳಿದರು.
ಮಂಡ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಅಶೋಕ್ ಜಯರಾಮ್ ಮಾತನಾಡಿ, ಇಂದು ಭೂತ್ ವಿಜಯ ಸಂಕಲ್ಪ ಅಭಿಯಾನದ ರಾಜ್ಯ ಸಂಚಾಲಕರರಾದ ಸಚಿವ ಡಾ.ಅಶ್ವಥ್ ನಾರಾಯಣ್ ಅವರು ಮಂಡ್ಯ ನಗರಕ್ಕೆ ಭೇಟಿ ನೀಡಿ, ಬಿಜೆಪಿ ಕಾರ್ಯಕರ್ತರಿಗೆ ಹೊಸ ಹುರುಪು ನೀಡಿದ್ದಾರೆ ಎಂದರು.
ಪ್ರತಿಯೊಬ್ಬ ಕಾರ್ಯಕರ್ತರು ಕೂಡ ಬಿಜೆಪಿಯ ಕೇಂದ್ರ ಮತ್ತು ರಾಜ್ಯಸರ್ಕಾರಗಳ ಯೋಜನೆಗಳ ಬಗ್ಗೆ ಜನರಿಗೆ ಮನದಟ್ಟು ಮಾಡುವ ನಿಟ್ಟಿನಲ್ಲಿ ಶ್ರಮಿಸಬೇಕೆಂದರು. ಮುಂದಿನ ದಿನಗಳಲ್ಲಿ ಪ್ರತಿ ವಾರ್ಡ್ ಗಳ ಬಿಜೆಪಿ ಕಾರ್ಯಕರ್ತರ ಮನೆ ಮೇಲೆ ಬಿಜೆಪಿ ಧ್ವಜ, ಮನೆ ಮಾಲೀಕರ ಅನುಮತಿ ಪಡೆದು ಬಿಜೆಪಿ ಚಿನ್ನೆ, ಭರವಸೆಯ ಕರಪತ್ರ ಅಂಟಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಸಿದ್ದರಾಮಯ್ಯ, ಮುಖಂಡರಾದ ಎಚ್ ಆರ್ ಅರವಿಂದ್, ಶಿವಣ್ಣ ಚಂದಗಾಲು, ನಗರ ಮೋರ್ಚಾ ಅಧ್ಯಕ್ಷ ವಿವೇಕ , ನಗರಸಭಾ ಸದಸ್ಯ ಅರುಣ್ ಕುಮಾರ್, ನಾಮಿನಿ ಸದಸ್ಯರಾದ ಪ್ರಸನ್ನ, ಹರ್ಷ, ಫೈನಾನ್ಸ್ ಚಂದ್ರು, ರಾಜ್ಯ ಕಾರ್ಯಕಾರಣಿ ಯುವ ಘಟಕದ ಉಪಾಧ್ಯಕ್ಷ ರಜತ್ ಮತ್ತಿತರರಿದ್ದರು.