ಖಾಸಗಿ ಶಾಲೆಗಳ ಆಕರ್ಷಣೆಯಲ್ಲೂ ಬಿ.ಹೊಸೂರು ಸರ್ಕಾರಿ ಶಾಲೆ ಉತ್ತಮವಾಗಿ ನಡೆಯುತ್ತಿರುವುದು ಶ್ರಮದ ಸಾಧನೆಯಾಗಿದೆ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿದರು.
ಮಂಡ್ಯ ತಾಲೂಕಿನ ಬಿ.ಹೊಸೂರು ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಜಿ.ಪಂ., ಶಾಲಾ ಶಿಕ್ಷಣ ಇಲಾಖೆ ಮಂಡ್ಯ ಉತ್ತರ ವಲಯ, ಹಳೇ ವಿದ್ಯಾರ್ಥಿಗಳ ಬಳಗ ಆಯೋಜಿಸಿದ್ದ ಸರ್ಕಾರಿ ಪ್ರೌಢಶಾಲೆಯ ಬೆಳ್ಳಿ ಹಬ್ಬದ ಮಹೋತ್ಸವ ಮತ್ತು ಗುರುವಂದನಾ ಹಾಗೂ ಕನ್ನಡರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ 25 ವರ್ಷದ ಬೆಳ್ಳಿಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಬಿ.ಹೊಸೂರು ಶಾಲೆಗೆ ಉತ್ತಮ ಭವಿಷ್ಯವಿದೆ, ಬೆಳ್ಳಿ ಹಬ್ಬದ ಸ್ಮರಣಾರ್ಥ 2 ಕೊಠಡಿಗಳನ್ನು ನೂತನವಾಗಿ ನಿರ್ಮಿಸಲು ಶಾಸಕರ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.
25 ವರ್ಷದ ವಸಂತ ಕಂಡಿರುವ ಶಾಲೆಯಲ್ಲಿ ನೂರಾರು, ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣ, ಜ್ಞಾನ ಪಡೆದುಕೊಂಡು, ಭವಿಷ್ಯ ರೂಪಿಸಿಕೊಂಡಿದ್ದಾರೆ, ಅವರೆಲ್ಲ ಒಗ್ಗೂಡಿ, ಬೆಳ್ಳಿ ಹಬ್ಬ ಆಚರಿಸುತ್ತಿರುವುದು ಅವಿಸ್ಮರಣೀಯ ಎಂದರು.
ಮುಂದಿನ ದಿನಗಳಲ್ಲ ಬಿ.ಹೊಸೂರು ಶಾಲೆ 100 ವರ್ಷಗಳ ಸಂಭ್ರಮಾರಣೆ ಕಾಣಲಿ, ಸ್ಥಳೀಯ ಮುಖಂಡರು, ಗ್ರಾಮಸ್ಥರು, ಹಳೇ ವಿದ್ಯಾರ್ಥಿಗಳು ಶಾಲೆಯಲ್ಲಿ ಶಿಕ್ಷಣ ನೀಡಿದ ಶಿಕ್ಷಕರನ್ನು, ಹಿರಿಯನ್ನು ಗೌರವಿಸಿ ಧನ್ಯತೆ ಕಾಣಲಿ ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮದೇವತೆ ದೇವಾಲಯದ ಆವರಣದಲ್ಲಿ ಜಮಾವಣೆಗೊಂಡ ಸಾಂಸ್ಕೃತಿಕ ಕಲಾತಂಡ ಮತ್ತು ಗಣ್ಯರನ್ನು ನಾದಮೇಳ, ಕಲಾತಂಡಗಳ ಕುಳಿತದೊಂದಿಗೆ ಎತ್ತಿನ ಗಾಡಿಯಲ್ಲಿ ಗಣ್ಯರನ್ನು ವೇದಿಕೆಯತ್ತ ಮೆರವಣಿಗೆ ಮಾಡಿ ಅದ್ದೂರಿಯಾಗಿ ಕರತರಲಾಯಿತು. ಬಳಿಕ ಗುರುವಂದನಾ ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರನ್ನು,ಸಾಧಕರನ್ನು ಗೌರವಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಗಾಯಕ ಹುಗಲವಾಡಿ ರಾಮಯ್ಯ ಮತ್ತು ತಂಡದವರಿಂದ ಜಾನಪದಗೀತೆ, ಜಾಗೃತಿ ಗೀತೆಗಳ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಶಾಸಕ ದಿನೇಶ್ಗೂಳಿಗೌಡ, ಮಾಜಿ ಶಾಸಕ ಎಂ.ಶ್ರೀನಿವಾಸ್, ತಾ.ಪಂ.ಮಾಜಿ ಅಧ್ಯಕ್ಷ ತ್ಯಾಗರಾಜ್, ಮಾಜಿ ಸದಸ್ಯ ಬೋರೇಗೌಡ, ದಾನಿಗಳಾದ ಪದ್ಮ, ರಾಮಮೋಹನ್, ಕ್ಷೇತ್ರ ಶಿಕ್ಷಣಾಧಿಕಾರಿ ಸೌಭಾಗ್ಯ, ಚಂದ್ರಕಾಂತ, ಗ್ರಾ.ಪಂ.ಅಧ್ಯಕ್ಷ ಕೃಷ್ಣೇಗೌಡ, ಉಪಾಧ್ಯಕ್ಷೆ ಪವಿತ್ರಾ, ಸದಸ್ಯರಾದ ಪುಟ್ಟಸ್ವಾಮಿ, ನಿಂಗಯ್ಯ, ಆನಂದ್, ಗಾಯಿತ್ರಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಕೃಷ್ಣಾಚಾರಿ, ತಮ್ಮಣ್ಣ, ಮುಖ್ಯಶಿಕ್ಷಕಿ ಸುಜಾತ, ನಂಜರಾಜ್, ಶಿಕ್ಷಕವೃಂದ, ಹಳೇ ವಿದ್ಯಾರ್ಥಿಗಳ ಬಳಗ ಮತ್ತಿತರರಿದ್ದರು.