ನಗರ ಪ್ರದೇಶಗಳಲ್ಲಿ ಬಡಾವಣೆಗಳನ್ನು ನಿರ್ಮಿಸುವಾಗ ಒಳಚರಂಡಿ, ಕುಡಿಯುವ ನೀರು, ರಸ್ತೆ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯವುಳ್ಳ ವ್ಯವಸ್ಥೆ ಅವಶ್ಯಕ ಎಂದು ರೇಷ್ಮೆ, ಯುವ ಜನ ಸೇವಾ ಮತ್ತು ಕ್ರೀಡಾ ಸಚಿವ ಡಾ.ಕೆ.ಸಿ ನಾರಾಯಣಗೌಡ ತಿಳಿಸಿದರು.
ಮಂಡ್ಯ ನಗರದ ವಿವೇಕಾನಂದ ನಗರ ಬಡಾವಣೆಯಲ್ಲಿಂದು ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಠೇವಣಿ ಕೊಡುಗೆ ಕಾಮಗಾರಿಯಡಿ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಕೆರೆಯನ್ನು ಮುಚ್ಚಿ ಬಡಾವಣೆ ನಿರ್ಮಿಸಿದರೆ, ಮಳೆ ಬಂದಂತಹ ಸಂದರ್ಭದಲ್ಲಿ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸುವುದು ಕಷ್ಟಕರವಾಗುತ್ತದೆ. ಜನರು ಕಷ್ಟಪಟ್ಟು ಸಂಪಾದನೆ ಮಾಡಿದ ಹಣ ನೀಡಿ ನಿವೇಶನ ಖರೀದಿಸುತ್ತಾರೆ. ಅವರಿಗೆ ಎಲ್ಲಾ ರೀತಿಯ ಮೂಲಭೂತ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಎಂ.ಶ್ರೀನಿವಾಸ್, ಮುಡಾ ಅಧ್ಯಕ್ಷ ಶ್ರೀನಿವಾಸ್, ಸದಸ್ಯ ಹನುಮಂತು, ಕೃಷ್ಣೇಗೌಡ, ಪುಟ್ಟರ್ ಮಲ್ ಜೈನ್, ನಗರಸಭೆ ಅಧ್ಯಕ್ಷ ಮಂಜು,ಸದಸ್ಯ ನಾಗೇಶ್, ಮುಡಾ ಕಾರ್ಯಪಾಲಕ ಅಭಿಯಂತರ ಜೈ ಕುಮಾರ್, ಎಇಇ ಮೇಘ, ಎಇ ಆದರ್ಶ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.