ಕಾಯಕ ತತ್ವದ ಮಹತ್ವವನ್ನು ವಿಶ್ವಕ್ಕೆ ಸಾರಿ, ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿ ಸಮ ಸಮಾಜದ ನಿರ್ಮಾಣಕ್ಕಾಗಿ ಹೋರಾಡಿದ ವಿಶ್ವಜ್ಯೋತಿ ಬಸವಣ್ಣ ನವರ ಜೀವನದ ಆದರ್ಶಗಳನ್ನು ಯುವಜನರು ಕಡ್ಡಾಯವಾಗಿ ಪಾಲಿಸುವ ಮೂಲಕ ಬದಲಾವಣೆಯ ದಿಕ್ಕಿನತ್ತ ಸಾಗಬೇಕು ಎಂದು ತಾಲ್ಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ವಿ.ಎಸ್. ಧನಂಜಯಕುಮಾರ್ ಹೇಳಿದವರು.
ಕೆ. ಆರ್. ಪೇಟೆ ಪಟ್ಟಣದ ತಾಲ್ಲೂಕು ಆಡಳಿತ ಕಾರ್ಯಸೌಧದ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವಗುರು ಬಸವಣ್ಣ ಮತ್ತು ಮಹಾ ಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯ ಅಂಗವಾಗಿ ಇಬ್ಬರೂ ಮಹನೀಯರ ಭಾವ ಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಪೂಜೆ ಮಾಡಿ ಮಾತನಾಡಿದರು.
ಜಾತಿ, ಮತ, ಪಂಥಗಳಿಂದ ಮುಕ್ತವಾದ ಸಮ ಸಮಾಜದ ನಿರ್ಮಾಣಕ್ಕಾಗಿ ವಚನದ ಮೂಲಕ ಕ್ರಾಂತಿ ಮಾಡಿದ ಬಸವಣ್ಣನವರು ಸಮಾಜದಲ್ಲಿ ವಾಸಿಸುವ ಎಲ್ಲರೂ ಮೇಲು ಕೀಳು ಎಂಬ ಬೇಧ ಭಾವವಿಲ್ಲದೆ ಒಂದಾಗಿ ಸಹೋದರರಂತೆ ಬದುಕು ನಡೆಸಬೇಕು ಎಂಬ ಸಂದೇಶ ನೀಡಿದ ಮಹಾನುಭಾವರಾದ ಬಸವಣ್ಣ ಅವರು ನಮಗೆ ನೀಡಿರುವ ತತ್ವ ಸಂದೇಶಗಳು ಸಾರ್ವಕಾಲಿಕ ಸತ್ಯವಾಗಿವೆ. ಮಹಾಸಾಧ್ವಿ ಮಲ್ಲಮ್ಮ ಅವರು ಸಾಮಾಜಿಕ ಕಟ್ಟು ಪಾಡುಗಳು ಹಾಗೂ ಮೌಡ್ಯಗಳ ವಿರುದ್ಧ ಹೋರಾಟ ನಡೆಸಿ ಸ್ತ್ರೀ ಸ್ವಾತಂತ್ರ್ಯಕ್ಕೆ ಒತ್ತು ನೀಡಿ ಅಕ್ಷರದ ಮಹತ್ವ ಹಾಗೂ ಶಿಕ್ಷಣದ ಶಕ್ತಿಯ ಬಗ್ಗೆ ಜಾಗೃತಿ ಮೂಡಿಸಿದರು ಎಂದು ಸ್ಮರಿಸಿದರು.
ತಹಸೀಲ್ದಾರ್ ಲೋಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಾಗರೀಕ ಸಮಾಜದಲ್ಲಿ ಜೀವನ ನಡೆಸುತ್ತಿರುವ ನಾವು ಕಾಯಕಯೋಗಿ ಬಸವಣ್ಣನವರ ಜೀವನ ಸಂದೇಶಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಅನ್ಯಾಯ ಅಕ್ರಮಗಳ ವಿರುದ್ಧ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಕೆ.ಆರ್.ಪೇಟೆ ತಾಲೂಕು ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷ ತೋಟಪ್ಪಶೆಟ್ಟಿ, ಮುಖಂಡರಾದ ಬ್ಯಾಂಕ್ ಪರಮೇಶ್ವರ ಕಾರ್ಯಕ್ರಮದಲ್ಲಿ ಮಾತನಾಡಿದರು. ವೀರಶೈವ ಸಮಾಜದ ಮುಖಂಡರಾದ ಮಾದೇಶ, ವೀರಪ್ಪ, ಸೀಳನೆರೆ ಸತೀಶ್, ಜ್ಞಾನೇಶ್, ರಾಜಶ್ವ ನಿರೀಕ್ಷಕ ಜ್ಞಾನೇಶ್, ಗ್ರಾಮ ಆಡಳಿತ ಅಧಿಕಾರಿ ಜಗಧೀಶ್, ಪುರಸಭೆಯ ಆರೋಗ್ಯ ಪರಿವೀಕ್ಷಕ ಅಶೋಕ್, ಬಿಸಿಎಂ ಅಧಿಕಾರಿ ವೆಂಕಟೇಶ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸರ್ಕಾರಿ ನೌಕರರು ಭಾಗವಹಿಸಿದ್ದರು.