ಮೈಸೂರಿನಲ್ಲಿ ನಡೆಯಲಿರುವ ಮಹಿಷಾ ಉತ್ಸವದಲ್ಲಿ ಭಾಗಿಯಾಗಲು ಮಂಡ್ಯದಿಂದ ನೂರಾರು ಸಮಾನ ಮನಸ್ಕರು ಶುಕ್ರವಾರ ಬೆಳಿಗ್ಗೆ ಬೈಕ್ ಜಾಥಾದ ಮೂಲಕ ಪ್ರಯಾಣ ಬೆಳೆಸಿದರು.
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಮಹಿಷಾಸುರನಿಗೆ ಜಯಘೋಷ ಮೊಳಗಿಸಿ, ಬೈಕ್ ಜಾಥಾ ಹೊರಟರು.
ನೀಲಿ ಶಾಲುಗಳನ್ನು ಧರಿಸಿ, ನೀಲಿ ಬಾವುಟಗಳನ್ನು ಹಿಡಿದು ಬೆಂಗಳೂರು -ಮೈಸೂರು ಹೆದ್ದಾರಿ ಮೂಲಕ ಪ್ರಯಾಣ ಬೆಳೆಸಿದರು. ಡಾ.ಬಿ.ಆರ್.ಅಂಬೇಡ್ಕರ್, ಮಹಿಷನ ಭಾವಚಿತ್ರ ಹಿಡಿದು ಜಾಥ ಸಾಗಿದರು.
ಶ್ರೀರಂಗಪಟ್ಟಣದಲ್ಲಿ ಶ್ರೀರಂಗನಾಥ ದೇವಾಲಯ ಎದುರಿನ ಅಂಬೇಡ್ಕರ್ ವೃತ್ತದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಕೆಲ ಹೊತ್ತು ಮಹಿಷಾಸುರನಿಗೆ ಜೈಕಾರ ಕೂಗಿದ ನಂತರ ಅಲ್ಲಿಂದ ಮೈಸೂರಿಗೆ ತೆರಳಿದರು.
ಈ ಸಂದರ್ಭದಲ್ಲಿ ಸಮಾನ ಮನಸ್ಕರಾದ ಲಕ್ಷ್ಮಣ್ ಚೀರನಹಳ್ಳಿ, ಶಿವರುದ್ರಯ್ಯ, ಎಂ.ವಿ.ಕೃಷ್ಣ, ದೇವರಾಜ ಕೊಪ್ಪ, ನಾಗರಾಜು, ನಿರಂಜನ್, ಪರಶಿವಮೂರ್ತಿ, ಮಹೇಶ್, ಮೋಹನ್, ಜೆ ರಾಮಯ್ಯ, ಗುರು ಶಂಕರ್ ಮತ್ತಿತರರು ಹಾಜರಿದ್ದರು.