ಮುಂದಿನ ಪೀಳಿಗೆಯ ಜೀವಸಂಕುಲ ಸಂರಕ್ಷಣೆಗಾಗಿ ಊರಿಗೊಂದು ವನ ಅತ್ಯಶ್ಯಕ ಎಂದು ಡಾನ್ ಬೋಸ್ಕೋ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಸೇವಾ ಕೇಂದ್ರ ನಿರ್ದೇಶಕ ರೆವರೆಂಟ್ ಫಾದರ್ ಡಾ.ಪೀಟರ್ ಹೇಳಿದರು.
ಮಂಡ್ಯ ತಾಲೂಕಿನ ಹೊಳಲು ಗ್ರಾಮದಲ್ಲಿ ಡಾನ್ ಬೋಸ್ಕೋ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಸೇವಾ ಕೇಂದ್ರ ಯತ್ತಗದಹಳ್ಳಿ ಹಾಗೂ ನೆಲದನಿ ಬಳಗ ಮಂಗಲ, ಹೊಳಲು ಗ್ರಾಮ ಪಂಚಾಯಿತಿ ಇವರ ಸಹಯೋಗದೊಂದಿಗೆ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ ರೈತರಿಗೆ ಸಸಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಸ್ಯ ಸಂಪತ್ತು ಜೀವಿಸಿದರೆ ಮಾತ್ರ ಜೀವಸಂಕುಲ ಬೆಳೆಯಲು ಸಾಧ್ಯ. ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಮನೆಗೊಂದು ಮರ, ಊರಿಗೊಂದು ವನ ಅವಶ್ಯವಿದೆ.ಆದರೆ ಇಂದು ಕಲುಷಿತ ವಾತಾವರಣ ಹೆಚ್ಚಾಗುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಮರಗಳು ಅವಶ್ಯ ಎಂದು ಎಚ್ಚರಿಸಿದರು.
ಮಂಡ್ಯ ತಾಲೂಕಿನಲ್ಲಿ ಡಾನ್ ಬೋಸ್ಕೋ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಸೇವಾ ಕೇಂದ್ರದಿಂದ ಪ್ರತಿ ಗ್ರಾಮಪಂಚಾಯಿತಿ ಮೂಲಕ 24ಸಾವಿರ ಸಸಿಗಳನ್ನು ನೆಟ್ಟು ಮರ ಮಾಡುವ ಸಂಕಲ್ಪದೊಂದಿಗೆ ಕಾರ್ಯ ಕೈಗೊಂಡಿದ್ದೇವೆ, ನಮ್ಮ ಸಂಸ್ಥೆಯ ಆವರಣದಲ್ಲಿ ಬೀಜಗಳನ್ನು ಹಾಕಿ ಸಸಿಗಳನ್ನು ಮಾಡಿ, ರೈತಾಪಿ ಜನರಿಗೆ ಉಚಿತವಾಗಿ ವಿತರಿಸುವ ಸೇವಾ ಕಾರ್ಯದಲ್ಲಿ ಸಾಗುತ್ತಿದ್ದೇವೆ ಎಂದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಂ.ಸಿ.ಲಂಕೇಶ್ ಮಂಗಲ ಮಾತನಾಡಿ, ಕೋವಿಡ್-19ರ ಸಂದರ್ಭದಲ್ಲಿ ಕೃತಕ ಆಮ್ಲಜನಕ ಪಡೆಯಲು ಹಣ ನೀಡಿ ಖರೀದಿಸಿ ಬದುಕುಳಿದಿದ್ದಾರೆ.ಹಲವು ಮಂದಿ ಸಾವಿಗೀಡಾಗಿದ್ದಾರೆ, ಇಂತಹ ಜೀವಗಳನ್ನು ಉಳಿಸಲು ಮರಗಳಿಂದ ಮಾತ್ರ ಸಾಧ್ಯ, ಶುದ್ಧ ಆಮ್ಲಜನಕಕ್ಕಾಗಿ ಮರಗಳೇ ಆಶ್ರಯವಾಗಿವೆ ಎಂದು ನುಡಿದರು.
ಭಾರತ ದೇಶದಲ್ಲಿ ದೆಹಲಿ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳು ಶುದ್ಧ ಆಮ್ಲಜನಕಕ್ಕಾಗಿ ಪರದಾಡುತ್ತಿವೆ. ಹಣ ನೀಡಿ ವನಗಳಲ್ಲಿ ಶುದ್ಧಗಾಳಿ ಸೇವನೆ ಮಾಡುತ್ತಿದ್ದಾರೆ. ಇಂತಹ ದುರಂತ ದಿನಗಳು ಕರ್ನಾಟಕ ರಾಜ್ಯಕ್ಕೆ ಬಾರದಿರಲು ನಾವು ಇಂದಿನಿಂದಲೇ ಸಸಿಗಳನ್ನು ನೆಟ್ಟು ಮರಮಾಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ ಎಂದು ಎಚ್ಚರಿಸಿದರು.
ನಂತರ ಗ್ರಾಮಪಂಚಾಯಿತಿ ಅಧ್ಯಕ್ಷ ಎಚ್.ಡಿ.ರವಿ ಇದೇ ಸಂದರ್ಭದಲ್ಲಿ ಹೊಳಲು ಗ್ರಾಮಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತಾಪಿ ಸಮುದಾಯಕ್ಕೆ ಗಣ್ಯರು ವಿವಿಧ ಬಗೆಯ ಸಸಿಗಳನ್ನು ವಿತರಿಸಿ ಮರ ಮಾಡುವಂತೆ ಪ್ರಮಾಣ ವಚನ ಭೋದಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್. ಪಿ.ರಾಮು, ರಾಜ್ಯ ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷ ಎಚ್. ಎಲ್. ಶಿವಣ್ಣ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಬೇಲೂರು ಸೋಮಶೇಖರ್, ಗ್ರಾ.ಪಂ ಉಪಾಧ್ಯಕ್ಷೆ ಎಚ್.ಡಿ ಪಲ್ಲವಿ, ಸದಸ್ಯರಾದ ಅಭಿನಂದನ್, ಸೌಭಾಗ್ಯ, ಸುಧಾ, ಅರ್ಪಿತ, ಅರಣ್ಯ ಇಲಾಖೆಯ ಅಧಿಕಾರಿ ಬೆಟ್ಟಯ್ಯ, ಕಾರ್ಯಕ್ರಮ ಸಂಯೋಜಕ ಎಚ್. ಆರ್ ಸಂತೋಷ್, ಡಾನ್ ಬೋಸ್ಕೋ ಸಂಸ್ಥೆಯ ವೆಂಕಟರಾಮು, ನೆಲದನಿ ಬಳಗದ ನಿರ್ದೇಶಕರಾದ ಪ್ರತಾಪ್, ಕಾರ್ಯದರ್ಶಿ ಸಂತೆ ಕಸಲಗೆರೆ ಯೋಗೇಶ್, ನಂಜುಂಡ ಹಾಜರಿದ್ದರು.