ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜವನ್ನು ಬಲವಂತವಾಗಿ ಕೆಳಗಿಳಿಸಿ, ರಾಷ್ಟ್ರ ಧ್ವಜ ಹಾರಿಸುವ ಸಂದರ್ಭ ನಿಯಮಗಳನ್ನು ಗಾಳಿಗೆ ತೂರಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಮುಖಂಡರು ಮಂಡ್ಯದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದರು.
ಕೆರಗೋಡು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮಂಡ್ಯ ಉಪವಿಭಾಧಿಕಾರಿ, ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಇವರುಗಳು ಸ್ಥಳೀಯ ಪಂಚಾಯಿತಿಯಿಂದ ಅನುಮತಿ ಪಡೆದು ಹಾಕಲಾಗಿದ್ದ ಹನುಮ ಧ್ವಜವನ್ನು ಬಲವಂತವಾಗಿ ಇಳಿಸಿ, ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ರಾಷ್ಟ್ರಧ್ವಜವನ್ನು ಹಾರಿಸುವ ಸಂಧರ್ಭದಲ್ಲಿ ರಾಷ್ಟ್ರೀಯ ಧ್ವಜ ಸಂಹಿತೆಯ ನೀತಿಗಳನ್ನು ಸಂಪೂರ್ಣ ಉಲ್ಲಂಘಿಸಿರುತ್ತಾರೆ. ಅಲ್ಲದೆ 40 ವರ್ಷದಿಂದ ಇದ್ದ ಧ್ವಜ ಸ್ಥಂಭದ ಬಾವುಟವನ್ನು ಇಳಿಸುವ ಮೂಲಕ ಹಿಂದೂಗಳಿಗೆ ಹಾಗೂ ರಾಷ್ಟ್ರ ಪ್ರೇಮಿಗಳಿಗೆ ಅಪಮಾನ ಮಾಡಿರುತ್ತಾರೆ ಎಂದು ದೂರಿದರು.
ಧ್ವಜ ಸ್ಥಂಭದ ಮಕ್ಕಾಲು ಭಾಗಕ್ಕೆ ತಿರಂಗವನ್ನು ಹಾರಿಸಿರುತ್ತಾರೆ. ಧ್ವಜ ಹಾರಿಸುವ ಸಂಧರ್ಭದಲ್ಲಿ ಕಾಲಿಗೆ ಚಪ್ಪಲಿ ಮತ್ತು ಶೂ ಧರಿಸಿರುತ್ತಾರೆ. ಧ್ವಜಾರೋಹಣ ಸಂಧರ್ಭದಲ್ಲಿ ಹಾಗೂ ಧ್ವಜ ಇಳಿಸುವ ಸಂಧರ್ಭದಲ್ಲಿ ನಿಯಮಾನುಸಾರ ರಾಷ್ಟ್ರೀಯ ಗೀತೆಯನ್ನು ಹಾಡಿರುವುದಿಲ್ಲ, ಧ್ವಜದ ಮಧ್ಯೆ ಹೂವಿನ ದಳಗಳನ್ನು ಹಾಕಿರುವುದಿಲ್ಲ, ಮಧ್ಯಾಹ್ನದ ನಂತರ ಧ್ವಜ ಹಾರಿಸಿರುತ್ತಾರೆ. ಅಧಿಕಾರಿಗಳ ಇಂತಹ ನಡೆ ಧ್ವಜ ಸಂಹಿತೆ 2022 ರ ಉಲ್ಲಂಘನೆಯಾಗಿದೆ. ಹಾಗಾಗಿ ಇವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಮತ್ತೆ ಕೇಸರಿ ಧ್ವಜವನ್ನು ಮರು ಸ್ಥಾಪನೆ ಮಾಡಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಸಿ.ಟಿ.ಮಂಜುನಾಥ್, ಚಂದ್ರು, ಶಿವಕುಮಾರ್, ವಿವೇಕ್, ಪ್ರಸನ್ನಕುಮಾರ್, ನವೀನ್ ಯಲಿಯೂರು ಇತರರಿದ್ದರು.