ಈ ಹಿಂದೆ ಇದ್ದಂತಹ ಸರ್ಕಾರಗಳು ರೈತರು ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದವು, ಆದರೆ ಈಗ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ, ರೈತರು ಕಷ್ಟ ಕೇಳ್ತಿಲ್ಲ, ರೈತರನ್ನು ಬೀದಿಯಲ್ಲಿ ಬಿಟ್ಟು ಯಾವ ಕ್ಷೇತ್ರಕ್ಕೆ ಯಾವ ಕ್ಯಾಂಡೆಟ್ ಹಾಕಬೇಕೆಂದು ತಲೆಕೆಡಿಸಿಕೊಂಡಿದೆ ಎಂದು ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ ಆಕ್ರೋಶ ಹೊರ ಹಾಕಿದರು.
ಬುಧವಾರ ರೈತಸಂಘ ಹಮ್ಮಿಕೊಂಡಿದ್ದ ಮಂಡ್ಯ ಜಿಲ್ಲಾಧಿಕಾರಿ ಮುತ್ತಿಗೆ ಕಾರ್ಯಕ್ರಮದ ಸಂದರ್ಭದಲ್ಲಿ ರೈತರನ್ನುದ್ಧೇಶಿಸಿ ಮಾತನಾಡಿ ಅವರು, ನಾವು ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಕೇಳ್ತಿದ್ದೇವೆ, ಬಟ್ಟೆ ಪಿನ್, ಹೇರ್ ಪಿನ್ ಗಳಿಗೆ ಇಂತಿಷ್ಟು ಬೆಲೆ ಅಂತ ನಿಗದಿ ಆಗಿದೆ, ಆದರೆ ರೈತರು ಬೆಳೆದ ಬೆಳೆಗಳಿಗೆ ಯಾಕೆ ಸರ್ಕಾರ ಬೆಲೆ ನಿಗದಿ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಸಿಎಂಗೆ ಧಿಕ್ಕಾರ ಬೇಡ
ಪ್ರತಿಭಟನಾಕಾರರು ಮುಖ್ಯಮಂತ್ರಿ ಸಾಯಲಿ ಎಂದು ಷೋಷಣೆ ಕೂಗಿದಕ್ಕೆ ಪ್ರತಿಕ್ರಿಸಿದ ಸುನೀತಾ ಪುಟ್ಟಣ್ಣಯ್ಯ ಅವರು, ನಮ್ಮ ಹೋರಾಟ ಸರ್ಕಾರದ ವಿರುದ್ಧವೇ ಹೊರತು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧವಲ್ಲ, ಅವರಿಗೂ ಹೆಂಡತಿ, ಮಕ್ಕಳು ಇದ್ದಾರೆ, ಅವರು ಚೆನ್ನಾಗಿರಲಿ ಎಂದು ಕಾರ್ಯಕರ್ತರ ನಡೆಯನ್ನು ತಿದ್ದಿದರು. ಇದು ಅಲ್ಲಿ ಸೇರಿದ್ದವರ ಮೆಚ್ಚುಗೆಗೆ ಪಾತ್ರವಾಯಿತು, ರೈತರು ಇದನ್ನು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.
ಕಬ್ಬು-ಭತ್ತ ಬೆಳೆದವರಿಗೆ ಅರ್ಧ ಬೆಲೆ ಸಿಕ್ತಿಲ್ಲ
ಕಬ್ಬು ಭತ್ತ ಬೆಳೆದ ರೈತರಿಗೆ ಅವರು ವೆಚ್ಚ ಮಾಡಿದ ಹಣದಲ್ಲಿ ಅರ್ಧ ಬೆಲೆ ಸಿಗ್ತಿಲ್ಲ, ಹಾಗಾಗಿ ಆರ್ಥಿಕವಾಗಿ ದಿವಾಳಿಯಾಗಿದ್ದಾನೆ. ಪ್ರಧಾನಿ ಮೋದಿ ಅವರು ಕೇವಲ 2,000 ಸಾವಿರ ರೂ.ಗಳನ್ನು ಬ್ಯಾಂಕ್ ಖಾತೆಗೆ ಹಾಕಿ, ರೈತರ ಕಣ್ಣೊರೆಸುವ ತಂತ್ರ ಮಾಡ್ತಿದ್ದಾರೆ ಎಂದು ಸಮರ್ಥನಾ ಮಹಿಳಾ ಸಂಘಟನೆಯ ಮುಖಂಡರಾದ ನಾಗರೇವಕ್ಕ ದೂರಿದರು.
ಅಂಬಾನಿ, ಅದಾನಿ ಅವರಿಗೆ ಅನುಕೂಲ ಮಾಡಿ ಕೊಡುವ ಕೇಂದ್ರ ಸರ್ಕಾರ, ರೈತರ ಪರವಾಗಿ ಏಕೆ ಕೆಲಸ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.