ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಅವರು ಆಪಾದಿತ ಮದ್ಯದ ಹಗರಣದ ಬಗ್ಗೆ ಭಾರತೀಯ ಜನತಾ ಪಕ್ಷದ ವಿರುದ್ಧ ವಾಗ್ಧಾಳಿಯನ್ನು ನಡೆಸಿದ್ದು, ಬಿಜೆಪಿ ಸ್ವತಂತ್ರ ಭಾರತದ ಅತ್ಯಂತ ಭ್ರಷ್ಟ ಪಕ್ಷವಾಗಿದೆ, ದೆಹಲಿ ಲೆಫ್ಟಿನೆಂಟ್ ಗವರ್ನರ್, ಬಿಜೆಪಿ ನಾಯಕರನ್ನು ಪ್ರಕರಣದಲ್ಲಿ ಜೈಲಿಗಟ್ಟಬೇಕು ಎಂದು ಹೇಳಿದ್ದಾರೆ.
ಈಗ ರದ್ದಾದ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನಿನಿಂದ ಹೊರಗಿರುವ ಸಂಜಯ್ ಸಿಂಗ್, ಬಿಜೆಪಿ ಖಾತೆಯಲ್ಲಿ 55 ಕೋಟಿ ಹಣದ ಜಾಡು ಪತ್ತೆಯಾಗಿದೆ ಎಂದು ಆರೋಪಿಸಿದ್ದಾರೆ.
ನವದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ‘ಉಪವಾಸ ದಿವಸ್’ ಕಾರ್ಯಕ್ರಮದಲ್ಲಿ ಮಾತನಾಡಿದ ಎಎಪಿ ನಾಯಕ ಸಂಜಯ್ ಸಿಂಗ್, ಪ್ರಕರಣದಲ್ಲಿ ಬಂಧಿತರಾಗಿರುವ ಅರಬಿಂದೋ ಫಾರ್ಮಾದ ನಿರ್ದೇಶಕ ಮತ್ತು ಪ್ರವರ್ತಕ ಶರತ್ ಚಂದ್ರ ರೆಡ್ಡಿ ಅವರು ನೀಡಿದ ದೇಣಿಗೆಯನ್ನು ಉಲ್ಲೇಖಿಸಿದ್ದಾರೆ, ನಂತರ ರೆಡ್ಡಿ ಪ್ರಕರಣದಲ್ಲಿ ಅನುಮೋದಿತರಾಗಿ ಜಾಮೀನು ಪಡೆದಿದ್ದಾರೆ. ದೆಹಲಿಯ ಲೆಪ್ಟಿನೆಂಟ್ ಗವರ್ನರ್ಗೆ ನೈತಿಕತೆ ಇದ್ದರೆ, ಪತ್ರ ಬರೆಯಿರಿ, ಬಿಜೆಪಿ ನಾಯಕರನ್ನು ಕಂಬಿ ಹಿಂದೆ ಹಾಕಿ, ಅವರು ಮದ್ಯದ ಹಗರಣವನ್ನು ಮಾಡಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.
ಬಿಜೆಪಿಯನ್ನು ಸ್ವತಂತ್ರ ಭಾರತದ ಅತ್ಯಂತ ಭ್ರಷ್ಟ ಪಕ್ಷ ಎಂದು ಕರೆದಿರುವ ಸಂಜಯ್ ಸಿಂಗ್, ‘ಮೋದಿ ಕಿ ಗ್ಯಾರಂಟಿ’ ಎಂಬ ಘೋಷಣೆಯನ್ನು ಲೇವಡಿ ಮಾಡಿದ್ದಾರೆ. ಎಲ್ಲಾ ಭ್ರಷ್ಟ ನಾಯಕರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ಭರವಸೆಯನ್ನು ಮೋದಿ ನೀಡುತ್ತಾರೆ ಎಂದು ಹೇಳಿದ್ದಾರೆ.
ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಕೇಜ್ರಿವಾಲ್ ರಾಜೀನಾಮೆ ನೀಡಬೇಕು ಎಂಬ ಬಿಜೆಪಿಯ ಬೇಡಿಕೆಯನ್ನು ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ತಿರಸ್ಕರಿಸಿದ್ದು, ಪ್ರಾಮಾಣಿಕ ಮುಖ್ಯಮಂತ್ರಿಯನ್ನು ಸುಳ್ಳು ಆರೋಪದ ಮೇಲೆ ಜೈಲಿಗೆ ಹಾಕಿದರೆ ಅವರು ರಾಜೀನಾಮೆ ಸಲ್ಲಿಸಬೇಕು ಎಂದು ಎಲ್ಲಿ ಬರೆಯಲಾಗಿದೆ ಎಂಬುದನ್ನು ನನಗೆ ತೋರಿಸಿ. ಕಳೆದ ಒಂದು ವರ್ಷದಿಂದ ಎಎಪಿ ನಾಯಕರಿಗೆ ಜಾಮೀನು ಸಿಗುತ್ತಿಲ್ಲ ಎಂದು ಸಿಂಗ್ ಹೇಳಿದ್ದಾರೆ.
ಎಎಪಿ ಪಕ್ಷದ ರಾಷ್ಟ್ರೀಯ ಸಂಚಾಲಕರೂ ಆಗಿರುವ ಅರವಿಂದ್ ಕೇಜ್ರಿವಾಲ್ ಅವರ ಬಂಧನವನ್ನು ವಿರೋಧಿಸಿ ಎಎಪಿಯ ಉನ್ನತ ನಾಯಕರು ಭಾನುವಾರ ಜಂತರ್ ಮಂತರ್ನಲ್ಲಿ ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಇದಲ್ಲದೆ ಏಕಕಾಲದಲ್ಲಿ ಭಾರತದ 25 ರಾಜ್ಯಗಳಲ್ಲಿ ಮತ್ತು ನ್ಯೂಯಾರ್ಕ್, ಬೋಸ್ಟನ್, ಟೊರೊಂಟೊ, ವಾಷಿಂಗ್ಟನ್ ಡಿಸಿ, ಮೆಲ್ಬೋರ್ನ್ ಮತ್ತು ಲಂಡನ್ ಸೇರಿದಂತೆ ಪ್ರಮುಖ ಅಂತರಾಷ್ಟ್ರೀಯ ಕೇಂದ್ರಗಳಲ್ಲಿ ಎಎಪಿ ಬೆಂಬಲಿಗರು ಸಾಮೂಹಿಕ ಉಪವಾಸದ ಮೂಲಕ ಕೇಜ್ರಿವಾಲ್ಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಲಿದ್ದಾರೆ ಎಂದು ಎಎಪಿ ನಾಯಕರು ತಿಳಿಸಿದ್ದಾರೆ.