ಗುವಾಹಟಿಯ ಬಿಜೆಪಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ತ್ರಿವರ್ಣ ಧ್ವಜವನ್ನು ತಲೆಕೆಳಗಾಗಿ ಹಾರಿಸಿದ ಆರೋಪದ ಮೇಲೆ ಅಸ್ಸಾಂ ರಾಜ್ಯದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಅಸ್ಸಾಂನ ನಾಗಾಂವ್ ಜಿಲ್ಲೆಯ ಮೂವರು ವ್ಯಕ್ತಿಗಳು ರಾಜ್ಯ ಬಿಜೆಪಿ ಮುಖ್ಯಸ್ಥ ಭಬೇಶ್ ಕಲಿತಾ ವಿರುದ್ಧ ದೂರು ದಾಖಲಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ. ತಕ್ಷಣವೇ ಈ ಬಗ್ಗೆ ತನಿಖೆಗೆ ಒತ್ತಾಯಿಸಿ ದೂರು ದಾಖಲಿಸಿದ್ದಾರೆ.
ತ್ರಿವರ್ಣ ಧ್ವಜ ತಲೆಕೆಳಗಾಗಿ ಇರಿಸಿರುವುದು ಬಿಜೆಪಿ ನಾಯಕರಿಗೆ ತಿಳಿದಿತ್ತು ಆದರೂ ಅವರು ಧ್ವಜಾರೋಹಣ ಮಾಡಿದ್ದಾರೆ ಎಂದು ದೂರುದಾರರು ಹೇಳಿದ್ದಾರೆ.
ಈ ಘಟನೆಯ ಕೆಲವು ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.ನಾಗಾವ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ನಬನೀತ್ ಮಹಂತ ಅವರು ಈ ಕುರಿತು ಪ್ರತಿಕ್ರಿಯಿಸಿ, ಘಟನೆ ಬಗ್ಗೆ ದೂರನ್ನು ಸ್ವೀಕರಿಸಿದ್ದೇವೆ, ಆದರೆ ಘಟನೆಯು ತಮ್ಮ ವ್ಯಾಪ್ತಿಯಲ್ಲದ ಗುವಾಹಟಿಯಲ್ಲಿ ನಡೆದಿರುವುದರಿಂದ ಯಾವುದೇ ಪ್ರಕರಣವನ್ನು ದಾಖಲಿಸಲಾಗಿಲ್ಲ ಎಂದು ಹೇಳಿದ್ದಾರೆ.
ಘಟನೆ ಬಗ್ಗೆ ಮೂವರು ಸ್ಥಳೀಯರು ದೂರು ದಾಖಲಿಸಿದ್ದಾರೆ. ನಾವು ಇದನ್ನು ಗುವಾಹಟಿಗೆ ಠಾಣೆಗೆ ರವಾನಿಸಿದ್ದೇವೆ ಏಕೆಂದರೆ ದೂರುದಾರರ ಪ್ರಕಾರ ಘಟನೆ ಅಲ್ಲಿ ಸಂಭವಿಸಿದೆ ಎಂದು ಎಸ್ಪಿ ಹೇಳಿದ್ದಾರೆ.
ಈ ಬಗ್ಗೆ ಅಸ್ಸಾಂ ಬಿಜೆಪಿ ಪ್ರತಿಕ್ರಿಯೆ ನೀಡಿದ್ದು, ಕಾರ್ಯಕರ್ತರಿಗೆ ಧ್ವಜಾರೋಹಣ ಸಿದ್ಧತೆಯ ಜವಾಬ್ಧಾರಿ ನೀಡಲಾಗಿತ್ತು. ರಾಜ್ಯಾಧ್ಯಕ್ಷರಿಗೆ ತ್ರಿವರ್ಣ ಧ್ವಜ ತಲೆಕೆಳಗಾಗಿರುವುದು ತಿಳಿದಿಲ್ಲ. ತಪ್ಪು ಕಂಡಾಗ ತಕ್ಷಣ ಸರಿಪಡಿಸಲಾಗಿದೆ ಎಂದು ಹೇಳಿದ್ದಾರೆ.