ಬೈಕ್ ರ್ಯಾಲಿ ಮೂಲಕ ಕಾವೇರಿ ನದಿಗೆ ರಕ್ತತರ್ಪಣ ಮಾಡಲು ಬಂದ ಹೋರಾಟಗಾರರಿಂದ ರಕ್ತದ ಬಾಟಲ್ ಗಳನ್ನು ಕಿತ್ತುಕೊಂಡ ಪೊಲೀಸರು, ಅವರನ್ನು ವಾಪಸ್ ಕಳಿಸಿದ ಘಟನೆ ಮಳವಳ್ಳಿಯಲ್ಲಿ ನಡೆದಿದೆ.
ತಮಿಳುನಾಡಿಗೆ ಕಳೆದ 15 ದಿನಗಳಿಂದ ಕಾವೇರಿ ನದಿನೀರು ಬಿಡುಗಡೆ ಮಾಡುತ್ತಿರುವುದನ್ನು ಖಂಡಿಸಿ, ಮಾಜಿ ಶಾಸಕ ಡಾ.ಕೆ. ಅನ್ನದಾನಿ ನೇತೃತ್ವದಲ್ಲಿ ರಕ್ತ ಚಳುವಳಿ ಹೋರಾಟವನ್ನು ಮಳವಳ್ಳಿ ಪಟ್ಟಣದ ಅನಂತ ರಾಮ್ ವೃತ್ತದ ಬಳಿ ಪ್ರತಿಭಟನೆಕಾರರು ಹಾಗೂ ಹೋರಾಟಗಾರರ ಮೂಲಕ ರಕ್ತ ಸಂಗ್ರಹಿಸಿ ಕಾವೇರಿ ನದಿಗೆ ಸುರಿಯಲು ಬೈಕ್ ರ್ಯಾಲಿಯ ಮೂಲಕ ಗ್ರಾಮಗಳ ಮೂಲಕ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ಇರುವ ಸೇತುವೆ ಬಳಿ ಆಗಮಿಸಿದರು.
ಮಾಜಿ ಶಾಸಕ ಡಾ.ಕೆ.ಅನ್ನದಾನಿ ಹಾಗೂ ಪ್ರತಿಭಟನೆಕಾರರು ಸತ್ತೇಗಾಲ ಸೇತುವೆ ಬಳಿ ತೆರಳಲು ಯತ್ನಿಸಿದ ವೇಳೆ ಪೊಲೀಸರು ಬ್ಯಾರಿಕೇಟ್ ಹಾಕಿ ತಡೆದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಹಾಗೂ ಡಿವೈಎಸ್ಪಿ ಸೋಮೇಗೌಡ ನಡುವೆ ಮಾತಿನ ಚಕಮಕಿ ನಡೆಯಿತು.
ನಾವು ರಕ್ತ ಚಳುವಳಿ ನಡೆಸಿ ರಕ್ತವನ್ನು ನೀರಿನ ಜೊತೆಗೆ ನದಿಗೆ ಹರಿಸುತ್ತೇವೆ ಬಿಡಿ ಎಂದು ಮಾಜಿ ಶಾಸಕರು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಸೋಮೇಗೌಡ ನದಿಗೆ ರಕ್ತ ಹಾಕುವುದರಿಂದ ನೀರು ಕಲುಷಿತವಾಗುತ್ತದೆ, ಅದಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ಬಳಿಕ ಪ್ರತಿಭಟನಾಕಾರರು ಟಿಎಂಸಿ ಗಟ್ಟಲೇ ನೀರು ಹೋಗಿದೆ ಕೆಆರ್ ಎಸ್ ಬರಿದಾಗುತ್ತಿದೆ, ಇದನ್ನು ಯಾರು ತಡೆಯುತ್ತಿಲ್ಲ, ನಮ್ಮ ರಕ್ತ ಕೊಡ್ತೀವಿ ಅಂದ್ರೆ ತಡೆಯಲು ಬರ್ತೀರಾ ? ಎಂದು ಹೋರಾಟಗಾರರು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಹೋರಾಟಗಾರರ ನಡುವೆ ತಳ್ಳಾಟ ನೂಕಾಟ ನಡೆಯಿತು. ಬಳಿಕ ಹೋರಾಟಗಾರರ ಬಳಿ ಇದ್ದ ರಕ್ತದ ಬಾಟಲನ್ನು ಪೊಲೀಸರು ಕಿತ್ತುಕೊಂಡು ವಾಪಸ್ ಕಳಿಸಿದರು.
ರಾಜ್ಯಸರ್ಕಾರ ಮತ್ತು ಕಾವೇರಿ ಪ್ರಾಧಿಕಾರದ ವಿರುದ್ದ ಘೋಷಣೆ ಮೊಳಗಿಸಿದ ಹೋರಾಟಗಾರರು, ‘ರಕ್ತ ಕೊಟ್ಟೆವು ನೀರು ಕೊಡಲ್ಲ’ ಎಂಬ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಪ್ರಶಾಂತ್, ನಂದಕುಮಾರ್, ಸಿದ್ದರಾಜು,ನಾಗೇಶ್. ನೂರೂಲ್ಲ, ಜಯಸಿಂಹ, ಜಯಕರ್ನಾಟಕ ಜನಪರ ವೇದಿಕೆ ತಾಲೂಕು ಅಧ್ಯಕ್ಷ ಎಂ.ಪಿ.ನಾಗೇಶ್, ನಾಗರಾಜು .ಅನಂತ್, ಶಂಕರೇಗೌಡ, ಶ್ರೀಧರ್, ನಾರಾಯಣ, ರಾಜಣ್ಣ ಸೇರಿದಂತೆ ಮತ್ತಿತರರಿದ್ದರು.