ಮಂಡ್ಯ ತಾಲ್ಲೂಕಿನ ತಂಗಳಗೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಕಿಶೋರ್ ಹೆಚ್.ಇ (14 ) ಕಾಣೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬುಧವಾರ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆಯಿತು.
ಆಯೋಗದ ಅಧ್ಯಕ್ಷೆ ಜಯಶ್ರೀ, ಬೆಂಗಳೂರಿನ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಇಲ್ಲಿನ ಕಾನೂನು ಸಲಹೆಗಾರರಾದ ಗೀತಾ ವಸತಿ ಶಾಲೆಗೆ ಭೇಟಿ ನೀಡಿದರು.
ಜಯಶ್ರೀ ಅವರು ಶಾಲೆಯ ಪ್ರಾಂಶುಪಾಲರಿಂದ ಕಾಣೆಯಾಗಿರುವ ಕಿಶೋರ್ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಮಕ್ಕಳ ವಿಚಾರವಾಗಿ ಯಾವುದೇ ನಿರ್ಲಕ್ಷ್ಯೆ ಮಾಡಬಾರದು ಎಂದರು.
ಈ ಪ್ರಕರಣದ ಬಗ್ಗೆ ಮಂಡ್ಯದ ಡಿವೈಎಸ್ಪಿ ಶಿವಮೂರ್ತಿ ಅವರಿಂದ ಮಾಹಿತಿ ಪಡೆದು ಅತಿ ಶೀಘ್ರವಾಗಿ ಬಾಲಕನನ್ನು ಪತ್ತೆ ಹಚ್ಚವಂತೆ ತಿಳಿಸಿದರು.
ನಂತರ ಶಾಲೆಯ ಮಕ್ಕಳೊಂದಿಗೆ ಮಾತನಾಡಿ, ಕಿಶೋರ್ ಬಗ್ಗೆ ಇರುವ ಅಭಿಪ್ರಾಯಗಳನ್ನು ಪಡೆದರು, ಮಕ್ಕಳು ಯಾವುದೇ ಭಯ ಆತಂಕಕ್ಕೆ ಒಳಗಾಗದೆ ವಿದ್ಯಾಭ್ಯಾಸದ ಕಡೆ ಗಮನ ಹರಿಸಬೇಕೆಂದು ತಿಳಿಸಿದರು.
ಯಾವುದೇ ರೀತಿಯ ತೊಂದರೆಗಳು ಅಥವಾ ಸಮಸ್ಯೆಗಳು ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ 1098 ಹಾಗೂ ಪೋಲಿಸ್ ಸಹಾಯವಾಣಿ 112 ಕರೆ ಮಾಡಿ ಮಾಹಿತಿ ನೀಡಬಹುದು ಎಂದು ತಿಳಿಸಿದರು.
ಕಾಣಿಯಾದ ಬಾಲಕನ ಪೋಷಕರಾದ ಈರೇಗೌಡ, ಸುರೇಶ್, ಬೆಟ್ಟಮ್ಮ ಅವರಿಗೆ ಬಾಲಕನ ಪತ್ತೆಗಾಗಿ ಪೊಲೀಸರು ವಿಶೇಷ ಕ್ರಮ ವಹಿಸಿರುವ ಬಗ್ಗೆ ತಿಳಿಸಿ, ಸಾಂತ್ವನ ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಂಗೇಗೌಡ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರಸ್ವಾಮಿ , ರಾಜೇಂದ್ರ, ಆಪ್ತ ಸಮಾಲೋಚಕರಾದ ಸುಷ್ಮಾ, ಸರ್ಕಲ್ ಇನ್ಸ್ ಪೆಕ್ಟರ್ ಕ್ಯಾತೇಗೌಡ, ಎಸ್ಐ ರಾಮಚಂದ್ರ ನಾಯಕ, ಎಎಸ್ಐ ಕಾಳಯ್ಯ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಬಿಇಒ ಸೌಭಾಗ್ಯ ಉಪಸ್ಥಿತರಿದ್ದರು.