ಐದು ವರ್ಷದ ಬಾಲಕಿಯನ್ನು ಮನೆಯಿಂದ ಅಪಹರಿಸಿದ ವಲಸೆ ಕಾರ್ಮಿಕನೊಬ್ಬ ಅಮಾನುಷವಾಗಿ ಅತ್ಯಾಚಾರವೆಸಗಿ, ಕತ್ತು ಹಿಸುಕಿ ಕೊಂದ ಆಘಾತಕಾರಿ ಘಟನೆ ಕೇರಳದ ಕೊಚ್ಚಿಯಲ್ಲಿ ಶುಕ್ರವಾರದಂದು ನಡೆದಿದೆ.
ಶನಿವಾರ ಆಲುವಾದಲ್ಲಿನ ಸ್ಥಳೀಯ ಮಾರುಕಟ್ಟೆಯ ಹಿಂಭಾಗದ ಜವುಗು ಪ್ರದೇಶದಲ್ಲಿ ಗೋಣಿಚೀಲದಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಬಳಿಕ ಅಪ್ರಾಪ್ತ ಬಾಲಕಿಯ ಮೇಲೆ ಅಮಾನುಷವಾಗಿ ಅತ್ಯಾಚಾರ ಎಸಗಿ, ಕತ್ತು ಹಿಸುಕಿ ಕೊಲೆ ಮಾಡಿರುವುದು ದೃಢಪಟ್ಟಿದೆ
ಶುಕ್ರವಾರ ಬಾಲಕಿ ನಾಪತ್ತೆಯಾಗಿದ್ದು, ಆ ವ್ಯಕ್ತಿಯನ್ನು ತಡರಾತ್ರಿಯೇ ಬಂಧಿಸಲಾಗಿದೆ.
”ಈ ಬಗ್ಗೆ ಶುಕ್ರವಾರ ರಾತ್ರಿ 7.10 ಕ್ಕೆ ದೂರನ್ನು ಸ್ವೀಕರಿಸಿದ್ದೇವೆ ಮತ್ತು ಶುಕ್ರವಾರ ರಾತ್ರಿ 8 ಗಂಟೆಗೆ ಮೊದಲು ಎಫ್ಐಆರ್ ದಾಖಲಿಸಲಾಗಿದೆ. ನಮ್ಮ ತಂಡವು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿತು ಮತ್ತು ಮಗು ಕಾರ್ಮಿಕನೊಂದಿಗೆ ಇರುವುದು ಕಂಡುಬಂದಿದೆ. ನಾವು ಅವನನ್ನು ರಾತ್ರಿ 9.30 ಕ್ಕೆ ಬಂಧಿಸಿದ್ದೇವೆ. ಆದರೆ, ಅವನು ಕುಡಿದ ಮತ್ತಿನಲ್ಲಿದ್ದನು ಆದರೆ ಮಗು ಅವನೊಂದಿಗೆ ಇರಲಿಲ್ಲ” ಎಂದು ಎರ್ನಾಕುಲಂ ಗ್ರಾಮಾಂತರ ಎಸ್ಪಿ, ವಿವೇಕ್ ಕುಮಾರ್ ತಿಳಿಸಿದ್ದಾರೆ.
ಮಗುವಿನ ಕುಟುಂಬ ವಾಸಿಸುತ್ತಿದ್ದ ಕಟ್ಟಡದ ಮೊದಲ ಮಹಡಿಯ ಕೊಠಡಿಯಲ್ಲಿ ತಂಗಿದ್ದ ಬಿಹಾರ ಮೂಲದ ಕಾರ್ಮಿಕನನ್ನು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ರಾತ್ರಿ ಮದ್ಯದ ಅಮಲಿನಲ್ಲಿದ್ದ ಆರೋಪಿಯನ್ನು ವಿಚಾರಣೆಗೊಳಪಡಿಸುವುದು ಮತ್ತು ವಿವರಗಳನ್ನು ಸಂಗ್ರಹಿಸುವುದು ಕಷ್ಟಕರವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
”ಇಂದು ಬೆಳಿಗ್ಗೆ, ಆತ ಅಪರಾಧವನ್ನು ಒಪ್ಪಿಕೊಂಡಿದ್ದು, ಆದರೆ, ಅವರು ತನಿಖಾ ತಂಡವನ್ನು ದಾರಿತಪ್ಪಿಸಲು ಪ್ರಯತ್ನಿಸಿದರು” ಎಂದು ಕೊಚ್ಚಿ ರೇಂಜ್ ಡಿಐಜಿ ಶ್ರೀನಿವಾಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಶುಕ್ರವಾರ ಮುಂಜಾನೆ ಮಾರುಕಟ್ಟೆ ಪ್ರದೇಶದ ಬಳಿ ವಲಸೆ ಕಾರ್ಮಿಕರೊಂದಿಗೆ ಮಗುವನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಸ್ಥಳೀಯರೊಂದಿಗೆ ಸೇರಿ ಶೋಧ ನಡೆಸಿ ಬಾಲಕಿಯ ಶವವನ್ನು ಹೊರತೆಗೆದಿದ್ದಾರೆ.
ಮಾರುಕಟ್ಟೆ ಹಿಂಭಾಗದ ಜಮೀನು ಪ್ರತ್ಯೇಕ ಪ್ರದೇಶವಾಗಿದ್ದು, ತ್ಯಾಜ್ಯ ಸುರಿಯುವ ಸ್ಥಳವಾಗಿದೆ ಎಂದು ಜನರು ಹೇಳಿದರು. ಈ ಪ್ರದೇಶದಲ್ಲಿ ಸಮಾಜ ವಿರೋಧಿಗಳು ಹೆಚ್ಚಾಗಿ ಓಡಾಡುತ್ತಿದ್ದು, ಮದ್ಯ ಮತ್ತು ಮಾದಕ ವಸ್ತುಗಳ ಸೇವನೆ ವಿಪರೀತವಾಗಿದೆ ಎಂದು ಅವರು ಹೇಳಿದರು.
ಶುಕ್ರವಾರ ಮಗುವಿನೊಂದಿಗೆ ವಲಸೆ ಕಾರ್ಮಿಕನನ್ನು ನೋಡಿದ್ದೇನೆ ಎಂದು ಸ್ಥಳೀಯ ಕಾರ್ಮಿಕ ಸಂಘದ ಕಾರ್ಯಕರ್ತರೊಬ್ಬರು ಮಾಧ್ಯಮಗಳಿಗೆ ತಿಳಿಸಿದರು.
”ಹುಡುಗಿ ಯಾರು ಎಂದು ನಾನು ಅವರನ್ನು ಕೇಳಿದೆ, ಅದು ತನ್ನ ಮಗು ಎಂದು ಹೇಳಿಕೊಂಡಿದ್ದಾನೆ ಮತ್ತು ಅವನು ಮದ್ಯ ಸೇವಿಸಲು ಮಾರುಕಟ್ಟೆ ಪ್ರದೇಶದ ಹಿಂದೆ ಹೋಗುತ್ತಿದ್ದೇನೆ ಎಂದು ಹೇಳಿದನು. ಆದರೆ, ಇಂದು ಬೆಳಿಗ್ಗೆ ನಾನು ಕಾಣೆಯಾದ ಮಗು ಮತ್ತು ಕಾರ್ಮಿಕನ ಸಿಸಿಟಿವಿ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ” ಎಂದು ಯೂನಿಯನ್ ಕಾರ್ಯಕರ್ತ ಹೇಳಿದರು.
ಈ ಮಧ್ಯೆ ಕೇರಳ ಪೊಲೀಸರು ಶನಿವಾರ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳಲ್ಲಿ ಸಂತ್ರಸ್ತೆಯ ಕುಟುಂಬಕ್ಕೆ ಕ್ಷಮೆಯಾಚನೆ ಮಾಡಿ, ಮಗುವನ್ನು ಆಕೆಯ ಪೋಷಕರೊಂದಿಗೆ ಮತ್ತೆ ಸೇರಿಸುವ ಪ್ರಯತ್ನಗಳು ವಿಫಲವಾಗಿದೆ ಎಂದು ವಿಷಾದಿಸಿ ಪೋಸ್ಟ್ ಮಾಡಿದ್ದರು.
ಪ್ರತಿಪಕ್ಷ ಕಾಂಗ್ರೆಸ್ ಪಕ್ಷವು ರಾಜ್ಯ ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಮಗುವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರಿಂದ ಲೋಪವಾಗಿದೆ ಎಂದು ಆರೋಪಿಸಿದೆ.
ಅಸೆಂಬ್ಲಿ ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಮಾತನಾಡಿ, ”ಮಗು ಆಲುವಾ ಪಟ್ಟಣದಲ್ಲೇ ಇದ್ದು ಸಮಯಕ್ಕೆ ಸರಿಯಾಗಿ ಪತ್ತೆಯಾಗಲಿಲ್ಲ. ಆರೋಪಿಗಳು ಮಗುವನ್ನು ಅಪಹರಿಸಿದ್ದಾರೆ ಎಂಬುದು ಸ್ಪಷ್ಟವಾದ ನಂತರವೂ ಪೊಲೀಸರು ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ” ಎಂದು ದೂರಿದ್ದಾರೆ.
”ಇತ್ತೀಚಿನ ದಿನಗಳಲ್ಲಿ ಮಕ್ಕಳು ಸುರಕ್ಷಿತವಾಗಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮಾದಕ ದ್ರವ್ಯ ಮತ್ತು ಮದ್ಯದ ಅತಿಯಾದ ಬಳಕೆ ಈ ಅಪರಾಧಕ್ಕೆ ಕಾರಣವಾಯಿತು ಎಂದು ಪೊಲೀಸರು ಪ್ರತಿಪಾದಿಸುತ್ತಾರೆ” ಎಂದು ಸತೀಶನ್ ಹೇಳಿದರು.
”ಸಮಾಜದಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ಬಳಕೆಯನ್ನು ನಿಯಂತ್ರಿಸಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದ ಅವರು, ಎಡ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ. ಮಗುವಿನ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ಒತ್ತಾಯಿಸಿದರು.