ಬಹುಜನ ಸಮಾಜ ಪಾರ್ಟಿಯಿಂದ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಪಕ್ಷದ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಅವರು ನೀಡಿರುವ ಆಹ್ವಾನವನ್ನು ಮಂಡ್ಯದ ಪ್ರಗತಿಪರ ವಕೀಲರೆಂದೇ ಖ್ಯಾತರಾಗಿರುವ ಬಿ.ಟಿ.ವಿಶ್ವನಾಥ್ ಅಷ್ಟೇ ನಯವಾಗಿ ತಿರಸ್ಕರಿಸಿದ್ದು, ಇದಕ್ಕೆ ಅವರದೇ ಆದ ಕಾರಣಗಳನ್ನು ನೀಡಿದ್ದಾರೆ.
(ನ್ಯಾಯವಾದಿ ಬಿ.ಟಿ.ವಿಶ್ವನಾಥ್ ಅವರು ಬಿಎಸ್ಪಿ ರಾಜ್ಯಾಧ್ಯಕ್ಷರಿಗೆ ಬರೆದ ಪತ್ರವನ್ನು ಯಥಾಪ್ರಕಾರ ಪ್ರಕಟಿಸಲಾಗಿದೆ)
ಗೌರವಾನ್ವಿತ
ಕೃಷ್ಣಮೂರ್ತಿಯವರು
ರಾಜ್ಯಾಧ್ಯಕ್ಷರು
ಬಹುಜನ ಸಮಾಜವಾದಿ ಪಾರ್ಟಿ
ಕರ್ನಾಟಕ ರಾಜ್ಯ
ಮಾನ್ಯರೇ
ತಾವು ಖುದ್ದಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ವತಿಯಿಂದ ಮಂಡ್ಯ ಜಿಲ್ಲೆಯ ಅಭ್ಯರ್ಥಿಯಾಗಲು ಆಹ್ವಾನಿಸಿ ಪ್ರತಿಕ್ರಿಯಿಸಲು ಸಮಯ ತೆಗೆದುಕೊಳ್ಳಲು ಕೇಳಿದ್ದಿರಿ. ಸಂಘಟನೆಗಳ ಜೊತೆಗೆ .. ನನ್ನ ನಿರಂತರ ಸ್ಪಂದನೆಯನ್ನು ಗೌರವಿಸಿ ನೀವು ನನ್ನನ್ನು ಆಹ್ವಾನಿಸಿರಬಹುದು, ಆ ವಿಚಾರಕ್ಕೆ ಸಂಬಂಧಿಸಿದಂತೆ ಮೊದಲಿಗೆ ಆಹ್ವಾನಿಸಿದ್ದಕ್ಕೆ ನಾನು ನಿಮಗೆ ತುಂಬಾ ಆಭಾರಿ.
ಕರ್ನಾಟಕದ 7.17 ಕೋಟಿ ಜನಸಂಖ್ಯೆಯ ಪೈಕಿ ಮಂಡ್ಯ ಜಿಲ್ಲೆಯ ಸುಮಾರು 14 ಲಕ್ಷ ಚಿಲ್ಲರೆ ಜನರ ಪೈಕಿ ನನ್ನನ್ನು ಆ ಸ್ಥಾನಕ್ಕೆ ನಿಲ್ಲಬಲ್ಲವರ ಪೈಕಿ ಯೋಗ್ಯನೆಂದು ಅರ್ಹನೆಂದು ತಮ್ಮ ಪಕ್ಷ ಭಾವಿಸಿದಕ್ಕೆ ಗುರುತಿಸಿದ್ದಕ್ಕೆ ನಾನು ತಮ್ಮ ಪಕ್ಷವನ್ನು ಎಷ್ಟು ಕೊಂಡಾಡಿದರು ಕಡಿಮೆಯೇ. ಉಳಿದ ಪಕ್ಷಗಳು ಬ್ರಿಫ್ ಕೇಸ್ ಇತ್ತವರಿಗೆ ಅಡ್ಡ ದಾರಿಯಲ್ಲಿ ದುಡ್ಡು ಮಾಡಿದವರಿಗೆ ಅಭ್ಯರ್ಥಿಯಾಗಲು ಮಣೆ ಹಾಕುತ್ತಿರುವಾಗ ನಿಮ್ಮ ಪಕ್ಷದ ನಡೆ ಶ್ಲಾಘನೀಯ ಅನ್ನಿಸುತ್ತದೆ ನನಗೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಳಿವಿಗೆ ಅನುಕರಣಿಯ ಮಾದರಿ ಎನಿಸುತ್ತದೆ.
ಆದರೆ ಪ್ರಸ್ತುತ ರಾಜಕೀಯ ಸಂದರ್ಭದಲ್ಲಿ ಭ್ರಷ್ಟ ಕೋಮುವಾದಿ ಬಿಜೆಪಿಯಿಂದಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗೆ ನ್ಯಾಯಾಂಗದ ಸಾರ್ವಭೌಮತ್ವಕ್ಕೆ ಧಕ್ಕೆಯಾಗುತ್ತಿದೆ ಎಂದು ರಾಷ್ಟ್ರ ಭಾವಿಸುತ್ತಿರುವಾಗ ಹಳೇ ಮೈಸೂರಿನ ಜಿಲ್ಲೆಗಳ ಒಕ್ಕಲಿಗ ಮತ್ತು ಅಹಿಂದ ಮತ ಬುಟ್ಟಿಯನ್ನು ಅಕ್ರಮಿಸಲು ಬಿಜೆಪಿ ತೋರುತ್ತಿರುವ ಆಕ್ರಮಣಶೀಲತೆಯನ್ನು ಅದಕ್ಕೆ ತಾಳ ಹಾಕುತ್ತಿರುವ ಜೆಡಿಎಸ್ ನ ಅವಕಾಶವಾದಿ ಕುಟುಂಬ ರಾಜಕೀಯವನ್ನು ನೋಡಿದಾಗ ನಾನು ಸ್ಪರ್ಧಿಸುವುದರಿಂದ ಪ್ರಗತಿಪರರು ಮತ್ತು ದೇಶಪ್ರೇಮಿಗಳ ಕೋಮುವಾದವನ್ನು ಸೋಲಿಸುವ ಪ್ರಯತ್ನಕ್ಕೆ ಸಮೀಕರಣಕ್ಕೆ ಲೆಕ್ಕಾಚಾರಗಳಿಗೆ ಹಿನ್ನಡೆಯಾಗಬಹುದೆಂಬ ಆತಂಕ ನನ್ನನ್ನು ಕಾಡಿದ್ದರಿಂದ ತಮ್ಮ ಆಹ್ವಾನವನ್ನು ಒಪ್ಪುವುದರಿಂದ ವಿನಯ ಪೂರ್ವಕವಾಗಿ ಹಿಂದೆ ಸರಿಯುತ್ತಿದ್ದೇನೆ.
ತಮ್ಮ ಪಕ್ಷದ ಪ್ರೀತಿ ವಿಶ್ವಾಸಕ್ಕೆ ಅರ್ಹರು ಪ್ರಾಮಾಣಿಕರ ಬದಲು ಅಡ್ಡದಾರಿಯಲ್ಲಿ ಕಾಸು ಮಾಡಿದವರಿಗೆ ಟಿಕೆಟು ಹಂಚುವ ಪಕ್ಷಗಳ ನಡುವೆ ಮೇಲ್ಪಂಕ್ತಿಯ ನಿಲುವು ಪ್ರದರ್ಶಿಸಿದ ತಮ್ಮ ಪಕ್ಷಕ್ಕೆ ನನ್ನನ್ನು ಅಭ್ಯರ್ಥಿಯಾಗಲು ಆಹ್ವಾನಿಸಲು ನಿಮಗೆ ಸಲಹೆ ನೀಡಿದ ಎಲ್ಲಾ ಸಹೃದಯರಿಗೆ ನಾನು ಚಿರಋಣಿಯಾಗಿರುತ್ತೇನೆ.
ನಮಸ್ಕಾರ
ಬಿ.ಟಿ. ವಿಶ್ವನಾಥ್
ವಕೀಲರು ಮತ್ತು ಅಧ್ಯಕ್ಷರು ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ಮಂಡ್ಯ ಜಿಲ್ಲೆ.