ಬುದ್ಧನ ಚಿಂತನೆ- ಅಂಬೇಡ್ಕರ್ ಅವರ ಆಶಯದಂತೆ ನಡೆದೆರೆ ಮಾತ್ರ ಸಮ ಸಮಾಜ ನಿರ್ಮಾಣವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಅಂಬೇಡ್ಕರ್ ವಿವಿದ್ದೋದ್ದೇಶ ಸಹಕಾರ ಸಂಘದ ಮಂಡ್ಯ ತಾಲೂಕು ಅಧ್ಯಕ್ಷ ಗುರುಶಂಕರ್ ಹೇಳಿದರು.
ಮಂಡ್ಯನಗರದ ವಿದ್ಯಾನಗರದ ಎವಿಎಸ್ಎಸ್ ಕಚೇರಿಯಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 67ನೇ ವರ್ಷದ ಪರಿನಿಬ್ಬಾಣ ದಿನ ಪ್ರಯುಕ್ತ ದೀಪ ನಮನ-ಮೆರವಣಿಗೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬದಲಾಗುತ್ತಿರುವ ಸಾಮಾಜಿಕ ಮೌಲ್ಯಗಳು, ಮರೆಯಾಗುತ್ತಿರುವ ಜೀವನ ಕ್ರಮಗಳು, ತಲ್ಲಣಗೊಳ್ಳುತ್ತಿರುವ ಸಿದ್ಧಾಂತಗಳ ರೋಗಕ್ಕೆ ಅಂಬೇಡ್ಕರ್ ವಿಚಾರಧಾರೆಯೇ ಮದ್ದಾಗಿದೆ. ಜನರ ಬದುಕನ್ನು ಹಸನು ಮಾಡಲು ಪ್ರಯತ್ನಿಸಿದ ಭಾರತದ ಏಕೈಕ ಭಾಗ್ಯವಿಧಾತ ಅಂಬೇಡ್ಕರ್ ಎಂದು ಸ್ಮರಿಸಿದರು.
ಎವಿಎಸ್ಎಸ್ ಬ್ಯಾಂಕ್ ಮೂಲಕ ಆರ್ಥಿಕ ಸಬಲೀಕರಣಕ್ಕೆ ಹತ್ತಾರು ಯೋಜನೆಗಳನ್ನು ನೀಡಿದೆ, ಜನತೆ ಸದುಪಯೋಗ ಪಡಸಿಕೊಳ್ಳಬೇಕು, ಗ್ರಾಮೀಣ ಪ್ರದೇಶದಲ್ಲಿರುವ ಸ್ತ್ರೀಶಕ್ತಿ ಸಂಘಗಳು- ಗುಂಪುಗಳು ಸಾಲಗಳನ್ನು ಪಡೆದು, ಆರ್ಥಿಕ ಅಭಿವೃದ್ದಿಗೆ ಮುಂದಾಗಬೇಕೆಂದು ಸಲಹೆ ನೀಡಿದರು.
ದೀಪನಮನ ಮೆರವಣಿಗೆಯು ಅಂಬೇಡ್ಕರ್ ರಸ್ತೆಯಿಂದ ಸಾಗಿ, ಜಿಲ್ಲಾಧಿಕಾರಿ ಕಚೇರಿ ಬಳಿಯ ಉದ್ಯಾನವನದಲ್ಲಿರುವ ಸಂವಿಧಾನ ಶಿಲ್ಪ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆವರೆಗೆ ಸಾಗಿತು, ಪ್ರತಿಮೆ ಬಳಿ ಮೇಣದ ಬತ್ತಿಗಳನ್ನು ಬೆಳಗಿ ನಮನ ಸಲ್ಲಿಸಿದರು. ನಂತರ ಸಂವಿಧಾನ ಪೀಠಿಕೆ ಓದಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಭೌದ್ಧ ಧಮ್ಮ ಮಂತ್ರಘೋಷ ಹಾಗೂ ಅಂಬೇಡ್ಕರ್ ಸ್ಮರಣೆಯ ಹೋರಾಟದ ಗೀತೆಗಳ ಗಾಯನದ ಮೂಲಕ ಗಮನ ಸೆಳೆಯಲಾಯಿತು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅನುಯಾಯಿಗಳಾದ ಆಟೋ ಜಯಶಂಕರ್, ಕುಮಾರ್, ಮುರುಗನ್, ದೀನೇಶ್ ಮತ್ತು ಬ್ಯಾಂಕ್ ಸದಸ್ಯರು ಹಾಜರಿದ್ದರು.