ಮಂಡ್ಯ ಜಿಲ್ಲೆ ಎಲ್ಲಾ ಜೆಡಿಎಸ್ ಶಾಸಕರು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವ ಬದಲು ದಬ್ಬಾಳಿಕೆ, ದೌರ್ಜನ್ಯ ಮತ್ತು ಗೂಂಡಾಗಿರಿ ಮಾಡಿಕೊಂಡು ರಾಜಕೀಯ ಮಾಡುತ್ತಿದ್ಧಾರೆಂದು ಮಂಡ್ಯ ಸಂಸದರಾದ ಸುಮಲತಾ ಅಂಬರೀಶ್ ಕಿಡಿಕಾರಿದರು.
ಮಂಡ್ಯನಗರದ ಜಿಲ್ಲಾ ಫಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (ದಿಶಾ) ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಶಾಸಕರ ವಿರುದ್ಧ ಹರಿಹಾಯ್ದರು.
3 ವರ್ಷಗಳಲ್ಲಿ ಎಷ್ಟು ಸಭೆ ನಡೆಸಿದ್ದೇನೆ, ಯಾವುದೇ ಸಭೆಗಳಿಗೆ ಹಾಜರಾಗದ ಶಾಸಕರು, ಈ ಸಭೆಗೆ ಮಾತ್ರ ಹಾಜರಾಗಿದ್ದಾರೆ, ಇದರಲ್ಲಿ ರಾಜಕೀಯವಿದೆಯೇ ಹೊರತು ಜಿಲ್ಲೆಯ ಅಭಿವೃದ್ಧಿಯ ಉದ್ದೇಶವಿಲ್ಲ ಎಂದು ದಳಪತಿಗಳಿಗೆ ಟಾಂಗ್ ನೀಡಿದರು.
ನಾನು ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ವಿರುದ್ಧ ಧ್ವನಿ ಎತ್ತಿದ ನಂತರ ಶಾಸಕರು, ನನ್ನನ್ನು ಟಾರ್ಗೆಟ್ ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಶಾಸಕರು ಎಂದಾದರೂ ಚರ್ಚೆ ಮಾಡಿದ್ದಾರಾ ?, ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ್ದಾರಾ ? ಆದರೆ ನಾನು ಸಂಸತ್ತಿನಲ್ಲಿ ಜಿಲ್ಲೆಯ ಅಭಿವೃದ್ಧಿಗಾಗಿ ಮಾತನಾಡಿದ್ದೇನೆ ಎಂದು ಸಮರ್ಥಿಸಿಕೊಂಡರು.
ದಿಶಾ ಸಭೆಗೆ ಹಾಜರಾಗಿ ಅಭಿವೃದ್ಧಿಗೆ ಸಹಕರಿಸಲಿ, ಬೇಡ ಎನ್ನುವುದಿಲ್ಲ, ಆದರೆ ಅವರು ಸಭೆಗೆ ಹಾಜರಾಗುವುದೇ ಕೂಗಾಡಿ, ಗೂಂಡಾಗಿರಿ ಮಾಡಿ, ದಬ್ಬಾಳಿಕೆ ನಡೆಸುವುದಕ್ಕಾಗಿಯೇ ಹೊರತು, ಇನ್ಯಾವ ಉದ್ದೇಶವು ಇಲ್ಲ ಎಂದು ಆರೋಪಿಸಿದರು.
ಒಂದೇ ಒಂದು ಅಭಿವೃದ್ಧಿಯ ವಿಚಾರದ ಬಗ್ಗೆ ಚರ್ಚಿಸಿದ ಬಗ್ಗೆ ಅವರ ಬಳಿ ರೆಕಾರ್ಡ್ ಇದ್ದರೆ ತೋರಿಸಲಿ ಎದು ಸವಾಲು ಹಾಕಿದ ಅವರು, ಈ ಶಾಸಕರು ಬಂದಿರೋದು ಇದೊಂದೆ ಸಭೆಗೆ, ಹಿಂದೆ ನಡೆದ ಸಭೆಗಳಿಗೆ ಯಾಕೆ ಇವರು ಬರಲಿಲ್ಲ ? ಎಂದು ಪ್ರಶ್ನಿಸಿದರು.
ಜಿಲ್ಲೆಯ ಮಹಾನ್ ನಾಯಕ ಕೆ.ವಿ.ಶಂಕರೇಗೌಡರ ಪತ್ನಿ ಸುಶೀಲಮ್ಮ ಅವರು ಇಂದು ನಿಧನರಾಗಿದ್ದರಿಂದ ನಾನು ಅವರ ನಿವಾಸಕ್ಕೆ ತೆರಳಿ ಗೌರವ ಸಲ್ಲಿಸಿ ಬರುವುದು ವಿಳಂಬವಾಯಿತು. ಆದ್ದರಿಂದ ದಿಶಾ ಸಭೆ ವಿಳಂಬವಾಗಿ ಆಗಮಿಸಿದ್ದೇನೆ ಎಂದು ಅವರು ಸಮರ್ಥನೆ ನೀಡಿದರು.