ಮೇಲುಕೋಟೆ ವಿಧಾನಸಭಾ ಕ್ಷೇತ್ರದ ನಾರಾಯಣಪುರ ಗ್ರಾಮದ ಮತಗಟ್ಟೆ ಬಳಿ ತಾವು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ್ದೇನೆಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುವುದು ಸತ್ಯಕ್ಕೆ ದೂರವಾದ ವಿಚಾರವಾಗಿದೆ ಎಂದು ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಸ್ಪಷ್ಟಪಡಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ನಾರಾಯಣಪುರ ಮತಗಟ್ಟೆ ಬಳಿ ವ್ಯಕ್ತಿಯೊಬ್ಬನನ್ನು ಕೆಡವಿಕೊಂಡು ಹಲ್ಲೆ ನಡೆಸುತ್ತಿದ್ದ ಸಂದರ್ಭದಲ್ಲಿ ಹಲ್ಲೆ ಮಾಡುತ್ತಿದ್ದ ವ್ಯಕ್ತಿಯ ಕುತ್ತಿಗೆ ಪಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದೇನೆ ಅಷ್ಟೆ, ಆದರೆ ಇದನ್ನೇ ಹಲ್ಲೆ ಕೆಲವರು ಬಿಂಬಿಸಿರುವುದು ಸರಿಯಲ್ಲ, ಒಂದು ವೇಳೆ ನಾನು ಹಲ್ಲೆ ನಡೆಸಿದ್ದೇ ಸತ್ಯವಾದರೆ ಅದರ ವಿಡಿಯೋ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಅಹಿತಕರ ಘಟನೆಗಳು ಸರಿಯಲ್ಲ
ಮೇಲುಕೋಟೆ ಕ್ಷೇತ್ರದಲ್ಲಿ ನಾನು ಹಲವಾರು ಚುನಾವಣೆಗಳನ್ನು ಎದುರಿಸಿದ್ದೇನೆ, ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಹಾಗೂ ನನ್ನ ನಡುವೆ ಆರೋಗ್ಯಕರವಾಗಿ ರಾಜಕೀಯ ಪೈಪೋಟಿ ಇತ್ತು. ಆದರೂ ಶಾಂತಿಯುತವಾಗಿ ಚುನಾವಣೆಗಳು ನಡೆಸುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ಈ ಚುನಾವಣೆಯಲ್ಲಿ ಕೆಲವು ರೌಡಿ ಶೀಟರ್ ಗಳು ಕಾಣಿಸಿಕೊಂಡು ಅಲ್ಲಲ್ಲಿ ಸಣ್ಣಪುಟ್ಟ ಘಟನೆಗಳು ನಡೆದಿವೆ. ಇಂತಹ ರೌಡಿ ಶೀಟರ್ ಗಳನ್ನು ಗಡಿಪಾರು ಮಾಡುವಂತೆ ಚುನಾವಣಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಅಂತಹವರನ್ನು ಗಡಿಪಾರು ಮಾಡಿಲ್ಲ, ಒಂದು ಕಡೆ ಅಧಿಕಾರಿಗಳು ವಿಫಲರಾಗಿದ್ದಾರೆಂದು ದೂರಿದ ಅವರು, ದರ್ಶನ್ ಪುಟ್ಟಣ್ಣಯ್ಯ ಅವರು ಗೌರವಯುತವಾದ ರಾಜಕಾರಣ ನಡೆಸಬೇಕೆಂದರು.
ಗೆಲುವು ಖಚಿತ
ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ನನ್ನ ಗೆಲುವು ಖಚಿತ. ನನಗೆ ಸೋಲಿನ ಭಯವಿಲ್ಲ, ಅತ್ಯಂತ ಬಹುಮತದಿಂದ ಗೆಲುವು ಸಾಧಿಸಿತ್ತೇನೆಂದು ವಿಶ್ವಾಸ ವ್ಯಕ್ತಪಡಿಸಿದರು. ನನಗೆ ಹಲವು ಚುನಾವಣೆಗಳನ್ನು ನಡೆಸಿದ ಅನುಭವವಿದೆ. ಹಾಗಾಗಿ ಸೋಲುವ ಮಾತೇ ಇಲ್ಲ ಎಂದರು.
ಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಉಪಸ್ಥಿತರಿದ್ದರು.