ಮಳವಳ್ಳಿತಾಲೂಕಿನ ಕಲ್ಕುಣಿ ಗ್ರಾಮದ ಸುತ್ತಮುತ್ತ ಕುರಿ-ಮೇಕೆಗಳ ಮೇಲೆ ದಾಳಿ ನಡೆಸಿ, ಆತಂಕ ಸೃಷ್ಠಿಸಿದ್ದ ಚಿರತೆಯೊಂದನ್ನು ಬೋನ್ ಇಟ್ಟು ಅರಣ್ಯ ಇಲಾಖೆಯ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.
ಒಂದು ವಾರದ ಹಿಂದೆ ಈ ಗ್ರಾಮದ ನಂಜುಂಡಸ್ವಾಮಿ ಅವರ ಜಮೀನಿನಲ್ಲಿ ಮೇಯುತ್ತಿದ್ದ ಕುರಿಯೊಂದನ್ನು ಹೊತ್ತೊಯ್ದು ಕೊಂದು ಹಾಕಿದ್ದ ಚಿರತೆ ಈಗ ಬೋನಿಗೆ ಬಿದ್ದಿದೆ.
ಚಿರತೆ ಕಾಣಿಸಿಕೊಂಡಿದ್ದದಿಂದ ಭಯ ಭೀತರಾಗಿದ್ದ ಗ್ರಾಮಸ್ಥರು ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಇಟ್ಟಿದ್ದ ಬೋನಿಗೆ ಶನಿವಾರ ರಾತ್ರಿ ಚಿರತೆ ಬಿದ್ದಿದ್ದು, ಈ ಭಾಗದ ಜನ ನಿಟ್ಟುಸಿರು ಬಿಡುವಂತಾಗಿದೆ.
ಸ್ಥಳಕ್ಕೆ ಧಾವಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಸಿಕ್ಕ ಚಿರತೆಯನ್ನು ಅರಣ್ಯಕ್ಕೆ ಬಿಡಲು ಮುಂದಾಗಿದ್ದಾರೆ.