ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಅವ್ವೇರಹಳ್ಳಿ ಗ್ರಾಮದ ಬಳಿ ಇರುವ ವಿ.ಸಿ. ನಾಲೆಗೆ ಇಂದು ಬೆಳಿಗ್ಗೆ 9.30 ಸಮಯದಲ್ಲಿ ಕಾರೊಂದು ಬಿದ್ದು ಸ್ಥಳದಲ್ಲೇ ಯುವಕನೊಬ್ಬ ಮರಣ ಹೊಂದಿದ್ದು, ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸೇರಿದ್ದಾನೆ.
ಪಾಂಡವಪುರ ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದ ನಂದೀಶ್ (18) ಮೃತಪಟ್ಟ ಯುವಕ. ಮತ್ತೊರ್ವ ಯುವಕ ಯೋಗಾನಂದ ಗಂಭೀರವಾಗಿ ಗಾಯಗೊಂಡವನು.
ರೈತರ ಪಾಲಿಗೆ ಜೀವನಾಡಿಯಾಗಿದ್ದ ಈ ಕಾಲುವೆಯೂ ಇತ್ತೀಚಿನ 4 ತಿಂಗಳಿಂದ ನೀರಿಲ್ಲದೆ ಬಣಗುಡುತ್ತಿದೆ, ಈ ದೊಡ್ಡ ಕಾಲುವೆಗೆ ಈ ಹಿಂದೆಯೂ ಕೂಡ ಅನೇಕ ಮಂದಿ ಆಕಸ್ಮಿಕವಾಗಿ ಬಿದ್ದು ಸಾವು ನೋವು ಸಂಭವಿಸಿವೆ. ಈ ಕಾಲುವೆಗೆ ತಡೆಗೋಡೆ ನಿರ್ಮಿಸಲು ಅನೇಕ ವರ್ಷಗಳಿಂದ ಈ ಹಿಂದಿನ ಶಾಸಕರಾದ ಪುಟ್ಟರಾಜು ಅವರಿಗೂ ಹಾಗೂ ಸ್ಥಳೀಯ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸುತ್ತಮುತ್ತಲಿನ ಗ್ರಾಮಸ್ಥರು ಮನವಿ ನೀಡಿದ್ದರೂ ಇದುವರೆಗೂ ಸ್ಪಂದಿಸಿಲ್ಲದಿರುವುದೇ ಈ ದುರಂತಕ್ಕೆ ಕಾರಣವಾಗಿದೆ.
ಪ್ರತಿನಿತ್ಯ ನೂರಾರು ಶಾಲಾ, ಕಾಲೇಜು ಮಕ್ಕಳು ಅಕ್ಕಪಕ್ಕದ ಊರಿಂದ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡುತ್ತಾರೆ. ಇಂತಹ ಘಟನೆಗಳ ಸರ್ವೇ ಸಾಮಾನ್ಯವಾಗಿದ್ದು, ಈ ಜಾಗದಲ್ಲಿ ಕೂಡಲೇ ತಡೆಗೋಡೆ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ಧಾರೆ.