ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಹೋಬಳಿಯ ಮುದಿಗೆರೆ ಗ್ರಾಮದ ಸರ್ವೆ ನಂ.96ರಲ್ಲಿ 3 ಎಕರೆ ಜಮೀನು ಕರಾರು ಸಂಬಂಧ ಸ್ವಾಧೀನಕ್ಕೆ ತೆರಳಿದ ದಲಿತರ ಮೇಲೆ ಗ್ರಾಮದ ಹಲವರು ಅಡ್ಡಿಪಡಿಸಿ ಹಲ್ಲೆಗೆ ಮುಂದಾದ ಘಟನೆ ಸಂಬಂಧ ಜಾತಿ ನಿಂದನೆ ಪ್ರಕರಣ ದಾಖಲಿಸುವಲ್ಲಿ ಬೆಳ್ಳೂರು ಠಾಣೆ ಪೊಲೀಸರು ವಿಳಂಬ ನೀತಿ ಅನುಸರಿಸಿದ್ದಾರೆಂದು ಡಿ.ವೆಂಕಟೇಶ್ ಆರೋಪ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮೀನು ವಿಚಾರವಾಗಿ ಉಂಟಾದ ಸಂಘರ್ಷ ತಪ್ಪಿಸಲು ನ್ಯಾಯ ಕೇಳಿಕೊಂಡು ಪೊಲೀಸರ ಮೊರೆ ಹೋದ ತಮ್ಮನ್ನೆ ಬೆದರಿಸಿ, ತಮ್ಮ ಮೇಲೆ ಇನ್ನಷ್ಟು ದೌರ್ಜನ್ಯ ನಡೆಸುವಂತೆ ಪೊಲೀಸರೇ ಕುಮ್ಮಕು ನೀಡುತ್ತಿದ್ದಾರೆಂದು ದೂರಿದರು.
ಮುದಿಗೆರೆ ಗ್ರಾಮದ ಗೋವಿಂದೇಗೌಡರ ಮಗ ಪುಟ್ಟಸ್ವಾಮಿ ಎಂಬುವವರಿಗೆ ಸೇರಿದ ಜಮೀನನ್ನು ಖರೀದಿಸಿ ಅನುಭವ ಹೊಂದಿದ್ದೇನೆ, ಇದನ್ನು ಸಹಿಸದ ಗ್ರಾಮದ ಕೆಲವು ಬಲಿಷ್ಟ ಕೋಮಿನ ರಘು, ಪತ್ನಿ ವೀಣಾ, ಉದಯಕುಮಾರ್ (ಅಜರ್), ಎಂ.ಪಿ.ಕುಮಾರ ಈತನ ಪತ್ನಿ ಕವಿತ, ಎಂ.ಟಿ.ದಾನಪ್ಪ, ಈತನ ಮಗ ಡಿ.ಕಮಲಾಕ್ಷಯ್ಯ (ವೆಂಕಟೇಶ್) ಈತನ ಪತ್ನಿ ಕಾಂಚನ ಮತ್ತೊಬ್ಬ ಮಗನಾದ ಆರುಣಕುಮಾರ, ಮೀಸೆ ರಾಮಣ್ಣ, ಎಂ.ಡಿ.ನಾಗರಾಜ್, ದಿಲೀಪ ಎಂ.ಆರ್ ದರ್ಶನ್ ಇತರರು ಜಮೀನಿಗೆ ಅಕ್ರಮ ಪ್ರವೇಶ ಮಾಡಿ ನಮ್ಮನ್ನು ಬೆದರಿಸಿದರು. ಈ ಸಂಬಂಧ ದೂರು ನೀಡಿದರೆ ನಾಗಮಂಗಲ ಡಿವೈಎಸ್ಪಿ, ವೃತ್ತ ನಿರೀಕ್ಷಕರು ಪ್ರಭಾವ ಬೀರಿ, ಪಿಎಸ್ಐ ಕಾನೂನು ಕ್ರಮ ಕೈಗೊಳ್ಳಲು ವಿಳಂಬ ನೀತಿ ಅನುಸರಿಸುವಂತೆ ಮೌಖಿಕವಾಗಿ ತಿಳಿಸಿ ನಮಗೆ ಅನ್ಯಾಯವೆಸಗಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂಬಂಧ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಕ್ರಮ ಜರುಗಿಸಬೇಕು ಹಾಗೂ ನಮಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ದಸಂಸ ಮುಖಂಡ ತರೀಕೆರೆ ರಮಾನಂದ, ರವಿಕುಮಾರ್, ಮೂರ್ತಿ ಹಾಗೂ ಶ್ರೀನಿವಾಸ್ ಉಪಸ್ಥಿತರಿದ್ದರು.