ಕಾಂಗ್ರೆಸ್ ಪಕ್ಷದ ವಿರುದ್ಧ ವಿರೋಧ ಪಕ್ಷದವರು ಆಡುತ್ತಿರುವ ಪ್ರಚೋದನಕಾರಿ ಮಾತುಗಳಿಗೆ ಜನರು ಪ್ರಾಮುಖ್ಯತೆ ನೀಡಬಾರದು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಮಂಡ್ಯ ನಗರದ ಕನಕ ಭವನದಲ್ಲಿ ಜಿಲ್ಲಾ ಕುರುಬರ ಸಂಘದ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ಕಾಂಗ್ರೆಸ್ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಯಶಸ್ಸು, 5 ಲಕ್ಷ ರೂ ವರೆಗೆ ರೈತರಿಗೆ ಬಡ್ಡಿ ರಹಿತ ಸಾಲ ಸೇರಿದಂತೆ ಹಲವು ಜನಪ್ರಿಯ ಕಾರ್ಯಕ್ರಮಗಳು ವಿಪಕ್ಷದವರ ಕಣ್ಣು ಕುಕ್ಕುತ್ತಿದೆ. ಆರ್ಥಿಕ ಸುಭದ್ರತೆಯೊಂದಿಗೆ ಸರ್ಕಾರ ಮುನ್ನಡೆಯುತ್ತಿರುವುದನ್ನು ತಡೆದುಕೊಳ್ಳಲಾಗದೆ ಟೀಕೆ ಮಾಡುತ್ತಿದ್ದಾರೆ ಇದಾವುದಕ್ಕೂ ಜನರು ಕಿವಿಗೂಡಬಾರದು ಎಂದು ತಿಳಿಸಿದರು.
ಹಲವು ದಶಕಗಳಿಂದ ಕುರುಬ ಸಮುದಾಯ ಸಿದ್ದರಾಮಯ್ಯನವರಿಗೆ ಶಕ್ತಿ ತುಂಬುತ್ತಾ ಬರುತ್ತಲೇ ಇದೆ. ಸಮುದಾಯದಲ್ಲಿರುವ ಒಗ್ಗಟ್ಟು ಇದಕ್ಕೆ ಸಾಕ್ಷಿಯಾಗಿದೆ. ಸಿದ್ದರಾಮಯ್ಯನವರೂ ಕೂಡ ತಮ್ಮ ಅಧಿಕಾರಾವಧಿಯಲ್ಲಿ ಯಾವುದೇ ಸಮುದಾಯವನ್ನು ಒಡೆಯಲಿಲ್ಲ, ವಿಂಗಡನೆಯನ್ನು ಮಾಡಲಿಲ್ಲ. ನೊಂದ ಸಮುದಾಯದ ಜನರ ಪರ ಹೆಚ್ಚು ಕಾಳಜಿ ವಹಿಸಿದ್ದಾರೆ, ಅದರಲ್ಲಿ ತಪ್ಪೇನಿಲ್ಲ. ಎಲ್ಲಾ ವರ್ಗದ ಜನರ ಸೇವೆಯನ್ನು ಗುರಿಯಾಗಿಸಿಕೊಂಡು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ, ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವಂತಹ ಜನಪರ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಜಾರಿಗೊಳಿಸಿದೆ. ಅಭಿವೃದ್ಧಿ ಕೆಲಸಗಳಿಗೂ ಒತ್ತಾಸೆಯಾಗಿ ನಿಂತಿದೆ. ಬಿಜೆಪಿ-ಜೆಡಿಎಸ್ ನವರ ಮಾತುಗಳಿಗೆ ಮಾನ್ಯತೆ ನೀಡದೆ, ಕಾಂಗ್ರೆಸ್ಸಗೆ ಶಕ್ತಿ ತುಂಬಬೇಕು ಎಂದರು.
ಕಾರ್ಯಕ್ರಮದಲ್ಲಿ 2022-23ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕುರುಬ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಮಂಡ್ಯ ಶಾಸಕರನ್ನು ಅಭಿನಂದಿಸಲಾಯಿತು. ಕಾಗಿನೆಲೆ ಕನಕ ಗುರು ಪೀಠದ ಕೆ ಆರ್ ನಗರ ಶಾಖೆ ಪೀಠಾಧ್ಯಕ್ಷ ಶ್ರೀ ಶಿವಾನಂದಪುರಿ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.