ಮೇಲು-ಕೀಳು, ಬಡವ-ಶ್ರೀಮಂತರ ನಡುವೆ ಸಾಮರಸ್ಯ ಬೆಳೆದು ಶಾಂತಿ ನೆಲೆಸಲು ಕನಕ ಜಯಂತಿ ಪೂರಕ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಅಭಿಪ್ರಾಯಪಟ್ಟರು.
ಮಂಡ್ಯ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆಯ ಸಂಯುಕ್ತಾಶ್ರಯದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭವನದಲ್ಲಿ ನಡೆದ ಕನಕ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ನೆಲ ಸತ್ಯ ಧರ್ಮಕ್ಕೆ ಶಕ್ತಿ ಕೊಟ್ಟಿದೆ, ಅದಕ್ಕೆ ಕಾರಣ ಕನಕದಾಸರಂತಹ ಮಹಾನ್ ವ್ಯಕ್ತಿಗಳು, ಇಂತವರ ವ್ಯಕ್ತಿತ್ವದಿಂದ ದೇಶದಲ್ಲಿ ಯಾವುದೇ ತಾರತಮ್ಯ ಮೂಡುವುದಿಲ್ಲ. ಪ್ರತಿ ಮನೆಯಲ್ಲೂ ಕನಕದಾಸರಂತಹ ಮಹಾನ್ ವ್ಯಕ್ತಿಗಳು ಹುಟ್ಟಲಿ ಎಂದರು.
ಕನಕದಾಸರು ಹುಟ್ಟುವಾಗಲೇ ಸಾಧಕರಾಗಿರಲಿಲ್ಲ, ಸಾಮಾನ್ಯ ಮನುಷ್ಯರಾಗಿ ಅವರು ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಮಹಾನ್ ವ್ಯಕ್ತಿಯಾದರು. , ನಾಡಿನ ಎಲ್ಲರೂ ಕನಕದಾಸರಂತೆ ನಾಡಿನ ಹಿತಕ್ಕಾಗಿ ಪ್ರಾಮಾಣಿಕ ಹೆಜ್ಹೆ ಇಟ್ಟರೇ ದೇಶವು ಬೆಳಗಲಿದೆ ಎಂದರು.
ಶಾಸಕ ಪಿ.ರವಿಕುಮಾರ್ ಮಾತನಾಡಿ, ಕುಲಕ್ಕಿಂತ ಗುಣಮುಖ್ಯ, ಎಲ್ಲರು ಸಮಾನರು ಎಂದು ತೋರಿಸಿ ಕೊಟ್ಟವರು ಕನಕದಾಸರು. ಕನಕದಾಸರ ಗುಣವನ್ನು ಮೈಗೂಡಿಸಿಕೊಂಡು ಮುನ್ನಡೆಯೋಣ, ಒಳ್ಳೆ ಕೆಲಸವನ್ನೇ ಮಾಡೋಣ ಎಂದು ಹೇಳಿದರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಚಟ್ನಹಳ್ಳಿ ಮಹೇಶ್ ಅವರು ಕನಕದಾಸರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಕ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು, ಉಪ ವಿಭಾಗಾಧಿಕಾರಿ ಶಿವಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉದಯ್ ಕುಮಾರ್, ಕುರುಬರ ಸಂಘದ ಜಿಲ್ಲಾಧ್ಯಕ್ಷ ಸುರೇಶ, ಉಪಾಧ್ಯಕ್ಷ ಶ್ರೀನಿವಾಸ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.