ಒತ್ತಡದಲ್ಲಿ ಇದ್ದಾಗ ವಕೀಲರು ಸಮಚಿತ್ತದ ವಾದ ಮಾಡಲು ಹಾಗೂ ನ್ಯಾಯಾಧೀಶರು ನ್ಯಾಯ ನೀಡಲು ಸಾಧ್ಯವಾಗದು, ಆದ್ದರಿಂದ ಒತ್ತಡ ನಿವಾರಣೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಮನೋರಂಜನೆ ಅಗತ್ಯ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಮಂಡ್ಯ ನಗರದಲ್ಲಿ ವಕೀಲರ ಸಂಘದ ಆವರಣದಲ್ಲಿ ಜಿಲ್ಲಾ ವಕೀಲರ ಸಂಘ ಆಯೋಜಿಸಿದ್ದ ರಾಜ್ಯಮಟ್ಟದ ವಕೀಲರ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ವಾದ ಮಾಡುವ ವಕೀಲರು ಮತ್ತು ತೀರ್ಪು ನೀಡುವ ನ್ಯಾಯಾಧೀಶರು ಒತ್ತಡರಹಿತವಾಗಿದ್ದರೆ ಮಾತ್ರ ಸಮಾಜದಲ್ಲಿ ಜವಾಬ್ದಾರಿ ನಿಭಾಯಿಸಬಹುದು, ಕ್ರೀಡೆಯಿಂದ ಮನಸ್ಸು ಉಲ್ಲಾಸವಾಗಿರುತ್ತದೆ, ದಿನದ ಒಂದು ಗಂಟೆ ಅವಧಿಯಲ್ಲಿ ದೈಹಿಕ ಮತ್ತು ಮಾನಸಿಕ ಸದೃಢತೆಗಾಗಿ ವ್ಯಾಯಾಮ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಅನಿವಾರ್ಯ ಎಂದು ತಿಳಿಸಿದರು.
ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾದ ವಿಶಾಲ್ ರಘು ಮಾತನಾಡಿ, ವಕೀಲರ ತಂಡವು ಈಗಾಗಲೇ ವಕೀಲರ ಸಂರಕ್ಷಣಾ ಕಾಯಿದೆ ಜಾರಿಗಾಗಿ ಮನವಿ ಮಾಡಿದರು, ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು,ಈ ವಿಷಯವನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಮಲೋಚನೆ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಾಧೀಶ ಟಿ.ಜಿ ಶಿವಶಂಕರೇಗೌಡ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿಜಿ ರಮಾ, ಜಿಲ್ಲಾಧಿಕಾರಿ ಡಾ. ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಅಧ್ಯಕ್ಷ ಎಂ ಟಿ ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಉಪಾಧ್ಯಕ್ಷ ಕೆಎಲ್ ಮರಿಸ್ವಾಮಿ, ಖಜಾಂಚಿ ಡಿಎಂ ಮಹೇಶ್, ಜಂಟಿ ಕಾರ್ಯದರ್ಶಿ ಎನ್ ಎಂ ಮಹದೇವ, ಹಿರಿಯ ನಿರ್ದೇಶಕರಾದ ಸೀತಾರಾಮ, ರತಿಕುಮಾರಿ, ಶ್ರೀನಿವಾಸ್, ರಾಮಚಂದ್ರ, ಅಮೃತ್, ಯಶ್ವಂತ್ ಮತ್ತಿತರರಿದ್ದರು.