ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದ ಗ್ರಾಮ ಪಂಚಾಯತಿ ಎದುರು ಸರ್ಕಾರಿ ಜಾಗದಲ್ಲಿ ಹಾರಿಸಲಾಗಿದ್ದ ಕೇಸರಿ ಧ್ವಜವನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಇದರ ವಿರುದ್ಧ ಹಿಂದುತ್ವವಾದಿ ಕಾರ್ಯಕರ್ತರು ದಾಂಧಲೆ ನಡೆಸಿದ್ದಾರೆ. ವಿವಾದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೃಷಿ ಸಚಿವ ಎನ್ ಚಲಯವರಾಯಸ್ವಾಮಿ, “ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ರಾಷ್ಟ್ರಧ್ವಜ ಹಾರಿಸಲು ಮಾತ್ರವೇ ಅವಕಾಶವಿದೆ. ಅದರ ಹೊರತಾಗಿ, ಯಾವುದೇ ರಾಜಕೀಯ, ಧಾರ್ಮಿಕ ಧ್ವಜ ಹಾರಿಸಲು ಅವಕಾಶವಿಲ್ಲ” ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, “ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ರಾಷ್ಟ್ರೀಯ ಧ್ವಜ ಹಾರಿಸಬಹುದು. ಅದು ಹೊರತು ಪಡಿಸಿ ಸರ್ಕಾರಿ ಜಾಗದಲ್ಲಿ ಬೇರೆ ಧ್ವಜವನ್ನು ಹಾರಿಸುವಂತಿಲ್ಲ. ತ್ರಿವರ್ಣ ಧ್ವಜಕ್ಕೆ ಅನುಮತಿ ಪಡೆದು ಬೇರೆ ಧ್ವಜ ಹಾರಿಸಿದ್ದಾರೆ. ಅದು ತಪ್ಪು. ಇವತ್ತು ಬಿಟ್ಟರೆ, ನಾಳೆ ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಾರಿಸ್ತೀವಿ ಅಂತಾರೆ. ಆಗ ಅವಕಾಶ ಕೊಡಲು ಆಗುತ್ತಾ? ಒಂದು ಕಡೆ ಅವಕಾಶ ಕೊಟ್ರೆ ಎಲ್ಲ ಕಡೆ ಕೇಳ್ತಾರೆ” ಎಂದಿದ್ದಾರೆ.
“ಸ್ಥಳೀಯ ಯುವಕರು ಒಳ್ಳೆಯವರೇ, ಅವರನ್ನ ಕೆಲವರು ದಾರಿ ತಪ್ಪಿಸುತ್ತಿದ್ದಾರೆ. ಎಲ್ಲ ಯುವಕರ ಜೊತೆ ಮಾತನಾಡುತ್ತೇನೆ. ಹನುಮ ಧ್ವಜ ಹಾರಿಸಲು ಖಾಸಗಿ ಜಾಗದಲ್ಲಿ ಅಥವಾ ದೇವಾಲಯದ ಮುಂದೆ ಹಾಕಲು ಅವಕಾಶ ಕೊಡೊಣ. ಆದರೆ, ಸರ್ಕಾರಿ ಕಚೇರಿ ಮುಂದೆ ಬೇಡ” ಎಂದರು.