ಬಿಜೆಪಿ-ಜೆಡಿಎಸ್ ಮೈತ್ರಿ ಆಗಲು ಯೋಗೇಶ್ವರ್ ಶ್ರಮವೂ ಇದೆ. ಆದರೆ, ನಂಬಿಸಿ ದ್ರೋಹ ಬಗೆದವರನ್ನು ತೊರೆದು ರಾಜಕೀಯವಾಗಿ ಜನ್ಮ ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಅವರು ಆಗಮಿಸಿದ್ದಾರೆ. ಈ ಉಪ ಚುನಾವಣೆಯಲ್ಲಿ ಅವರೇ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ. ಎನ್ಡಿಎ ಮೈತ್ರಿಕೂಟದ ವಿರುದ್ಧ ಕಾಂಗ್ರೆಸ್ ಪಕ್ಷ ದಾಖಲೆಯ ಅಂತರದ ಗೆಲುವು ಸಾಧಿಸುವುದು ಖಚಿತ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಸಿ.ಪಿ.ಯೋಗೇಶ್ವರ್ ಅವರು ಇಂದು ಬಿಜೆಪಿ ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾದ ಸಂದರ್ಭದಲ್ಲಿ ಆತ್ಮೀಯವಾಗಿ ಸ್ವಾಗತಿಸಿದ ಅವರು, ಕಾಂಗ್ರೆಸ್ ಮೂಲಕವೇ ಯೋಗೇಶ್ವರ್ ತಮ್ಮ ರಾಜಕೀಯ ಜೀವನ ಆರಂಭಿಸಿದ್ದದ್ದರು. ಪಕ್ಷದ ತತ್ವ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟು ಮರಳಿ ಬಂದಿದ್ದಾರೆ. ಆತ್ಮೀಯರಾದ ಯೋಗೇಶ್ವರ್ ಅವರಿಗೆ ಚನ್ನಪಟ್ಟಣದಲ್ಲಿ ವಿಶೇಷ ಜನ ಬೆಂಬಲವಿದೆ ಎಂದು ತಿಳಿಸಿದರು.
ರಾಜಕೀಯಕ್ಕಿಂತ ಹೆಚ್ಚಾಗಿ ಅಭಿವೃದ್ಧಿಯ ಕುರಿತಾಗಿಯೇ ಚಿಂತಿಸುತ್ತಿದ್ದ ಅವರು, ಬಿಜೆಪಿ ಸೇರಿ ಕ್ಷೇತ್ರದಲ್ಲಿ ನೆಲೆಯೇ ಇಲ್ಲದ ಬಿಜೆಪಿಗೆ ನೆಲೆ ಕಲ್ಪಿಸಲು ಸಾಕಷ್ಟು ಕಾಲ ಬೆವರು ಹರಿಸಿದ್ದಾರೆ ಎಂದು ಸ್ಮರಿಸಿದರು.