ಇಂದು ಅಕ್ಟೊಬರ್ 9…
ಚೆ ಗುವಾರ ಹುತಾತ್ಮನಾದ ದಿನ
ಬೆಳಕಿಗೂ ಕಣ್ಣ ಪೊರೆ ಬಂದಿರುವ…
ಇಂದಿನ ಸಂದರ್ಭದಲ್ಲಿ ಪ್ರತಿ ದಿನ ಅನಿಸುವುದನ್ನು ಮತ್ತೊಮ್ಮೆ ಹಂಚಿಕೊಳ್ಳುವೆ…..
ಮಬ್ಬು ಕಾಲಕ್ಕೊಬ್ಬ ಚೆ ಗುವಾರ ಬೇಕಿತ್ತು
ಬೇಕಿತ್ತು
ಮಬ್ಬು ಮುಸುಕಿರುವ ಕಾಲದಲ್ಲಿ ..
ಹಸಿವಿನ ಉರಿಯಿಂದ ಬೆಳಗದಾ ದೀಪಗಳು…
ಕಡು ಕತ್ತಲನ್ನು ಕರಗಿಸುವುದಿಲ್ಲವೆಂದೂ..
ಕರುಣೆಯ ಜೊತೆಗಿನ ಕಾಲಕ್ಷೇಪಗಳು
ಕ್ರಾಂತಿಯಲ್ಲವೆಂದು…
ಸಾರಿಸಾರಿ ಹೇಳಿದ
ಚೆಗುವಾರ ಇರಬೇಕಿತ್ತು….
ಮುಂಬೆಳಕಿನ ದೊಂದಿಯಾಗದೆ….
ಮಂದೆಯೊಳಗೆ ಮಂದಿಯಾದರೆ…
ಕಟುಕನ ಕೆಲಸ ಸುಲಭವಾಗುವುದೆಂದು..
ತಿಳಿಹೇಳಿದ ಚೆ ಗುವಾರ ಬೇಕಿತ್ತು ..
ಇಂದು ನಿನ್ನೆಗಳ ಹಂಗಿರದೆ
ನಾಳಿನ ನಿಜಗಳಿಗಾಗಿ ..
ಸೋಲನ್ನು ಸೋಲೆಂದು
ಶತ್ರುವನ್ನು ಶತ್ರುವೆಂದೂ
ಬೆತ್ತಲು ಮಾಡಿ ತೋರಿದ್ದ
ಚೆ ಗುವಾರ ಬೇಕಿತ್ತು…
ಯುದ್ಧವನ್ನು ಯುದ್ಧದಿಂದಲೇ
ಸೋಲಿಸಬೇಕೆಂದೂ…
ಯುದ್ಧದಲ್ಲಿ ವಿರಾಮ ಇರದೆಂದೂ..
ಸಾರಿಸಾರಿ ಹೇಳಿದ್ದ
ಚೆಗುವಾರ ಇರಬೇಕಿತ್ತು ..
ಶತ್ರುವಿನ ಔದಾರ್ಯ ವನ್ನು
ರಣತಂತ್ರವೆಂದೂ..
ಯುದ್ಧ ಮರೆತ ಕ್ರಾಂತಿಕಾರಿಯ ಕಾರುಣ್ಯವನ್ನು
ಐತಿಹಾಸಿಕ ಅವಘಡವೆಂದು ..
ಪತ್ತೆ ಮಾಡಿದ್ದ
ಡಾಕ್ಟರ್ ಚೆಗುವಾರ
ಇರ ಬೇಕಿತ್ತು ..
– ಶಿವಸುಂದರ್