ವರದಿ: ಪ್ರಭು ವಿ ಎಸ್
ಮದ್ದೂರು ತಾಲೂಕಿನ ಕಬ್ಬಾರೆ ಕೂಳೆಗೆರೆ ಬನ್ನಹಳ್ಳಿ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಶಾಸಕ ಕೆ.ಎಂ ಉದಯ್ ಅಧಿಕಾರಿಗಳೊಟ್ಟಿಗೆ ಭೇಟಿ ನೀಡಿ ಮಂಗಳವಾರ ಪರಿಶೀಲನೆ ನಡೆಸಿ ಅಗತ್ಯ ಮಾಹಿತಿ ಪಡೆದರು.
ಪ್ರಥಮವಾಗಿ ತಾಲೂಕಿನ ಕಬ್ಬಾರೆ ಗ್ರಾಮದ ಏತ ನೀರಾವರಿ ಕಾಮಗಾರಿಯನ್ನು ಪರಿಶೀಲನೆ ನಡೆಸಿದ ಬಳಿಕ ಕಳೆದ 15 ವರ್ಷಗಳಿಂದಲೂ ಸ್ಥಗಿತಗೊಂಡಿರುವ ಕೂಳಗೆರೆ ಗ್ರಾಮದ ಏತ ನೀರಾವರಿ ಹಾಗೂ ನಿರ್ಮಾಣ ಹಂತದಲ್ಲಿರುವ ಬನ್ನಹಳ್ಳಿ ಗ್ರಾಮದ ಏತ ನೀರಾವರಿ ಕಾಮಗಾರಿಯನ್ನು ಪರಿಶೀಲನೆ ನಡೆಸಿ ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ರವರ ಅಧಿಕಾರದ ಅವಧಿಯಲ್ಲಿ ಕೈಗೊಂಡ ಕೂಳಗೆರೆ ಗ್ರಾಮದ ಏತ ನೀರಾವರಿ ಹಲವು ವರ್ಷಗಳ ಹಿಂದೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಈ ಭಾಗದ ರೈತರಿಗೆ ಅನಾನುಕೂಲ ಉಂಟಾಗುವ ಜೊತೆಗೆ ಕೆರೆಕಟ್ಟೆಗಳಿಗೆ ನೀರಿಲ್ಲದೆ ಬೇಸಾಯ ಮಾಡಲು ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಶಾಸಕರು ಅಧಿಕಾರಿಗಳೊಂದಿಗೆ ಚರ್ಚಿಸಿ ಗ್ರಾಮಗಳಿಗೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದರು.
ಬಳಿಕ ಬನ್ನಹಳ್ಳಿ ಏತ ನೀರಾವರಿ ಕಾಮಗಾರಿಯನ್ನು ಪರಿಶೀಲನೆ ನಡೆಸಿ, ಸ್ಥಳದಲ್ಲಿದ್ದ ಕಾವೇರಿ ನೀರಾವರಿ ನಿಗಮದ ಅಭಿಯಂತರ ನಂಜುಂಡಗೌಡ ಅವರಿಂದ ಮಾಹಿತಿ ಪಡೆದು ಬನ್ನಹಳ್ಳಿ ಏತ ನೀರಾವರಿ 77 ಕೋಟಿ ವೆಚ್ಚದ ಕಾಮಗಾರಿಯಾಗಿದ್ದು, ಈ ಭಾಗದ 2,638 ಎಕರೆ ಪ್ರದೇಶದ ಜಮೀನುಗಳಿಗೆ ನೀರುಣಿಸುವ ಜೊತೆಗೆ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಾಗಿದ್ದು ವಿದ್ಯುತ್ ಸಮಸ್ಯೆ ಟವರ್ ನಿರ್ಮಾಣ ಜಮೀನುಗಳಲ್ಲಿ ರೈತರು ಟವರ್ ನಿರ್ಮಿಸಲು ಸ್ಥಳಾವಕಾಶ ನೀಡದ ಕಾರಣ ಏತ ನೀರಾವರಿ ಕಾಮಗಾರಿ ಸ್ಥಗಿತಗೊಳ್ಳಲು ಕಾರಣವಾಗಿದ್ದು ಮತ್ತು ಕೆರೆಗಳಿಗೆ ಸಂಪರ್ಕ ಕಲ್ಪಿಸಿ ನೀರು ತುಂಬಿಸಲು ತೊಡಕುಂಟಾಗಿದೆ ಎಂದು ಶಾಸಕರಿಗೆ ವಿವರಿಸಿದರು.
ಈ ವೇಳೆ ಮಾತನಾಡಿದ ಶಾಸಕ ಕೆಎಂ ಉದಯ್ ಈ ಭಾಗದ ಜನರ ಹಾಗೂ ರೈತರ ಬಹುದಿನದ ಬೇಡಿಕೆಯನ್ನು ಈಡೇರಿಸಬೇಕೆಂಬ ಸದ್ದುದೇಶದಿಂದ ರಾಮನಗರ ಹಾಗೂ ಮದ್ದೂರು ಅಧಿಕಾರಿಗಳೊಟ್ಟಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದರು.
ಕೂಳಗೆರೆ ಗ್ರಾಮದ ಏತ ನೀರಾವರಿ ಕಾಮಗಾರಿ ಕಳೆದ 20 ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿದ್ದು ಯೋಜನೆಗೆ ಅಳವಡಿಸಿದ್ದ ಮೋಟಾರು ಪಂಪ್ಸೆಟ್ ಸಂಪೂರ್ಣ ದುರಸ್ತಿಯಲ್ಲಿದ್ದು ಕೂಡಲೆ ಕಾಮಗಾರಿ ಕೈಗೊಳ್ಳಲು 2.5 ಕೋಟಿ ಅನುದಾನ ಬಿಡುಗಡೆಯಾಗಿದ್ದು ಈ ಸಂಬಂಧ ಮೋಟಾರು ಮತ್ತು ಪೈಪ್ ಲೈನ್ ಕಾಮಗಾರಿಗೆ ತಕ್ಷಣವೇ ಚಾಲನೆ ನೀಡಿ ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಲು ಕ್ರಮವಹಿಸಲಾಗುವುದೆಂದರು.
ಈ ವೇಳೆ ನೀರಾವರಿ ಇಲಾಖೆ ಅಧಿಕಾರಿಗಳಾದ ಎಂ ಎನ್ ಮೋಹನ್, ಎ ಆರ್ ನವೀನ್, ನಾಗರಾಜು, ವೆಂಕಟೇಶ್, ಕೆ ಪಿ ಟಿ ಸಿ ಎಲ್ ಕಾರ್ಯನಿರ್ವಾಹಕ ಅಭಿಯಂತರ ಕಿಶೋರ್ ಕುಮಾರ್. ಎಇಇ ಸೈಪ್ ಉಲ್ಲಾ , ಸಹಾಯಕ ಅಭಿಯಂತರ ಶಶಿಕುಮಾರ್. ರಾಮನಗರ ವಿಭಾಗದ ಅಧಿಕಾರಿಗಳಾದ 0
ಮೋಹನ್, ನವೀನ್, ಸ್ಥಳಿಯ ಮುಖಂಡರಾದ ಕೆ ಎಲ್ ಜಯರಾಮು, ರಾಮಕೃಷ್ಣ, ಕುಮಾರ್, ಹೊನ್ನಪ್ಪ, ಯೋಗನಂದ, ಯೋಗೇಶ್ ಹಾಜರಿದ್ದರು.