ಅಸ್ಸಾಂ ಒಪ್ಪಂದವನ್ನು ಅಂಗೀಕರಿಸಿದ ಪೌರತ್ವ ಕಾಯ್ದೆ 1955ರ ಸೆಕ್ಷನ್ 6ಎ ನ ಸಾಂವಿಧಾನಿಕ ಸಿಂಧುತ್ವವನ್ನು 4:1 ಬಹುಮತದಿಂದ ಸುಪ್ರೀಂ ಕೋರ್ಟ್ ಇಂದು (ಅಕ್ಟೋಬರ್ 17) ಎತ್ತಿಹಿಡಿದಿದೆ.
ಸೆಕ್ಷನ್ 6ಎ ಜನವರಿ 1, 1966 ಮತ್ತು ಮಾರ್ಚ್ 25, 1971 ರ ನಡುವೆ ಅಸ್ಸಾಂಗೆ ಪ್ರವೇಶಿಸಿದ ಬಾಂಗ್ಲಾದೇಶಿ ವಲಸಿಗರಿಗೆ ಭಾರತೀಯ ನಾಗರಿಕರಾಗಿ ನೋಂದಾಯಿಸಲು ಅವಕಾಶ ನೀಡುತ್ತದೆ. ಜೊತೆಗೆ, ಕಟ್ಆಫ್ ದಿನಾಂಕದ ನಂತರ ಬಂದಿರುವವರಿಗೆ ಪೌರತ್ವ ನಿರಾಕರಿಸುತ್ತದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಎಂಎಂ ಸುಂದ್ರೇಶ್, ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಐವರು ನ್ಯಾಯಾಧೀಶರ ಸಂವಿಧಾನಿಕ ಪೀಠ ಈ ಕುರಿತು ತೀರ್ಪು ನೀಡಿದೆ.
ನಾಲ್ವರು ನ್ಯಾಯಾಧೀಶರು ಸಾಂವಿಧಾನಿಕ ಸಿಂಧುತ್ವ ಎತ್ತಿ ಹಿಡಿದರೆ, ನ್ಯಾಯಮೂರ್ತಿ ಪರ್ದಿವಾಲಾ ಅವರು ಮಾತ್ರ ಸೆಕ್ಷನ್ 6ಎ ಅನ್ನು ಅಸಾಂವಿಧಾನಿಕವೆಂದು ಪರಿಗಣಿಸಲು ಭಿನ್ನ ತೀರ್ಪು ನೀಡಿದ್ದಾರೆ.
ಸಿಜೆಐ ಡಿವೈ ಚಂದ್ರಚೂಡ್ ಅವರು ತಮ್ಮ ತೀರ್ಪಿನಲ್ಲಿ, “ಅಸ್ಸಾಂ ಒಪ್ಪಂದವು ಅಕ್ರಮ ವಲಸೆ ಸಮಸ್ಯೆಗೆ ರಾಜಕೀಯ ಪರಿಹಾರವಾಗಿದೆ ಮತ್ತು ಸೆಕ್ಷನ್ 6ಎ ಶಾಸಕಾಂಗ ಪರಿಹಾರವಾಗಿದೆ” ಎಂದು ಹೇಳಿದ್ದಾರೆ.
ಸೆಕ್ಷನ್ 6ಎ ಜಾರಿಗೊಳಿಸಲು ಸಂಸತ್ತಿಗೆ ಶಾಸಕಾಂಗದ ಅಧಿಕಾರವಿದೆ ಎಂದು ನಾಲ್ವರು ನ್ಯಾಯಾಧೀಶರು ಬಹುಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಜನಸಂಖ್ಯೆಯನ್ನು ರಕ್ಷಿಸುವ ಅಗತ್ಯತೆಯೊಂದಿಗೆ ಮಾನವೀಯ ಕಾಳಜಿಯಿಂದ 6ಎ ಅನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದ್ದಾರೆ.