Wednesday, September 18, 2024

ಪ್ರಾಯೋಗಿಕ ಆವೃತ್ತಿ

ಕೆಂಪೇಗೌಡರ ದೂರದರ್ಶಿತ್ವದಿಂದ ವಿಶ್ವಮಾನ್ಯ ಬೆಂಗಳೂರು ನಿರ್ಮಾಣ – ಸಿ.ಕೆ.ರಾಮೇಗೌಡ

ನಾಡಪಭು ಕೆಂಪೇಗೌಡರ ದೂರದರ್ಶಿತ್ವದ ಆಡಳಿತದ ಫಲವಾಗಿ ವಿಶ್ವಮಾನ್ಯ ಬೆಂಗಳೂರು ಮಹಾನಗರ ನಿರ್ಮಾಣವಾಗಿದೆ. ಮಾನವನ ವೃತ್ತಿ  ಕಸುಬುಗಳಿಗೆ ಅನುಸಾರವಾಗಿ ಒಂದೊಂದು ಪೇಟೆಗಳನ್ನು ನಿರ್ಮಿಸಿರುವ ಕೆಂಪೇಗೌಡರು ಸರ್ವ ಜನಾಂಗದ ಶಾಂತಿಯ ತೋಟದ ಹೊಂಗನಸಿನ ಆಧಾರದ ಮೇಲೆ ಬೆಂಗಳೂರು ಮಹಾನಗರವನ್ನು ನಿರ್ಮಿಸಿದ್ದಲ್ಲದೇ ದಕ್ಷ ಪ್ರಾಮಾಣಿಕ ಆಡಳಿತವನ್ನು ನಾಡಿನ ಜನತೆಗೆ ನೀಡಿದ್ದಾರೆ  ಎಂದು ಕನ್ನಡಪರ ಹೋರಾಟಗಾರ ಸಿ.ಕೆ.ರಾಮೇಗೌಡ ಹೇಳಿದರು.

ಕೆ ಆರ್ ಪೇಟೆ ಪಟ್ಟಣದ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ  ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ವಿಜಯನಗರದ ಅರಸರ ಸಾಮಂತರಾಗಿದ್ದ ಕೆಂಪೇಗೌಡರು ನೀಡಿದ ಜನಪರವಾದ ಆಡಳಿತ ಹಾಗೂ ಬದ್ಧತೆಯಿಂದಾಗಿ ವಿಜಯನಗರದ  ಚಕ್ರವರ್ತಿ ಕೃಷ್ಣದೇವರಾಯರ ವಿಶ್ವಾಸಕ್ಕೆ ಭಾಜನರಾಗಿದ್ದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಬಹದ್ದೂರ್ ಅವರು ಜನಪರವಾದ ಆಡಳಿತವನ್ನು ನೀಡಲು ನಾಡಪ್ರಭು ಕೆಂಪೇಗೌಡರು ಪ್ರೇರಕ ಶಕ್ತಿಯಾಗಿದ್ದರು. ಮಹಿಳಾ ಸಮಾನತೆ ಶಿಕ್ಷಣ ಹಾಗೂ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಿದ್ದ ಮೈಸೂರು ಅರಸರು ಧರ್ಮಪ್ರಭುಗಳಾದ ಕೆಂಪೇಗೌಡರ ಆಡಳಿತವನ್ನು ಅನುಸರಿಸಿ ಕಾರ್ಯನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದು ಸ್ಮರಿಸಿದರು.

ಟಿಎಪಿಸಿಎಂಎಸ್ ಅಧ್ಯಕ್ಷ ಬಿ ಎಲ್ ದೇವರಾಜು ಮಾತನಾಡಿ, ಕಾರ್ಯಕ್ರಮದ  ಸಂಘಟಕರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮವನ್ನು ರೂಪಿಸಬೇಕು.ಒಬ್ಬರೇ ಅತಿಥಿಗಳಿಗೆ ಎರಡು ಮೂರು ಜವಾಬ್ದಾರಿಗಳನ್ನು ನೀಡಿದರೆ ಹೇಗೆ? ಕಾರ್ಯಕ್ರಮದ  ಉದ್ಘಾಟಕರು ಉದ್ಘಾಟನೆಯ ಕೆಲಸ ಮಾಡಬೇಕು, ಅಧ್ಯಕ್ಷತೆ ವಹಿಸಿರುವವರು ಅಧ್ಯಕ್ಷರ ಭಾಷಣ ಮಾಡಬೇಕು, ಆದರೆ ಇಲ್ಲಿ ಉದ್ಘಾಟನೆ ಮಾಡಿದವರೇ ಅಧ್ಯಕ್ಷತೆಯನ್ನು ವಹಿಸಿದ್ದಾರೆ. ಒಬ್ಬೊಬ್ಬ ಅತಿಥಿಗಳಿಗೆ ಒಂದೊಂದು ಜವಾಬ್ದಾರಿ ವಹಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ಕಡೆಗೆ ಗಮನಹರಿಸಬೇಕು ಎಂದು ದೇವರಾಜು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್ ಟಿ ಮಂಜು ಮಾತನಾಡಿ, ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ಗೊಂದಲವನ್ನು ಹುಟ್ಟು ಹಾಕುವುದು ಬೇಡ, ಶಿಷ್ಟಾಚಾರದ ಅಡಿಯಲ್ಲಿ ಆಹ್ವಾನ ಪತ್ರಿಕೆಯನ್ನು ಮುದ್ರಿಸಿ, ಒಬ್ಬೊಬ್ಬ ಅತಿಥಿಗಳಿಗೆ ಒಂದೊಂದೇ ಜವಾಬ್ದಾರಿ ವಹಿಸಬೇಕು.  ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ಯಾವುದೇ ಬಗೆಯ ಗೊಂದಲಗಳಾಗದಂತೆ ಎಚ್ಚರ ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಬೆಂಗಳೂರು ಮಹಾನಗರದ ನಿರ್ಮಾತೃಗಳಾದ ಧರ್ಮಪ್ರಭು ಕೆಂಪೇಗೌಡರ  ದೂರದೃಷ್ಟಿಯ ಆಡಳಿತದ ಫಲವಾಗಿ ಶ್ರೀಸಾಮಾನ್ಯರು ಹಾಗೂ ರೈತರಿಗೆ ಬೇಕಾದ ಕೆರೆಕಟ್ಟೆಗಳು, ದೇವಾಲಯಗಳು ಮಾರುಕಟ್ಟೆಗಳು ಹಾಗೂ ಕೋಟೆ ಕೊತ್ತಲಗಳನ್ನು ನಿರ್ಮಿಸಿ ಧನಿ ಇಲ್ಲದ ಸಾಮಾನ್ಯ ಜನರಿಗೆ ಧ್ವನಿಯಾಗಿ ಕೆಲಸ ಮಾಡಿದರು ಎಂದು ಕೆಂಪೇಗೌಡರ ಆಡಳಿತವನ್ನು ಸ್ಮರಿಸಿದ ಶಾಸಕ ಮಂಜು ವಿಜಯನಗರದ ಅರಸರ ಸಾಮಂತ ರಾಜರಾಗಿ ಕೆಂಪೇಗೌಡರು ಆಡಳಿತ ನಡೆಸಿದರೂ ಸ್ವತಂತ್ರ ರಾಜರಾಗಿ ಜನಪರವಾದ ಆಡಳಿತವನ್ನು ನೀಡಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದಾರೆ ದಕ್ಷ ಆಡಳಿತವನ್ನು ಸ್ಮರಣೆ ಮಾಡಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರು ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.  ನಾಡಪ್ರಭು ಕೆಂಪೇಗೌಡರ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಅಲಂಕರಿಸಿ ಕೆ ಆರ್ ಪೇಟೆ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಜನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ಮಾಡಿ ವೇದಿಕೆಗೆ ತರಲಾಯಿತು.

ಕಾರ್ಯಕ್ರಮದಲ್ಲಿ ಕೆ ಆರ್ ಪೇಟೆ ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿ ರಾಮ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಶಿವರಾಮೇಗೌಡ, ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎನ್ ಎಸ್ ಗಂಗಾಧರ್, ಮೂಡನಹಲಕ್ಳಿ ಮಧು, ತಾಲೂಕು ರಕ್ಷಣಾ ವೇದಿಕೆ ಅಧ್ಯಕ್ಷ ಹೊನ್ನೇನಹಳ್ಳಿ ವೇಣು, ಟೆಂಪೋ ಶ್ರೀನಿವಾಸ್,  ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಸೋಮಶೇಖರ್, ಮುಖಂಡರಾದ ಮಲ್ಲೇನಹಳ್ಳಿ ಮೋಹನ್, ಬೀರವಳ್ಳಿ ಕೃಷ್ಣೇಗೌಡ, ಕೆ ಕಾಳೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರಹಾಸ, ನಾಗರಾಜೇಗೌಡ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!