ಕೃಷಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಜಿಲ್ಲೆಯ ಮಾಜಿ ಶಾಸಕರಾದ ಸುರೇಶಗೌಡ, ರವೀಂದ್ರ ಶ್ರೀಕಂಠಯ್ಯ, ಕೆ.ಅನ್ನದಾನಿ ಮತ್ತಿತರರು ಮೊದಲು ತಮ್ಮ ರಾಜಕೀಯ ಪಕ್ಷ ಯಾವುದು ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಎಂ.ದ್ಯಾವಪ್ಪ ತಿರುಗೇಟು ನೀಡಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಾಯಕರು ತಮ್ಮ ಪಕ್ಷ ದಳವೋ ಅಥವಾ ಬಿಜೆಪಿಯ ಒಂದು ಘಟಕವೋ ಎಂಬುದನ್ನು ಸಷ್ಟವಾಗಿ ಜನರ ಮುಂದಿಡಲಿ, ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಕುಮಾರಸ್ವಾಮಿಯವರ ಬಳಗ ಬಿಜೆಪಿಯಲ್ಲಿ ಲೀನವಾಗಿರಬೇಕು ಎಂಬ ಅನುಮಾನ ಮೂಡುತ್ತದೆ ಎಂದು ಕೆಣಕಿದರು.
ನಾಗಮಂಗಲ ಘಟಕದ ಕೆ.ಎಸ್.ಆರ್.ಟಿ.ಸಿ ಚಾಲಕ ಎಸ್.ಆರ್.ಜಗದೀಶ್ ಆತ್ಮಹತ್ಯೆ ಯತ್ನಕ್ಕೆ ವೈಯಕ್ತಿಕ ವಿಷಯಗಳೇ ಕಾರಣ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ನಿನ್ನೆ ಸದನದಲ್ಲಿ ಸ್ಪಷ್ಟಪಡಿಸಿದ್ದಾರೆ, ಹೀಗಿರುವಾಗ ಈ ಪ್ರಕರಣದಲ್ಲಿ ಬೇರೆ ಯಾರ ಕೈವಾಡವು ಇಲ್ಲ ಎಂಬುದು ಸಾಬೀತಾಗಿದೆ. ಆದರೆ ವಿಷ ಸೇವಿಸಿದಾಗ ರೋಗಿಯನ್ನು ಕೊಂಡೊಯ್ಯುತ್ತಿದ್ದ ಅಂಬುಲೆನ್ಸ್ ವಾಹನವನ್ನು ತಡೆಯುವ ಯತ್ನ ಮಾಡಿದ ಮಾಜಿ ಶಾಸಕ ಸುರೇಶ್ ಗೌಡ ನಡೆ ಅತ್ಯಂತ ಖಂಡನೀಯ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು, ಗೃಹ ಸಚಿವರು ಸುರೇಶ್ ಗೌಡ ವಿರುದ್ಧ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ. ಇದು ಸ್ವಾಗರ್ತಾಹ ಎಂದರು.
ಜಿಲ್ಲೆಯ ಅಭಿವೃದ್ದಿಗೆ ಸಲಹೆ ನೀಡಲಿ
ಪದೇ ಪದೇ ಸಚಿವ ಚಲುವರಾಯಸ್ವಾಮಿ ಅವರ ವಿರುದ್ಧ ರಾಜಕೀಯ ಸೇಡನ್ನು ಪ್ರದರ್ಶಿಸುತ್ತಿರುವ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಅವರ ಬೆಂಬಲಿಗರ ನಡೆ ಅತ್ಯಂತ ಖಂಡನೀಯ ಎಂದ ಅವರು, ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಬದ್ಧತೆಯಿಂದ ಕೆಲಸ ಮಾಡುತ್ತಿರುವ ಚಲುವರಾಯಸ್ವಾಮಿ ಅವರಿಗೆ ಇನ್ನು ಮುಂದಾದರೂ ಜಿಲ್ಲೆಯ ಅಭಿವೃದ್ದಿಯ ದೃಷ್ಠಿಯಿಂದ ಉತ್ತಮ ಸಲಹೆಗಳನ್ನು ನೀಡಲಿ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ವೆಂಕಟೇಶ್, ಎಂ.ಬಿ.ಶಕುಂತಲಾ, ಜಬೀವುಲ್ಲಾ, ಗೊರವಾಲೆ ಚಂದ್ರಶೇಖರ್, ಮಹೇಶ್ ಮತ್ತಿತರರಿದ್ದರು.