ವರದಿ : ಪ್ರಭು ವಿ ಎಸ್
ಮಾಹಿತಿ ಮತ್ತು ಸಂಪರ್ಕದ ಕೊರತೆಯಿಂದಾಗಿ ಕೆಲ ಮಂದಿ ಉದ್ಯೋಗ ವಂಚಿತರಾಗಲು ಕಾರಣವಾಗಿದ್ದು ದೇಶದಲ್ಲೇ ಐಟಿಬಿಟಿ ಸೇರಿದಂತೆ ಸಾಕಷ್ಟು ಉದ್ಯೋಗ ಸೃಷ್ಠಿಗೆ ರಾಜ್ಯ ಮುಂಚೂಣಿ ಸ್ಥಾನದಲ್ಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವಥ್ನಾರಾಯಣ್ ತಿಳಿಸಿದರು.
ಪಟ್ಟಣದ ಗ್ಲೋಬಲ್ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಶ್ರೀನಿಧಿಗೌಡ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸೇವಾ ಟ್ರಸ್ಟ್, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮಂಡ್ಯ ಮತ್ತು ಗ್ಲೋಬಲ್ ವಿದ್ಯಾಸಂಸ್ಥೆ ವತಿಯಿಂದ ಆಯೋಜಿಸಿದ್ದ ‘ಬೃಹತ್ ಉದ್ಯೋಗ ಮೇಳ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಂಡ್ಯ ಜಿಲ್ಲೆ ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ಕ್ಷೇತ್ರದಲ್ಲಿಯೂ ಪ್ರಗತಿಯತ್ತ ದಾಪುಗಾಲಿಟ್ಟು ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಮತ್ತಷ್ಟು ಶಕ್ತಿ ತುಂಬುವ ಕಾರ್ಯದತ್ತ ಮುಂದಾಗಿದ್ದು ಇಂದಿನ ಯುವಜನತೆ ಉನ್ನತ ಶಿಕ್ಷಣ ಪಡೆಯುವ ಜತೆಗೆ ಕೌಶಲ್ಯತೆಯಲ್ಲಿ ಹೆಚ್ಚು ಪರಿಣಿತಿ ಹೊಂದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅಣಿಯಾಗುವ ಅಗತ್ಯವಿದೆ ಎಂದರು.
ವಿದ್ಯಾರ್ಥಿಗಳು ಎಷ್ಟೇ ಕಲಿತರು ಕೌಶಲ್ಯತೆ ಅತಿ ಹೆಚ್ಚಾಗಿ ಬೇಕಾಗಿದ್ದು ಕೇವಲ ಜ್ಞಾನ ಪಡೆದರೆ ಸಾಲದು ಕಲಿಕೆ ಮತ್ತು ಕೌಶಲ್ಯತೆ ಜತೆ ಜತೆಯಲ್ಲಿಯೇ ಬೆಳೆದು ವಿಚಾರ ವಿನಿಮಯ ಮತ್ತು ಧೃಡಸಂಕಲ್ಪವನ್ನು ತೊಡಬೇಕಾದ ಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳಬೇಕೆಂದರು.
ವಿದ್ಯಾರ್ಥಿಗಳು ಕೌಶಲ್ಯತೆಯನ್ನು ಹೆಚ್ಚಿಸಿಕೊಳ್ಳಬೇಕೆಂಬ ಸದುದ್ದೇಶದಿಂದಲೇ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರಕಾರ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಹಾಗೂ ಅರ್ಹ ಉದ್ಯೋಗ ಪಡೆಯಲು ಮುಂದಾಗಬೇಕೆಂದು ನೆರೆದಿದ್ದ ಯುವ ಜನತೆಗೆ ಕಿವಿಮಾತು ಹೇಳಿದರು.
ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲಾ ವಯೋಮಾನದ ಅಭ್ಯರ್ಥಿಗಳೊಟ್ಟಿಗೆ ಇತರೆ 3 ಸಾವಿರಕ್ಕೂ ಅಧಿಕ ಮಂದಿ ತರಬೇತಿ ಮತ್ತು ಕೌಶಲ್ಯ ವೃದ್ಧಿಗೆ ಅರ್ಹತೆ ಹೊಂದಿದ್ದು ಸಾಮರ್ಥ್ಯಕ್ಕೆ ಅನುಗುಣವಾಗಿ ಉದ್ಯೋಗ ಸೃಷ್ಠಿಸಲು ಸಾಧ್ಯವೆಂದು ಜಿಲ್ಲೆಯ ನಾಗಮಂಗಲ, ಮಂಡ್ಯ, ಮದ್ದೂರು ತಾಲೂಕು ಕೇಂದ್ರಗಳಿಗೂ ವಿಸ್ತರಿಸಿ ಸರ್ವರಿಗೂ ಶಿಕ್ಷಣ, ಉದ್ಯೋಗ ಕಲ್ಪಿಸಲು ತಮ್ಮ ಸರಕಾರ ಮುಂದಾಗಿರುವುದಾಗಿ ಯುವಕ ಯುವತಿಯರು ಸಬಲೀಕರಣದೊಟ್ಟಿಗೆ ಸಮಾಜಕಟ್ಟುವ ಕಾರ್ಯಕ್ಕೆ ಕೈಜೋಡಿಸಬೇಕೆಂದರು.
ಜಿಲ್ಲೆಯಲ್ಲಿ ಐದು ನೂತನ ಕೈಗಾರಿಕ ಹೊಸಹತು ತೆರೆಯುವ ಆಲೋಚನೆ ಸರಕಾರಕ್ಕಿದ್ದು ಅಗತ್ಯ ಜಮೀನು ಲಭ್ಯವಿಲ್ಲದ ಕಾರಣ ತೊಡಕ್ಕುಂಟಾಗಿರುವುದಾಗಿ ಈ ಕುರಿತು ಈಗಾಗಲೇ ಸರ್ವೆ ಕಾರ್ಯ ಚಾಲ್ತಿಯಲ್ಲಿರುವ ಸುಳಿವು ನೀಡಿದರು.
ಕಾರ್ಯಕ್ರಮ ಆಯೋಜಕ, ಶ್ರೀನಿಧಿಗೌಡ ಪ್ರತಿಷ್ಠಾನದ ಅಧ್ಯಕ್ಷ ಮನ್ಮುಲ್ ನಿರ್ದೇಶಕ ಎಸ್.ಪಿ. ಸ್ವಾಮಿ ಮಾತನಾಡಿ ನವಮದ್ದೂರು ನಿರ್ಮಾಣ ಮಾಡಲು ಬಿಜೆಪಿ ಸರಕಾರ ಮುಂದಾಗಿದ್ದು ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿ ಐಟಿಐ, ಜಿಟಿಟಿಸಿ ಕೇಂದ್ರಗಳನ್ನು ತೆರೆದು ಹೆಚ್ಚಿನ ಶಕ್ತಿ ತುಂಬುವಂತಹ ಕೆಲಸಕ್ಕೆ ಮುಂದಾಗಿದ್ದು ಕರ್ನಾಟಕದಲ್ಲಿ ಯುವಕ, ಯುವತಿಯರಿಗೆ ಉತ್ತಮ ಭವಿಷ್ಯವನ್ನು ರೂಪಿಸಲಾಗಿದೆ ಎಂದರು.
ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಮನ್ಮುಲ್ ನಿರ್ದೇಶಕ ಎಸ್.ಪಿ. ಸ್ವಾಮಿ ಮಾತನಾಡಿದರು.
ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಿAದ ಆಗಮಿಸಿದ ನೂರಾರು ಸಂಖ್ಯೆಯ ಉದ್ಯೋಗಕಾಂಕ್ಷಿಗಳು ವಿವಿಧ ಕಂಪನಿಗಳಿಗೆ ತಮ್ಮ ಶೈಕ್ಷಣಿಕ ದಾಖಲಾತಿ ಮತ್ತು ಮಾಹಿತಿಯನ್ನು ದಾಖಲಿಸಿ 26ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಂಡು 500ಕ್ಕೂ ಹೆಚ್ಚು ಅಭ್ಯರ್ಥಿಗಳು ಉದ್ಯೋಗ ಮೇಳ ಸಂದರ್ಶನಕ್ಕೆ ಒಳಪಟ್ಟು 223 ಮಂದಿ ವಿವಿಧ ಕಂಪನಿಗಳಿಗೆ ಆಯ್ಕೆ ಪತ್ರ ಪಡೆಯುವಲ್ಲಿ ಯಶಸ್ವಿಯಾದರು.
ಈ ವೇಳೆ ಜಿ.ಪಂ. ಮಾಜಿ ಸದಸ್ಯರಾದ ಬೋರಯ್ಯ, ಎಸ್.ಪಿ. ಕೃಷ್ಣೇಗೌಡ, ತಾ.ಪಂ. ಮಾಜಿ ಸದಸ್ಯ ಚಿಕ್ಕಮರಿಯಪ್ಪ, ಟಿಎಪಿಸಿಎಂಎಸ್ ನಿರ್ದೇಶಕ ಚಂದ್ರನಾಯಕ್, ವಿಎಸ್ಎಸ್ಎನ್ಬಿ ನಿರ್ದೇಶಕ ಡಾಬಾ ಕಿಟ್ಟಿ, ಗ್ಲೋಬಲ್ ಇಂಟರ್ ನ್ಯಾಷನಲ್ ಸ್ಕೂಲ್ ಅಧ್ಯಕ್ಷ ಶಿವನಂಜಯ್ಯ, ಮುಖಂಡರಾದ ಮನುಕುಮಾರ್, ಹನುಮಂತೇಗೌಡ, ಅಕ್ಷರಂ ವೆಂಕಟೇಶ್, ಉದ್ಯೋಗ ವಿನಿಮಯ ಅಧಿಕಾರಿ ವೇಣುಗೋಪಾಲ್, ಯುವ ಘಟಕದ ಅಧ್ಯಕ್ಷ ಸುನೀಲ್, ಬಾಲು, ಶಿವಮಲ್ಲಪ್ಪ ಇತರರಿದ್ದರು.