Friday, September 20, 2024

ಪ್ರಾಯೋಗಿಕ ಆವೃತ್ತಿ

ಜಿಲ್ಲಾಧಿಕಾರಿಗಳ ಮೂಲಕ ಮನವಿ ನೀಡಲು ಮುಂದಾದ ಕರ್ನಾಟಕ ಜನಶಕ್ತಿಯ ಮುಖಂಡರ ಬಂಧನ

  • ಮನವಿ ನೀಡಲು ಮುಂದಾದ ಕರ್ನಾಟಕ ಜನಶಕ್ತಿ ಸಂಘಟನೆಯ ಮುಖಂಡರ ಬಂಧನ
  • ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಬಿಡುಗಡೆ ಮಾಡಿ ಜಿಲ್ಲಾಧಿಕಾರಿಗಳಿಗೆ ಹಕ್ಕೊತ್ತಾಯ ಸಲ್ಲಿಸಲು ಅವಕಾಶ ಮಾಡಿಕೊಡಬೇಕು
  • ಬಿಡುಗಡೆ ಗೊಳಿಸದಿದ್ದರೆ ಪೊಲೀಸರ ವಿರುದ್ಧ ಕಾನೂನು ಕ್ರಮ :ಸಂಘಟನೆಗಳ ಪರ ವಕೀಲರಾದ   ಬಿ. ಟಿ. ವಿಶ್ವನಾಥ್

ಇಂದು ಮಂಡ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಜಿಲ್ಲಾಧಿಕಾರಿಗಳ ಮೂಲಕ ಜಿಲ್ಲೆಯನ್ನು ಭಾದಿಸುತ್ತಿರುವ ಸಮಸ್ಯೆಗಳ ಬಗೆಹರಿಸುವಂತೆ ಮನವಿ ನೀಡಲು ಮುಂದಾದ ಕರ್ನಾಟಕ ಜನಶಕ್ತಿ ಮತ್ತು ಮಹಿಳಾ ಮುನ್ನಡೆಯ ಸಂಘಟನೆಯ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ.

ಮಂಡ್ಯ ಜಿಲ್ಲೆಯನ್ನು ಕಾಡುತ್ತಿರುವ ಬೆಲೆಯೇರಿಕೆ, ಮಹಿಳೆಯರ ಮೇಲಿನ ಅತ್ಯಾಚಾರಗಳು, ರೈತರ ಸಮಸ್ಯೆ ಮತ್ತು ಕಾರ್ಖಾನೆಗಳಲ್ಲಿ ದುಡಿವವರಿಗೆ ಕೆಲಸದ ಅವಧಿ ಹೆಚ್ಚಳದಂತಹ ಸಮಸ್ಯೆಗಳನ್ನು ಈ ಕೂಡಲೇ ನಿಯಂತ್ರಣಕ್ಕೆತರುವಂತೆ ಆಗ್ರಹ ಪತ್ರ ನೀಡಲು ಮುಂದಾದ ಕರ್ನಾಟಕ ಜನಶಕ್ತಿ ಸಂಘಟನೆಯ ಸಿದ್ದರಾಜು,  ಮಹಿಳಾ ಮುನ್ನಡೆಯ  ಪೂರ್ಣಿಮಾ, ಶಿಲ್ಪ ಮತ್ತು ನಗರಗೆರೆ ಜಗದೀಶ್‌ರವರನ್ನು ಬಂಧಿಸಿಡಲಾಗಿದೆ.

ದಿನಬಳಕೆ ವಸ್ತುಗಳ ಬೆಲೆಗಳು ಹಿಂದೆಂದೂ ಇಲ್ಲದ ಪ್ರಮಾಣದಲ್ಲಿ ದುಬಾರಿಯಾಗಿದೆ. ಜೀವನ ವೆಚ್ಚವನ್ನು ನಿರ್ವಹಿಸುವ ಹೊಣೆ ಹೊತ್ತ ಹೆಣ್ಣುಜೀವಗಳು ಇಂತಹ ಬೆಲೆಯೇರಿಕೆಯನ್ನು ಸಹಿಸಲಾಗದೆ ನಲುಗುತ್ತಿವೆ. ಬಡವರು, ದಲಿತ-ದಮನಿತರು ಮತ್ತು ಮಹಿಳೆಯರ ಬದುಕನ್ನು ನರಕವಾಗಿಸಿರುವ ಬೆಲೆಯೇರಿಕೆಯನ್ನು ಕೂಡಲೇ ನಿಯಂತ್ರಿಸಬೇಕು ಎಂದು ಒತ್ತಾಯಿಸಲಾಗಿತ್ತು.

ಮಹಿಳೆಯರ ಮೇಲಿನ ಅತ್ಯಾಚಾರಗಳು ಒಂದೆಡೆ ವಿಪರೀತ ಏರಿಕೆಯಾಗುತ್ತಿದ್ದರೆ, ಮತ್ತೊಂದೆಡೆ ಅದರ ಬರ್ಬರತೆಯೂ ಹೆಚ್ಚುತ್ತಿದೆ. ಪುಟ್ಟ ಮಕ್ಕಳೂ ಈ ದೌರ್ಜನ್ಯದಿಂದ ಕೊಲೆಯಾಗುತ್ತಿರುವ ಕ್ರೂರವಾದ ಸಂದರ್ಭದಲ್ಲಿ, ಅತ್ಯಾಚಾರಿಗಳನ್ನು ನೀವು ಪ್ರತಿನಿಧಿಸುವ ಪಕ್ಷವು ಆಳ್ವಿಕೆಯಲ್ಲಿರುವ ರಾಜ್ಯಗಳಲ್ಲಿ ಶಿಕ್ಷೆಯಿಂದ ವಿನಾಯಿತಿ ನೀಡಿ ಬಿಡುಗಡೆ ಮಾಡುತ್ತಿರುವುದು, ಅತ್ಯಾಚಾರಿಗಳನ್ನುರಕ್ಷಣೆ ಮಾಡುತ್ತಿರುವುದು, ಜೊತೆಗೆ ಮಹಿಳೆಯರ ಮೇಲಿನ ಅತ್ಯಾಚಾರಗಳಿಗೆ ಕರೆಕೊಡುವ ವ್ಯಕ್ತಿಗಳೀಗೂ ಪಕ್ಷದ ಮುಖ್ಯ ಹುದ್ದೆಗಳಲ್ಲಿ ಮುಂದುವರೆಯುವ ಅವಕಾಶ ನೀಡುತ್ತಿರುವುದು ತೀವ್ರವಾಗಿ ಖಂಡನಾರ್ಹ. ವಿಶೇಷವಾಗಿ ದಲಿತ, ಅಲ್ಪಸಂಖ್ಯಾತ, ದುಡಿಯುವ ಮಹಿಳೆಯರ ಮೇಲಿನ ಅತ್ಯಾಚಾರಗಳ ವಿಚಾರದಲ್ಲಿ ಸರ್ಕಾರದ ಸಮ್ಮತಿಯು ನಿಚ್ಚಳವಾಗಿ ಕಾಣುತ್ತಿದೆ. ಭಾರತದ ಮಹಿಳೆಯರೂ ಕೂಡಾ ಈ ದೇಶದ ಪ್ರಜೆಗಳೇ. ಅವರಿಗೆ ಸಂವಿಧಾನ ಬದ್ಧವಾದ ರಕ್ಷಣೆಯ ಹಕ್ಕನ್ನು ನಾವು ಆಗ್ರಹಿಸುತ್ತೇವೆ ಎಂದ ಹಕ್ಕೊತ್ತಾಯ ಪತ್ರದಲ್ಲಿ ತಿಳಿಸಲಾಗಿದೆ.

ಮಂಡ್ಯ ಜಿಲ್ಲೆಯು ಎಲ್ಲಾ ರೀತಿಯ ಸಂಪತ್ತು ಹೊಂದಿದ್ದರೂ ಸಹ ಅದರ ಫಲ ಜಿಲ್ಲೆಯ ಜನರಿಗೆ ಸಿಗುತ್ತಿಲ್ಲ. ಮುಖ್ಯವಾಗಿ ರೈತರು ಎಷ್ಟೇ ಬೆಳೆದರೂ ಸಮರ್ಪಕ ಬೆಲೆ ಇಲ್ಲದೆ ಕಷ್ಟ ಅನುಭವಿಸುತ್ತಿದ್ದಾರೆ. ಇನ್ನು ನೀವು ಜಾರಿಗೊಳಿಸಿದಂತಹ ಕರಾಳ ಕೃಷಿ ಕಾನೂನುಗಳನ್ನು ವಾಪಸ್ ಪಡೆದರೂ ಸಹ ರಾಜ್ಯ ಸರ್ಕಾರ ವಾಪಸ್ ಪಡೆಯದ ಕಾರಣ ರೈತರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಕೂಡಲೇ ರಾಜ್ಯದ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಬೇಕು ಮತ್ತು ಎಂಎಸ್‌ಪಿ ಜಾರಿಗೊಳಿಸಬೇಕೆಂದು ಆಗ್ರಹಿಸುತ್ತಿದ್ದೇವೆ ಎಂದಿದ್ದಾರೆ. ಜೊತೆಗೆ ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗಧಿ ಮಾಡಬೇಕೆಂದು ಒತ್ತಾಯಿಸಲಾಗಿದೆ.

ಈಚೆಗೆ ತಮ್ಮದೇ ಪಕ್ಷ ಆಳ್ವಿಕೆಯಲ್ಲಿರುವ ನಮ್ಮ ರಾಜ್ಯದಲ್ಲಿ ಮಹಿಳೆಯರನ್ನೂ ಒಳಗೊಂಡಂತೆ ಎಲ್ಲ ಕಾರ್ಮಿಕರ ಕೆಲಸದ ಅವಧಿಯನ್ನು ಹೆಚ್ಚಳ ಮಾಡಿರುವುದು, ಮಹಿಳಾ ಕಾರ್ಮಿಕರಿಗೆ ಯಾವುದೇ ವಿಶೇಷ ರಕ್ಷಣೆಯ ನೀತಿಯಿಲ್ಲದೆ ರಾತ್ರಿಪಾಳಿಯಲ್ಲಿ ಕೆಲಸ ಮಾಡುವ ಅವಕಾಶ ನೀಡಿರುವುದು ಅತಿದೊಡ್ಡ ಕಾರ್ಮಿಕ ವಿರೋಧೀತನವಾಗಿದೆ. ಎಲ್ಲ ಕಾರ್ಮಿಕರಿಗೂ ಇದು ಹಾನಿಕರವಾದರೂ ಮಹಿಳಾ ಕಾರ್ಮಿಕರು ಈಗಾಗಲೇ ಮನೆಗೆಲಸ ಮತ್ತು ಹೆಚ್ಚು ಶ್ರಮಹಾಕಬೇಕಾದ ಹೊರಗಿನ ಕೆಲಸ ಎರಡರ ಹೊರೆಯನ್ನೂ ಹೊತ್ತವರಾಗಿ, ಹೆಚ್ಚುವರಿ ಕೆಲಸದ ಅವಧಿಯು ಅವರ ಆರೋಗ್ಯ ಮತ್ತು ಬದುಕಿನ ಮೇಲೆ ಅತ್ಯಂತ ಗಂಭೀರವಾದ ದುಷ್ಪರಿಣಾಮವನ್ನು ಬೀರುತ್ತದೆ ಎಂದು ತಿಳಿಸಲಾಗಿದೆ.

ಈ ಎಲ್ಲ ವಿಷಯಗಳಲ್ಲೂ ಕೂಡಲೇ ನಿಯಂತ್ರಿಸಿ, ಮಹಿಳಾ ವಿರೋಧಿ, ಜನವಿರೋಧಿ ನೀತಿಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸುತ್ತೇವೆ. ಇವಿಷ್ಟೇ ಅಲ್ಲದೆ, ಬಡಜನರ ಭೂಮಿ ಮತ್ತು ವಸತಿಯ ಹಕ್ಕನ್ನು ಕಸಿಯುವ ಪ್ರಯತ್ನಗಳನ್ನು, ಅಲ್ಪಸಂಖ್ಯಾತರು ಮತ್ತು ಅಂಚಿಗೊತ್ತಲ್ಪಟ್ಟವೆ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಈ ತಕ್ಷಣದಲ್ಲೇ ನಿಲುಗಡೆಗೆ ತರಬೇಕು. ಸಂವಿಧಾನಬದ್ಧವಾದ, ಪ್ರಜಾತಾಂತ್ರಿಕ, ಜಾತ್ಯತೀತ, ನಾಗರೀಕವಾದ ಬದುಕಿನ ಪರಿಸ್ಥಿತಿಯನ್ನು ಕಲ್ಪಿಸಬೇಕೆಂದು ನೀವಿಂದು ಭೇಟಿಕೊಡುತ್ತಿರುವ ಮಂಡ್ಯ ಜಿಲ್ಲೆಯ ಎಲ್ಲ ಜನತೆ ಮತ್ತು ಮಹಿಳೆಯರ ಪರವಾಗಿ ಈ ಮೂಲಕ ಆಗ್ರಹಿಸುತ್ತಿದ್ದೇವೆ. ಈ ಹಕ್ಕೊತ್ತಾಯ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಇಲ್ಲದಿದ್ದರೆ ಪೊಲೀಸ್ ಠಾಣೆಯಲ್ಲಿಯೇ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಬಂಧಿತ ಹೋರಾಟಗಾರರು ತಿಳಿಸಿದ್ದಾರೆ.

ದೇಶದ ಪ್ರಜೆಗಳಾಗಿ ಗೌರವಯುತವಾಗಿ ಹಕ್ಕೊತ್ತಾಯ ಸಲ್ಲಿಸಲು ಬಂದ ನಮ್ಮನ್ನು ತಡೆದು ಪೊಲೀಸರು ನಮ್ಮ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ಕೂಡನೇ ನಮ್ಮನ್ನು ಬಿಡುಗಡೆ ಮಾಡಿ ಜಿಲ್ಲಾಧಿಕಾರಿಗಳಿಗೆ ಹಕ್ಕೊತ್ತಾಯ ಸಲ್ಲಿಸಲು ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಪೊಲೀಸ್ ಠಾಣೆಯಲ್ಲಿಯೇ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಬಂಧಿತ ಹೋರಾಟಗಾರರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಠಾಣೆಯಿಂದಲೇ ಪತ್ರ ಬರೆದಿದ್ದಾರೆ.

ಪೊಲೀಸರು ಈ ಕೂಡಲೇ ಬಂಧಿತ ಮುಖಂಡರನ್ನು ಬಿಡುಗಡೆಗೊಳಿಸದಿದ್ದರೆ ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳ ಬೇಕಾಗುತ್ತದೆ ಎಂದು ಪ್ರತಿಭಟನಾಕಾರರ ಪರವಾಗಿ ಠಾಣೆಗೆ ಹಾಜರಾದ ಹಾಜರಾದ ಪ್ರಗತಿಪರ ಸಂಘಟನೆಗಳ ಪರ ವಕೀಲರಾದ ಬಿ. ಟಿ. ವಿಶ್ವನಾಥ್ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!