ನೋಟಿಸ್ ಇಲ್ಲದೆ ಮೈಸೂರಿನ ʻಒಡನಾಡಿʼ ಸಂಸ್ಥೆಗೆ ನುಗ್ಗಿದ್ದ ಚಿತ್ರದುರ್ಗ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ ಮತ್ತು ಪರಶುರಾಮ್ ಅವರು ಕರ್ನಾಟಕ ಸರ್ಕಾರದ ಗೃಹ ಕಾರ್ಯದರ್ಶಿ, ಮೈಸೂರು ಪೊಲೀಸ್ ಆಯುಕ್ತರು ಹಾಗೂ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಏನಿದೆ?
ನ.30ರಂದು ಯಾವುದೇ ನೋಟಿಸ್ ಇಲ್ಲದೆ ಚಿತ್ರದುರ್ಗದ 10ಕ್ಕೂ ಹೆಚ್ಚು ಪೊಲೀಸರು ಒಡನಾಡಿಯ ಮಡಿಲು ಪುನರ್ವಸತಿ ಕೇಂದ್ರಕ್ಕೆ ನುಗ್ಗಿ ಶೋಧ ನಡೆಸುತ್ತಿದ್ದರು. ಸಂಸ್ಥೆಯ ನಿರ್ದೇಶಕರಾದ ನಾವು (ಸ್ಟ್ಯಾನ್ಲಿ, ಪರಶುರಾಮ್) ಅವರನ್ನು ತಡೆದು ‘ನೋಟಿಸ್ ಇಲ್ಲದೆ ಹೀಗೆ ಹುಡುಕಾಟ ನಡೆಸುವುದು ಸರಿಯಲ್ಲ. ಮಕ್ಕಳ ಕಲ್ಯಾಣ ಸಮಿತಿಯೊಂದಿಗೆ ಬಂದು ಶೋಧ ನಡೆಸಬೇಕು. ಈ ಕಾನೂನು ಅರಿವು ನಿಮಗಿಲ್ಲವೇ’ ಎಂದು ಪ್ರಶ್ನಿಸಿದೆವು.
“ಆಗ, ಪೊಲೀಸರು ಸಿಡಬ್ಲ್ಯೂಸಿ ಎಂದು ಭಾವಿಸಿ ಇಲ್ಲಿಗೆ ಬಂದಿರುವುದಾಗಿ ಹೇಳಿದರು. ಈ ಹಿಂದೆಯೂ ಆ ಪೊಲೀಸರು ನಮ್ಮ ಸಂಸ್ಥೆಗೆ ಬಂದಿದ್ದರು. ಹೀಗಿರುವಾಗ ಸಿಡಬ್ಲ್ಯೂಸಿ ಎಂದು ಹೇಗೆ ತಿಳಿದಿರಿ ಎಂದು ಪ್ರಶ್ನಿಸಿದೆ. ಇದಕ್ಕೆ ಸರಿಯಾಗಿ ಉತ್ತರ ನೀಡದ ಚಿತ್ರದುರ್ಗ ಪೊಲೀಸರು, ಸಂಸ್ಥೆಯಿಂದ ಹೊರ ಹೋಗಿ ಯಾರೊಂದಿಗೋ ಮೊಬೈಲ್ನಲ್ಲಿ ಮಾತನಾಡಿದರು. ಬಳಿಕ, ಯಾಕೆ ನೀವು ಇಲ್ಲಿಗೆ ಬಂದಿದ್ದು ಎಂದು ಕೇಳಿದಾಗ ಒಬ್ಬ ಹೆಣ್ಣು ಮಗಳನ್ನು ಕರೆ ತಂದಿರುವುದಾಗಿ ಒಬ್ಬ ಪೊಲೀಸರು ಹೇಳಿದರು. ಅವರ ಜತೆಯಲ್ಲಿದ್ದ ಮತ್ತೊಬ್ಬ ಸಿಬ್ಬಂದಿ ಅದನ್ನು ಅಲ್ಲಗಳೆಯುತ್ತಾರೆ. ನಾವು ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡದೆ ಅವರು ಗಾಬರಿಯಾಗಿ ಅಲ್ಲಿಂದ ತೆರಳಿದ್ದಾರೆ.
ಹೀಗೆ ಏಕಾಏಕಿ ಸಂಸ್ಥೆಯ ಒಳಗೆ ನುಗ್ಗಿದ ಪೊಲೀಸರು ವಿಚಿತ್ರವಾಗಿ ವರ್ತಿಸಿದರು. ಮಾತ್ರವಲ್ಲದೆ, ಹೊರಗೆ ಹೋಗಿ ಮತ್ಯಾರ ಜತೆಯಲ್ಲೋ ಫೋನಿನಲ್ಲಿ ಮಾತನಾಡುವುದರ ಮೂಲಕ ಮಕ್ಕಳಿರುವ ಸ್ಥಳದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ. 10 ಮಂದಿ ಪೊಲೀಸರ ಪೈಕಿ ಇಬ್ಬರು ಮಹಿಳಾ ಸಿಬ್ಬಂದಿ ಇದ್ದರು.
ಮುರುಘಾ ಶರಣರ ಪ್ರಕರಣ ಸಂಬಂಧ ಮೊನ್ನೆಯಷ್ಟೇ ಅಧಿಕಾರಿಗಳು ಸಂಸ್ಥೆಗೆ ಬಂದು ತನಿಖೆ ನಡೆಸಿ ಹೋಗಿದ್ದಾರೆ. “ನ.30ರಂದು ಮುರುಘಾ ಶ್ರೀ ಪ್ರಕರಣ ಸಂಬಂಧ ವಿಚಾರಣೆ ಇತ್ತು ಎನ್ನಲಾಗಿದ್ದು, ಸಂಸ್ಥೆಯಲ್ಲಿ ಯಾರೂ ಇರುವುದಿಲ್ಲ. ಮಕ್ಕಳನ್ನು ಸುಲಭವಾಗಿ ಕರೆದುಕೊಂಡು ಹೋಗಬಹುದು ಎಂದು ದಿಢೀರ್ ಆಗಮಿಸಿದ್ದಾರೆ.”
ಆದರೆ, ನಾವು ಸಂಸ್ಥೆಯಲ್ಲಿಯೇ ಇದ್ದುದರಿಂದ ಅವರು ಹಿಂತಿರುಗಿದ್ದಾರೆ. ಸಂಸ್ಥೆಯಲ್ಲಿ ಭಯದ ವಾತಾವರಣ ಸೃಷ್ಟಿಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಅವರು ಒತ್ತಾಯಿಸಿದ್ದಾರೆ.