ಎಂಟು ದಿನಗಳ ಅನಿಶ್ಚಿತತೆ ಮತ್ತು ಗೊಂದಲದ ಬಳಿಕ, ಕೊನೆಗೂ ರಾಹುಲ್ ಗಾಂಧಿ ಮುನ್ನಡೆಸುವ ‘ಭಾರತ ಜೋಡೋ ನ್ಯಾಯ ಯಾತ್ರೆ’ ಇಂಫಾಲ್ನಿಂದ ಪ್ರಾರಂಭಿಸಲು ಬಿಜೆಪಿ ನೇತೃತ್ವದ ಮಣಿಪುರ ಸರ್ಕಾರ ಅನುಮತಿ ನೀಡಿದೆ.
ಇಂಫಾಲ್ ಪೂರ್ವ ಜಿಲ್ಲೆಯ ಸಾರ್ವಜನಿಕ ಮೈದಾನದಲ್ಲಿ ಸೀಮಿತ ಸಂಖ್ಯೆಯ ಜನರೊಂದಿಗೆ ಧ್ವಜಾರೋಹಣದ ಮೂಲಕ ಯಾತ್ರೆಗೆ ಚಾಲನೆ ನೀಡಲು ಸರ್ಕಾರ ಅನುಮತಿ ನೀಡಿದೆ. ಜನವರಿ 14ರಂದು ರಾಹುಲ್ ಗಾಂಧಿಯ ಯಾತ್ರೆ ಪ್ರಾರಂಭಗೊಳ್ಳಲಿದೆ.
“ನಾವು ಯಾತ್ರೆ ಉದ್ಘಾಟನೆಗೆ ಅನುಮತಿ ಕೋರಲು ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರ ನಿವಾಸಕ್ಕೆ ತೆರಳಿದ್ದೆವು. ಆದರೆ, ಅವರು ಅನುಮತಿ ನೀಡಲು ನಿರಾಕರಿಸಿದ್ದಾರೆ” ಎಂದು ಬುಧವಾರ ಕಾಂಗ್ರೆಸ್ ನಾಯಕರು ಮಾಧ್ಯಮಗಳಿಗೆ ತಿಳಿಸಿದ್ದರು. ಈ ಬೆನ್ನಲ್ಲೇ ಇಂಫಾಲ್ ಜಿಲ್ಲಾಡಳಿತ ಶರತ್ತುಬದ್ಧ ಅನುಮತಿ ನೀಡಿದೆ.
ಅನುಮತಿ ದೊರೆಯುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮಣಿಪುರ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೇಶಾಮ್ ಮೇಗಾಚಂದ್ರ, “ಇಂಫಾಲ್ ಪೂರ್ವ ಜಿಲ್ಲೆಯ ಹಟ್ಟಾ ಕಾಂಗ್ಜೆಬುಂಗ್ನ ಸಾರ್ವಜನಿಕ ಮೈದಾನದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ಉದ್ಘಾಟನೆಗೆ ಅನುಮತಿ ಕೋರಿ ನಾವು ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದೆವು. ಅವರು ಅನುಮತಿ ನೀಡಲು ನಿರಾಕರಿಸಿದ್ದಾರೆ” ಎಂದಿದ್ದರು.
ಅಸ್ಸಾಂನ ಬಿಜೆಪಿ ಸರ್ಕಾರವೂ ರಾಜ್ಯದಲ್ಲಿ ಕಾಂಗ್ರೆಸ್ ಯಾತ್ರೆಯನ್ನು ತಡೆಯಲು ಪ್ರಯತ್ನಿಸುತ್ತಿದೆ ಎಂದು ಅಸ್ಸಾಂ ಕಾಂಗ್ರೆಸ್ ಘಟಕದ ಅಧ್ಯಕ್ಷ ಭೂಪೇನ್ ಬೋರಾ ಹೇಳಿದ್ದಾರೆ. “ಜೋರ್ಹತ್ನ ಕಾಲೇಜು ಮೈದಾನದಲ್ಲಿ ತರಗತಿ ನಡೆಯದ ಸಮಯ ರಾತ್ರಿ ಹೊತ್ತು ನಮ್ಮ ಕಂಟೇನರ್ಗಳನ್ನು ನಿಲ್ಲಿಸಲು ಅನುಮತಿ ಸಿಕ್ಕಿಲ್ಲ. ಬ್ರಹ್ಮಪುತ್ರ ನದಿಯ ಮೂಲಕ ಮಜುಲಿ ದ್ವೀಪಕ್ಕೆ ಪ್ರಯಾಣಿಸಲು ನಮಗೆ ಬೋಟ್ ಸೇವೆಯನ್ನೂ ನಿರಾಕರಿಸಿಲಾಗಿದೆ” ಎಂದು ಅವರು ತಿಳಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ರಾಹುಲ್ ಗಾಂಧಿ ಮುಂದಿನ ಭಾನುವಾರ ಬೆಳಿಗ್ಗೆ ಇಂಫಾಲ್ಗೆ ತೆರಳಲಿದ್ದಾರೆ. ಸರ್ಕಾರ ಇಂಫಾಲ್ ಮೈದಾನದಲ್ಲಿ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ ಹಿನ್ನೆಲೆ ಕಾಂಗ್ರೆಸ್ ನಾಯಕರು ಪರ್ಯಾಯ ಸ್ಥಳ ಹುಡುಕುತ್ತಿದ್ದರು. ಈಗ ಸರ್ಕಾರ ಅನುಮತಿ ನೀಡಿದೆ. ಹಾಗಾಗಿ, ಅಲ್ಲಿಯೇ ಕಾರ್ಯಕ್ರಮ ನಡೆಯುತ್ತದಾ, ಇಲ್ಲ ಬೇರೆ ಸ್ಥಳವನ್ನು ಹುಡುಕುತ್ತಾರಾ ಎಂಬುವುದು ಖಚಿತವಾಗಿಲ್ಲ.
ಭಾರತ್ ಜೋಡೋ ನ್ಯಾಯ್ ಯಾತ್ರೆಯು, 66 ದಿನಗಳಲ್ಲಿ 110 ಜಿಲ್ಲೆಗಳು, 100 ಲೋಕಸಭಾ ಕ್ಷೇತ್ರಗಳು ಮತ್ತು 337 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸುವ ಮೂಲಕ 6,713 ಕಿಮೀ ದೂರವನ್ನು ಬಸ್ ಮತ್ತು ಕಾಲ್ನಡಿಗೆಯ ಮೂಲಕ ಕ್ರಮಿಸಲಿದೆ. ರಾಹುಲ್ ಗಾಂಧಿ ಜನವರಿ 14 ರಂದು ಇಂಫಾಲ್ನಿಂದ ಯಾತ್ರೆ ಪ್ರಾರಂಭಿಸಲಿದ್ದಾರೆ. ಇದು ಮಾರ್ಚ್ 20 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ.