ಚಾರ್ವಾಕ ವೈಚಾರಿಕ ಮಹಾಮನೆ ಸಂಸ್ಥೆಯ ವತಿಯಿಂದ ಜುಲೈ 28ರಂದು ಬೆಳಗ್ಗೆ 11.30 ಗಂಟೆಗೆ ದಮನಿತರ ಬಂಗಾರದ ದಿನ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಅಭಿನಂದನಾ ಸಮಾರಂಭವನ್ನು ಮಂಡ್ಯ ತಾಲೂಕಿನ ಕಾಗೆಮಂಟಿ, ಬೋರೇಗುಡ್ಡದ ಚಾರ್ವಾಕ ವೈಚಾರಿಕ ಮಹಾಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಚಾರ್ವಾಕ ವೈಚಾರಿಕ ಮಹಾಮನೆ ಸಂಸ್ಥೆಯ ಮುಖ್ಯಸ್ಥ ಹಾಗೂ ರಂಗ ನಿರ್ದೇಶಕ ಮಾಚಳ್ಳಿ ಗಿರೀಶ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೋರೇ ಗುಡ್ಡದಲ್ಲಿ ಹಲವಾರು ವರ್ಷಗಳಿಂದ ಸಂಸ್ಥೆಯನ್ನು ರಚಿಸಿಕೊಂಡು ಹಲವು ಚಟುವಟಿಕೆ ನಡೆಸಿಕೊಂಡು ನಾಟಕ ಪ್ರದರ್ಶನಗಳನ್ನು ನೀಡಲಾಗುತ್ತಿದೆ. ಈ ಸ್ಥಳದಲ್ಲಿ ಬುದ್ಧ, ಬಸವಣ್ಣ, ಅಂಬೇಡ್ಕರ್ ಹಾಗೂ ಮಂಟೇಸ್ವಾಮಿ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಅಂದು ಮನಸ್ಮೃತಿ ಮತ್ತು ಭಾರತ ಸಂವಿಧಾನ ಕುರಿತು ನಾಟಕ ಪ್ರದರ್ಶನ ನಡೆಯಲಿದ್ದು ನಾಟಕವನ್ನು ತಾವೇ ರಚಿಸಿರುವುದಾಗಿ ತಿಳಿಸಿದರು. ಲೋಕಸಭಾ ಸದಸ್ಯ ಸುನಿಲ್ ಬೋಸ್ ಅವರು ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಅಭಿನಂದಿಸಲಿದ್ದು ಮುಖ್ಯ ಅತಿಥಿಗಳಾಗಿ ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ದರ್ಶನ್ ಪುಟ್ಟಣ್ಣಯ್ಯ, ಶೋಷಿತ ಸಮಾಜಗಳ ಒಕ್ಕೂಟದ ರಾಜ್ಯಾಧ್ಯಕ್ಷ ರಾಮಚಂದ್ರಪ್ಪ, ಅಭಿನಂದನ ಸಮಿತಿಯ ಅಧ್ಯಕ್ಷ ಅಹಿಂದ ಜವರಪ್ಪ, ರಾಜ್ಯ ಸಂಚಾಲಕ ಎಂ.ಸಿ ಶಿವಪ್ರಸಾದ್, ಅಭಿನಂದನಾ ಸಮಿತಿ ಸಂಚಾಲಕ ಎಂ ಪಿ ಪರಮೇಶ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಮಾನವ ಬಂಧುತ್ವ ವೇದಿಕೆಯ ದೇವರಾಜ ಕೊಪ್ಪ, ರಾಜ್ಯ ವೈಜ್ಞಾನಿಕ ಪರಿಷತ್ ಮಂಡ್ಯ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ, ಮಹಿಳಾ ಸಂಘಟನೆಯ ಜಯ ಸುಧಾ ಉಪಸ್ಥಿತರಿದ್ದರು.