ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಗ್ರಾಮೀಣ ಪ್ರದೇಶದ ರೈತರ ಕೃಷಿ ಕೊಳವೆ ಬಾವಿಗಳಿಗೆ ಹಗಲು ವೇಳೆ ಯಲ್ಲಿಯೇ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಲಾಗುವುದೆಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್
ಅಭ್ಯರ್ಥಿ ಆಯ್ಕೆ ಸಮಿತಿ ಸದಸ್ಯ ಎನ್.ಚಲುವರಾಯಸ್ವಾಮಿ ತಿಳಿಸಿದರು.
ನಾಗಮಂಗಲ ತಾಲೂಕಿನ ಗೊಂಡೇನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾ.ಪಂ.ವ್ಯಾಪ್ತಿಯ ಕಾಂಗ್ರೆಸ್ ಕಾರ್ಯ ಕರ್ತರ ಸಮಾವೇಶ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ರೈತರು ರಾತ್ರಿ ವೇಳೆಯಲ್ಲಿಯೂ ಕೃಷಿ ಚಟುವಟಿಕೆ ಮಾಡುವುದರಿಂದ ಅನೇಕ ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ತಪ್ಪಿಸಲು ರಾತ್ರಿಗೆ ಬದಲಾಗಿ ಹಗಲು ಸಮಯದಲ್ಲಿಯೇ ಗುಣಮಟ್ಟದ ವಿದ್ಯುತ್
ಪೂರೈಕೆ ಮಾಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ ಎಂದರು.
ಸಮಾನ ಅವಕಾಶ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ
ಸಮಾಜದ ಎಲ್ಲಾ ಸಮುದಾಯಗಳ ರಕ್ಷಣೆ ಮತ್ತು ಸಮಾನವಾದ ಅವಕಾಶ ಸಿಗುವುದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಒಕ್ಕಲಿಗ ಸಮುದಾಯ ಸೇರಿದಂತೆ ಎಲ್ಲ ಜಾತಿ ವರ್ಗಗಳ ಹಿತರಕ್ಷಣೆ ಮಾಡುವುದು ನಮ್ಮ ಪಕ್ಷದ ಮೂಲ ಉದ್ದೇಶವಾಗಿದೆ. ಒಕ್ಕಲಿಗ ಸಮುದಾಯಕ್ಕೆ ಈಗಿರುವ ಶೇ.4ರ ಮೀಸಲಾತಿಯನ್ನು ಶೇ.12ಕ್ಕೆ
ಏರಿಸುವಂತೆ ಸರ್ಕಾರದ ಗಮನ ಸೆಳೆಯಲು ಕುರಿತು ಹೋರಾಟದ ರೂಪುರೇಷೆಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ.
ಗುರುವಾರ ನಡೆದ ಒಕ್ಕಲಿಗರ ಮುಖಂಡರ ಸಭೆಯಲ್ಲಿ ಈ ತೀರ್ಮಾನ ಮಾಡಿದ್ದು, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥಶ್ರೀಗಳ ನೇತೃತ್ವದಲ್ಲಿ ನಡೆಯುವ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಪೂರ್ಣ
ಬೆಂಬಲ ನೀಡಲಿದೆ ಎಂದು ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಬೆಳೆಗಳಿಗೆ ಬೆಂಬಲ ಬೆಲೆ
ರೈತ ಬೆಳೆಯುವ ಬೆಳೆಗಳ ದರ ಕುಸಿತಗೊಂಡಿರುವ ಹಿನ್ನಲೆಯಲ್ಲಿ ಗ್ರಾಮೀಣ ಪ್ರದೇಶದ ರೈತರು ತೀವ್ರ ಸಂಕಷ್ಟ
ಅನುಭವಿಸುವಂತಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರೈತರು ಬೆಳೆಯುವ ಯಾವುದೇ ಬೆಳೆಗಳು ಮಾರುಕಟ್ಟೆ ದರಕ್ಕಿಂತ ಕಡಿಮೆಯಾದರೆ ಅಂತಹ ಬೆಳೆಗಳಿಗೆ ಬೆಂಬಲ ಬೆಲೆ ನೀಡುವುದು ಮತ್ತು ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ ದಾರರಿಗೆ ತಲಾ 10ಕೆ.ಜಿ.ಅಕ್ಕಿಯನ್ನು ಸಂಪೂರ್ಣ ಉಚಿತವಾಗಿ
ನೀಡುವ ಕುರಿತು ಪಕ್ಷ ನಿರ್ಧರಿಸಿದೆ ಎಂದರು.
ಕಾAಗ್ರೆಸ್ ಪಕ್ಷ ನನ್ನ ಮೇಲೆ ಅಪಾರ ನಂಬಿಕೆ ವಿಶ್ವಾಸವಿಟ್ಟು ಕೆಪಿಸಿಸಿ ಉಪಾಧ್ಯಕ್ಷ ಸ್ಥಾನದ ಜೊತೆಗೆ 2023ರ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಆಯ್ಕೆ ಸಮಿಗೆ ಸದಸ್ಯನನ್ನಾಗಿ ನೇಮಿಸುವ ಮೂಲಕ ಹೆಚ್ಚಿನ ಹೊಣೆಗಾರಿಕೆ ನೀಡಿದೆ. ನಾನು ಶಾಸಕನಾಗಬೇಕೆಂದು ನಿಮ್ಮ ಮುಂದೆ ಬಂದಿಲ್ಲ. ಕ್ಷೇತ್ರಕ್ಕೆ ಆಗಬೇಕಿರುವ ಅಭಿವೃದ್ಧಿ ಕೆಲಸಗಳು ಬಹಳಷ್ಟಿವೆ. ಕ್ಷೇತ್ರದ ಕನಿಷ್ಠ 10ಸಾವಿರ ಮಂದಿ ಯುವಕರು ಮತ್ತು ಮಹಿಳೆಯರಿಗೆ
ಉದ್ಯೋಗ ಕಲ್ಪಿಸಲು ತಾಲೂಕಿನಲ್ಲಿ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಿ ತಾಲೂಕಿನ ಜನರು ಉದ್ಯೋಗ ಹರಸಿ ವಲಸೆ ಹೋಗುವುದನ್ನು ತಪ್ಪಿಸಬೇಕೆಂಬುದು ನನ್ನ ಮುಖ್ಯ ಉದ್ದೇಶವಾಗಿದೆ. ನನ್ನೆಲ್ಲಾ
ಕನಸುಗಳು ಸಾಕಾರಗೊಳ್ಳಬೇಕೆಂದರೆ ಕ್ಷೇತ್ರದ ಜನರು ನನ್ನನ್ನು ಬೆಂಬಲಿಸಿ ಮುಂದಿನ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಅಂತರದಿAದ ಗೆಲ್ಲಿಸಿಕಳುಹಿಸಬೇಕು ಎಂದು ಮನವಿ ಮಾಡಿದರು.
ಬೈಕ್ ರ್ಯಾಲಿ-ಜೆಸಿಬಿ ಯಂತ್ರದ ಮೂಲಕ ಪುಷ್ಪಾರ್ಚನೆ
ಗ್ರಾ.ಪಂ.ಮಟ್ಟದ ಕಾರ್ಯಕರ್ತರ ಸಮಾವೇಶದ ಹಿನ್ನಲೆಯಲ್ಲಿ ಕೈ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಚಾಮಲಾಪುರದಿಂದ ಗೊಂಡೇನಹಳ್ಳಿ ವರೆಗೆ ಬೃಹತ್ ಬೈಕ್ ರ್ಯಾಲಿ
ನಡೆಸಿದರು.
ರ್ಯಾಲಿಯಲ್ಲಿ ಆಗಮಿಸಿದ ಚಲುವರಾಯಸ್ವಾಮಿ ಅವರಿಗೆ ಜೆಸಿಬಿ ಯಂತ್ರಗಳ ಮೂಲಕ ಹೂ ಮಳೆ ಸುರಿಸಿ ಕೈ ಪಕ್ಷದ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು.
200ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಸೇರ್ಪಡೆ
ಗೊಂಡೇನಹಳ್ಳಿ ಗ್ರಾ.ಪಂ.ವ್ಯಾಪ್ತಿಯ 200ಕ್ಕೂ ಹೆಚ್ಚು ಮಂದಿ ಜೆಡಿಎಸ್ ಕಾರ್ಯಕರ್ತರು ಪಕ್ಷ ತೊರೆದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ತಾ.ಪಂ. ಮಾಜಿ ಅಧ್ಯಕ್ಷ ನವೀನ್ಕುಮಾರ್ ಮತ್ತು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಚ್.ಟಿ.ಕೃಷ್ಣೇಗೌಡ ಸಭೆ ಕುರಿತು ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮಾಜಿ ಅಧ್ಯಕ್ಷ ಎಂ.ಪ್ರಸನ್ನ, ತಾಲೂಕು ಎಸ್ಸಿಎಸ್ಟಿ ಘಟಕದ ಅಧ್ಯಕ್ಷ ಮಹೇಶ್, ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ರಾಜೇಗೌಡ, ಎಸ್ಎಲ್ಡಿಬಿ ನಿರ್ದೇಶಕ
ತಿಮ್ಮರಾಯಿಗೌಡ, ಜಿ.ಪಂ.ಮಾಜಿ ಸದಸ್ಯ ಕಂಚಹಳ್ಳಿ ಬಾಲಕೃಷ್ಣ, ಮುಖಂಡರಾದ ಸುನೀಲ್ ಲಕ್ಷ್ಮಿಕಾಂತ್, ವಜ್ರಣ್ಣ, ಅಣೆಚನ್ನಾಪುರ ಮಂಜೇಶ್, ಬಿ.ಕೆ.ನಾರಾಯಣ, ದೀಪು, ರಘು, ರಾಜೇಶ್, ಕಾರ್ತಿಕ್, ಸುಧಾಕರ್, ಕೃಷ್ಣಮೂರ್ತಿ, ದಿನೇಶ್ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಇದ್ದರು.