ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಕ್ರಮವನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಕಾಂಗ್ರೆಸ್ ಮುಖಂಡ ಶಿವನಂಜು ತಿಳಿಸಿದರು.
ಮಂಡ್ಯ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬ್ಲಾಕ್ ಮೇಲರ್ ಡಿ.ಜೆ.ಅಬ್ರಹಾಂ ಅವರು ನೀಡಿರುವ ಸುಳ್ಳು ದೂರಿನ ಮೇರೆಗೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಕ್ರಮ ಖಂಡನೀಯ ಎಂದು ಕಿಡಿಕಾರಿದರು. ಯಾವ ವ್ಯಕ್ತಿ ದೂರು ನೀಡಿದ್ದಾರೆ.ಆ ವ್ಯಕ್ತಿಯ ಹಿನ್ನೆಲೆ ಏನು ಎನ್ನುವುದನ್ನು ಗಮನಿಸದೆ ,ಕಾನೂನಿನಲ್ಲಿ ಅವಕಾಶ ಇದೆಯೋ ಇಲ್ಲವೋ ತಿಳಿಯದೆ ಬಿಜೆಪಿಯ ಕುಮ್ಮಕಿನಿಂದ ಅನುಮತಿ ನೀಡಿರುವುದು ಅಕ್ಷಮ್ಯ ಎಂದರು .
ಬಿಜೆಪಿ ರಾಜಭವನವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ರಾಜಭವನ ಈಗ ರಾಜಕೀಯ ಭವನವಾಗಿದ್ದು ರಾಜಪಾಲರು ಪಕ್ಷಪಾತ ಮಾಡುತ್ತಿದ್ದಾರೆ ಎಂದು ದೂರಿದರು. 2007 ರಲ್ಲಿ ಕುಮಾರಸ್ವಾಮಿ ಅವರು ಅಕ್ರಮ ಗಣಿಗಾರಿಕೆಗೆ ಅನುಮತಿ ನೀಡಿದ್ದಾರೆ. ಲೋಕಾಯುಕ್ತರು ಈ ಬಗ್ಗೆ ತನಿಖೆ ನಡೆಸಿ ಆರೋಪ ಸಾಬೀತಾಗಿದೆ. ಆದರೆ ಅವರಿಗೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿಲ್ಲ. ಹಾಗೆಯೇ ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ ,ಮುರುಗೇಶ್ ನಿರಾಣಿ ,ಮೈಷುಗರ್ ಮಾಜಿ ಅಧ್ಯಕ್ಷ ನಾಗರಾಜಪ್ಪ ಅವರು ಮಾಡಿರುವ ಆರೋಪಗಳು ಸಾಬೀತಾಗಿದ್ದರೂ ಪ್ರಾಸಿಕ್ಯೂಷನ್ ಗೆ ರಾಜಪಾಲರು ಅನುಮತಿ ನೀಡಿಲ್ಲ. ಇದರ ಹಿಂದೆ ದುರುದ್ದೇಶ ಅಡಗಿದೆ ಎಂದು ದೂರಿದರು.
ಕೇವಲ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಬಗ್ಗೆ ಪ್ರಾಸಿಕ್ಯೂಶನ್ನಿಗೆ ಅನುಮತಿ ನೀಡಲಾಗಿದೆ , ಇದರ ಹಿಂದೆ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರವಿದೆ, ರಾಜ್ಯಪಾಲರು ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿದ್ದಾರೆ ಎಂದು ಕಿಡಿ ಕಾರಿದರಲ್ಲವೇ ಈ ಬಗ್ಗೆ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಕಾಂಗ್ರೆಸ್ ಮುಖಂಡರಾದ ಸಿಎಂ ದ್ಯಾವಪ್ಪ, ಕೆ ಎಲ್ ನಾಗೇಂದ್ರ, ರಾಜಣ್ಣ, ಉಮ್ಮಡಹಳ್ಳಿ ನಾಗೇಶ್ ಉಪಸ್ಥಿತರಿದ್ದರು.