Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್ಸಿನ ’ಸಂಘಾ’ನುಸಂಧಾನ ಮತ್ತು ಸಂವಿಧಾನ

✍️ ಶಿವಸುಂದರ್

ಸ್ಪೀಕರ್ ಯು.ಟಿ. ಖಾದರ್ ಅವರು ಹೊಸದಾಗಿ ಅಯ್ಕೆಯಾದ 70 ಶಾಸಕರಿಗೆ ಶಾಸನ ಸಭೆಯ ನಡಾವಳಿ , ನೀತಿ ಮತ್ತು ನಿಯಮಗಳ ಬಗ್ಗೆ ತರಬೇತಿ ನೀಡುವ ಶ್ಲಾಘನೀಯ ಉದ್ದೇಶಕ್ಕಾಗಿ ಮೂರು ದಿನಗಳ ಶಿಬಿರವನ್ನು ಏರ್ಪಡಿಸಿದ್ದು ಸೂಕ್ತವಾಗಿಯೇ ಇದೆ.

ಆದರೂ ಅವರ ನಿರ್ಧಾರ ಬಿಜೆಪಿಯ ಆಳ್ವಿಕೆಯಿಂದ ಬೇಸತ್ತು ಬದಲಾವಣೆಯ ಆಶಯ ಹೊತ್ತು ಕಾಂಗ್ರೆಸ್ಸನ್ನು ಬೆಂಬಲಿಸಿದ ಬಹುಪಾಲು ಜನರಿಗೆ ಆತಂಕ ಹಾಗೂ ಬೇಸರ ತಂದಿರುವುದಕ್ಕೆ ಕಾರಣ ಅವರು ಆ ಅಧಿಕೃತ ಸರ್ಕಾರಿ ತರಬೇತಿ ಕಾರ್ಯಕ್ರಮದಲ್ಲಿ ಶಾಸಕರಿಗೆ ನೈತಿಕ ಪ್ರೇರಣೆ ಎಂಬ ವಿಷಯವನ್ನು ಸೇರಿಸಿ, ಅಂಥಾ ಪ್ರೇರಣೆ ನೀಡಲು ಅತ್ಯಂತ ವಿವಾದಾಸ್ಪದವಾದ ಹಾಗೂ ಧರ್ಮದ ಹೆಸರಿನಲಿ ಕೋಮುವಾದವನ್ನು ಬಿತ್ತುತ್ತಿರುವ ಅಥವಾ ಅದಕ್ಕೆ ಪೋಷಣೆ ನೀಡುತ್ತಿರುವ ವೀರೆಂದ್ರ ಹೆಗ್ಗಡೆ, ರವಿಶಂಕರ್ ಸ್ವಾಮೀಜಿ, ಗುರುರಾಜ್ ಕರ್ಜಗಿ ಮತ್ತು ಬ್ರಹ್ಮಕುಮಾರಿ ಆಶ್ರಮದವರನ್ನು ಆಹ್ವಾನಿಸಿದ್ದು.

ಇದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿವಾದ ಹಾಗೂ ಪ್ರತಿರೋಧಗಳನ್ನು ಹುಟ್ಟುಹಾಕಿದ ನಂತರ ಈಗ ರವಿಶಂಕರ್ ಸ್ವಾಮಿಜಿ ಹಾಗೂ ಕರ್ಜಗಿಯವರ ಹೆಸರು ಅಧಿಕೃತ ಆಹ್ವಾನ ಪತ್ರಿಕೆಯಲ್ಲಿ ಕಾಣುತ್ತಿಲ್ಲ. ಆದರೆ ವೀರೆಂದ್ರ ಹೆಗ್ಗಡೆ ಯವರ ಸಂಸ್ಥೆಯಲ್ಲೇ ಇದು ನಡೆಯುತ್ತಿದ್ದು ಅದರಲ್ಲಿ ಅವರು ಅಧಿಕೃತವಾಗಿ ಭಾಗವಹಿಸಿ ಅಶೀರ್ವಚನ ನೀಡುತ್ತಿದ್ದಾರೆ.

ವಿವಾದ ಭುಗಿಲೆದ್ದ ನಂತರ ವಿವಾದ ಹುಟ್ಟು ಹಾಕಿದವರ ವಿರುದ್ಧ ಅಸಹನೆಯಿಂದ ಪ್ರತಿಕ್ರಿಯಿಸಿದ ಸ್ಪೀಕರ್ ಖಾದರ್ ಅವರು “ಶಾಸಕರಲ್ಲಿ ಬೇರೆ ಬೇರೆ ಐಡಿಯಲಜಿಗೆ ಸೇರಿದವರಿದ್ದಾರೆ. ಹೀಗಿರುವಾಗ ನಾನು ಸ್ಪೀಕರ್ ಆಗಿ ಒಂದೇ ಐಡಿಯಾಲಜಿಗೆ ಸೇರಿದವರನ್ನು ಕರೆಯಲಾಗುತ್ತದೆಯೇ?” ಎಂದು ಸಿಡಿಮಿಡಿಗೊಂದು ತಮ್ಮ ತೀರ್ಮಾನವನ್ನು ಸಮರ್ಥಿಸಿಕೊಂಡಿದ್ದಾರೆ.

ಈ ಅಸಹನೆ ಖಾದರ್ ಅವರ ವೈಯಕ್ತಿಕ ಅಸಹನೆ ಮಾತ್ರವಲ್ಲದೆ ಸೆಕ್ಯುಲಾರಿಸಂ ನ ಗ್ರಹಿಕೆ ಮತ್ತು ಅದರ ಅನುಷ್ಠಾನದ ಬಗ್ಗೆ ಕಾಂಗ್ರೆಸ್ಸಿನ ಬಹುಪಾಲು ಹಿರಿಯ ನಾಯಕರಿಗಿರುವ ಅಸಹನೆಯ ಸಂಕೇತವೂ ಆಗಿದೆ. ಏಕೆಂದರೆ ಖಾದರ್ ಅವರ ಈ ಗ್ರಹಿಕೆ ಮತ್ತು ನಡೆ ಸಂವಿಧಾನದ ಆಶಯವನ್ನು ಅರ್ಥಮಾಡಿಕೊಳ್ಳುವಲ್ಲಿ ಹಾಗೂ ದೇಶದಲ್ಲಿ ಸಂಘಪರಿವಾರ ಎಬ್ಬಿಸಿರುವ ಧರ್ಮದ ಹೆಸರಿನ ಕೋಮುವಾದವನ್ನು ಗ್ರಹಿಸುವಲ್ಲಿ ಮತ್ತು ಅದನ್ನು ಎದುರಿಸುವಲ್ಲಿ ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ಅನುಸರಿಸಿಕೊಂಡು ಬಂದಿರುವ ಅನುಸಂಧಾನ ನೀತಿಯ ಮುಂದುವರೆಕೆಯೂ ಆಗಿದೆ. ಹೀಗಾಗಿ ಖಾದರ್ ಅವರ ಈ ನಡೆಯನ್ನು ಅವರ ವೈಯಕ್ತಿಕ ನಿರ್ಧಾರವೆಂದು ಭಾವಿಸಿದರೆ ತಪ್ಪಾದೀತು.

ಇದು ಕಾಂಗ್ರೆಸಿನ ಮೃದು ಹಿಂದೂತ್ವ ನೀತಿಯ ಮುಂದುವರೆಕೆಯೇ ಆಗಿದೆ.

ಹೀಗಾಗಿ ತಿದ್ದುಕೊಳ್ಳಬೇಕಿರುವುದು ಕೇವಲ ಖಾದರ್ ಅವರಲ್ಲ. ಬದಲಿಗೆ ಕಾಂಗ್ರೆಸ್ಸಿನ ಗ್ರಹಿಕೆಯ ಆಳದಲ್ಲಿರುವ ಈ ಮೃದು ಹಿಂದೂತ್ವದ ನೀತಿಗಳು ಬದಲಾಗದೆ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ಸನ್ನು ಗೆಲ್ಲಿಸಿದ ಜನರು ಮತ್ತೊಮ್ಮೆ ಮೋಸ ಹೋಗುವಂತಾಗುತ್ತದೆ.

ಸಂವಿಧಾನವೇ ಎಲ್ಲಾ ಶಾಸಕರ ಐಡಿಯಾಲಜಿಯಾಗಬೇಕಲ್ಲವೇ?

ಮೊದಲನೆಯದಾಗಿ ಸಭಾಧ್ಯಕ್ಷ ಸ್ಪೀಕರ್ ಅವರು ಆಹ್ವಾನಿಸಿದ ವ್ಯಕ್ತಿಗಳು ಧಾರ್ಮಿಕ ವ್ಯಕ್ತಿಗಳಲ್ಲ. ಬದಲಿಗೆ ಹಿಂದೂಗಳ ಧಾರ್ಮಿಕ ನಂಬಿಕೆಯನ್ನು ಬಳಸಿಕೊಂಡು ಪಾಶವೀ ರಾಜಕಾರಣ ಮಾಡುತ್ತಿರುವ ಸಂಘಪರಿವಾರದ ಮಹಾನ್ ಪೋಷಕರು. ಅವರ ಮೌಲ್ಯಗಳು ಮತ್ತು ಉಪದೇಶಗಳು ಸಂವಿಧಾನದ ಮೌಲ್ಯಗಳಿಗೆ ಬಾಹಿರವಾದವು. ಹೀಗಾಗಿ ಸಂವಿಧಾನವನ್ನು ಅನುಷ್ಠಾನಕ್ಕೆ ತರುವ ಜವಾಬ್ದಾರಿ ಹೊಂದಿರುವ ಶಾಸಕರ ತರಬೇತಿಗೆ ಮೌಲಿಕ ಪ್ರೇರಣೆಯನ್ನು ಈ ವ್ಯಕ್ತಿಗಳು ಹೇಗೆ ನೀಡಲು ಸಾಧ್ಯ? ಶಾಸಕರು ಬೇರೆಬೇರೆ ಐಡಿಯಾಲಜಿಗೆ ಸೇರಿದವರಾಗಿರಬಹುದು. ಆದರೆ ಅವರು ಒಮ್ಮೆ ಶಾಸಕರಾಗಿ ಸಂವಿಧಾನವನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಪ್ರಮಾಣ ಸ್ವೀಕರಿಸಿದ ಮೇಲೆ ಹೊಸ ಶಾಸಕರಿಗೆ ಕೊಡಬೇಕಿರುವ ಮೊದಲ ತರಬೇತಿ ಎಲ್ಲಾ ಶಾಸಕರ ಐಡಿಯಾಲಜಿ ಸಂವಿಧಾನವೇ ಆಗಿರಬೇಕೆಂಬುದಲ್ಲವೇ? ಹೀಗಾಗಿ ಸಂವಿಧಾನದ ಅನುಷ್ಠಾನದ ತರಬೇತಿಗೆ ಸಂವಿಧಾನವನ್ನು ಪ್ರತಿನಿತ್ಯ ಉಲ್ಲಂಘಿಸುವರನ್ನು ಕರೆಯಬಾರದೆಬ ಔಚಿತ್ಯ ಪ್ರಜ್ನೆ ಸ್ಪೀಕರ್ ಸಾಹೇಬರಿಗೆ ಇರಬೇಕಿತ್ತು.

ಶಾಸಕರಂತೆ ನಡೆದುಕೊಳ್ಳಲು ಯಾವ ಪ್ರೇರಣೆ ಬೇಕು?

ಅಷ್ಟು ಮಾತ್ರವಲ್ಲ. ಸ್ಪೀಕರ್ ಅವರ ಮತ್ತು ಅವರಲ್ಲಿರುವ ಕಾಂಗ್ರೆಸ್ ತಿಳವಳಿಕೆಯಲ್ಲಿರುವ ಲೋಪ ಕೇವಲ ಈ ಘೋಷಿತ ಹಿಂದೂತ್ವವಾದಿಗಳನ್ನು ಕರೆಯುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಈ ಕಾರ್ಯಕ್ರಮ ಆಯೋಜನೆಂiಲ್ಲೇ ಶಾಸಕರಿಗೆ ಪ್ರೇರಣೆ ನೀಡುವ ಒಂದು ವಿಭಾಗವಿದೆ. ಆದರೆ ಅದಕ್ಕೆ ಧಾರ್ಮಿಕ ಪ್ರೇರಣೆ ಎಂಬ ಅರ್ಥವನ್ನು ನೀಡಿಯೇ ಈ ವಿಭಾಗವನ್ನು ತರಬೇತಿಯಲ್ಲಿ ಸೇರಿಸಲಾಗಿದೆ.

ಹೀಗಾಗಿ ಸಮಸ್ಯೆ ಇದ್ದದ್ದು ಈ ಪ್ರೇರಣೆ ನೀಡಲು ಆಹ್ವಾನಿಸಿದ್ದ ವ್ಯಕ್ತಿಗಳದ್ದು ಮಾತ್ರವಲ್ಲ. ಇವರ ಬದಲಿಗೆ ಇನ್ನಿತರ ಯಾವುದೇ “ಧಾರ್ಮಿಕ” ವ್ಯಕ್ತಿಗಳನ್ನು ಕರೆದಿದ್ದರೂ ಅದು ಒಂದು ಅಧಿಕೃತ ಸಾಂವಿಧಾನಿಕ ಕಾರ್ಯಕ್ರಮವಾಗಿ ಸಮ್ಮತವಾಗಬಾರದಿತ್ತು. ಆದರೆ ದುರದೃಷ್ಟವಶಾತ್ ಈ ಬಗ್ಗೆ ಸಮಾಜದಲ್ಲಿ ಎದ್ದಿರುವ ಬಹುಪಾಲು ಪ್ರತಿರೋಧಗಳು ಮತ್ತು ಈ ಕಾರಣದಿಂದ ಕಾಂಗ್ರೆಸ್ಸಿನೊಳಗೇ ಕಂಡುಬಂದಿರುವ ಆಕ್ಶೇಪಣೆಗಳು ಕೇವಲ ಆ ನಿರ್ದಿಷ್ಟ ವ್ಯಕ್ತಿಗಳ ಬಗ್ಗೆ ಮಾತ್ರ ಸೀಮಿತವಾಗಿಬಿಟ್ಟಿದೆ.

ಅಸಲು ಆಕ್ಶೇಪಣೆ ಇರಬೇಕಿದ್ದು ” *ಸೆಕ್ಯುಲಾರ್-ಸಮಾಜವಾದಿ ಪ್ರಜಾತಂತ್ರಿಕ ಗಣರಾಜ್ಯದ ಸಂವಿಧಾನವನ್ನು ಅನುಷ್ಟಾನಕ್ಕೆ ತರುವ ಶಾಸಕರಿಗೆ ಪ್ರೇರಣೆ ನೀಡಬೇಕಿರುವುದು ನಮ್ಮ ಸಂವಿಧಾನ ಹಾಗೂ ನಮ್ಮ ಸ್ವಾತಂತ್ರ್ಯ ಹೋರಾಟದ ಆಶಯಗಳೇ ವಿನಾ ಮತಧರ್ಮಗಳೇ?*” ಎಂಬ ನೆಲೆಯಲ್ಲಿ .
.
ಧಾರ್ಮಿಕ ನೈತಿಕತೆ, ಸಂವಿಧಾನಿಕ ನೈತಿಕತೆ ಮತ್ತು ಅಂಬೇಡ್ಕರ್

ಏಕೆಂದರೆ ಒಂದೊಂದು ಮತಧರ್ಮಗಳ ಆಶಯಗಳು ಒಂದೊಂದು ತೆರನಾಗಿವೆ. ಹೀಗಾಗಿಯೇ ನಮ್ಮ ಸಮಾಜದಲ್ಲಿ ಹತ್ತು ಹಲವು ಮತಧರ್ಮಗಳಿವೆ. ಭಾರತದ ಪ್ರಜೆಯಾಗಿ ಪ್ರತಿಯೊಬ್ಬರೂ ಸಹ ತಮ್ಮ ಖಾಸಗಿ ಮತ್ತು ವೈಯಕ್ತಿಕ ನೆಲೆಯಲ್ಲಿ ತಮ್ಮ ತಮ್ಮ ಮತಧರ್ಮಗಳನ್ನು ಅನುಸರಿಸುವ ಸ್ವಾತಂತ್ರ್ಯವನ್ನು ನಮ್ಮ ಸಂವಿಧಾನವೇ ನೀಡುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೂ ಒಂದು ಪ್ರೇರಣೆಯ ಅಗತ್ಯವಿದ್ದು ಅದರಲ್ಲಿ ಹಲವಾರು ತಮ್ಮ ತಮ್ಮ ಧರ್ಮವು ಬೋಧಿಸುವ ನೈತಿಕತೆಯಿಂದಲೂ ಪ್ರೇರಣೆಯನ್ನು ಪಡೆದುಕೊಳ್ಳುತ್ತಾರೆ. ಅದು ಅವರವರ ಹಕ್ಕು ಮತ್ತು ಸ್ವಾತಂತ್ರ್ಯ.

ಧಾರ್ಮಿಕ ಮೂಲದಿಂದ ಪಡೆದುಕೊಳ್ಳುವ ನೈತಿಕತೆಯು ಆಯಾ ಧರ್ಮನಿಷ್ಟವಾಗಿರುತ್ತದೆ. ಅದು ತನ್ನ ಧರ್ಮವು ಬೋಧಿಸುವ ನೈತಿಕ ಮಾನದಂಡಗಳೇ ಪರಮ ಸತ್ಯ ಎಂದು ಕೊಡ ಭಾವಿಸುತ್ತದೆ. ವ್ಯಕ್ತಿಗಳು ತಮ್ಮ ವೈಯಕ್ತಿಕ ಜೀವನದಲ್ಲಿ ಅದನ್ನು ನಂಬುವುದಕ್ಕೆ ಮತ್ತು ಆಚರಿಸುವುದಕ್ಕೆ ನಮ್ಮ ಸಂವಿಧಾನದಲ್ಲಿ ಸ್ವಾತಂತ್ರ್ಯವಿದೆ.

ಆದರೆ ಹಲವು ಮತಧರ್ಮ , ಭಾಷೆ , ನಂಬಿಕೆಗಳುಳ್ಳ ಭಾರತವು ತನ್ನ ಸಾರ್ವಜನಿಕ, ಆಡಳಿತಾತ್ಮಕ ಮತ್ತು ರಾಜಕೀಯ ಬದುಕಿನಲ್ಲಿ ಆಚರಿಸಬೇಕಿರುವುದು ಸಾಂವಿಧಾನಿಕ ನೈತಿಕತೆಯನ್ನೇ ಹೊರತು ಧಾರ್ಮಿಕ ಮೂಲದ ನೈತಿಕತೆಯನ್ನಲ್ಲ.

ಸಂವಿಧಾನಿಕ ನೈತಿಕತೆಯು ನಮ್ಮ ಸಂವಿಧಾನದ ಮೌಲ್ಯಗಳಿಂದ ಪ್ರೇರಣೆಯನ್ನು ಪಡೆದುಕೊಳ್ಳುತ್ತದೆ. ಅರ್ಥಾತ್ ಸಾರ್ವಜನಿಕ ಹಾಗೂ ರಾಜಕೀಯ ಜೀವನದಲ್ಲಿ ತಾನು ವೈಯಕ್ತಿಕವಾಗಿ ನಂಬುವ ಧರ್ಮ ನಿಷ್ಟ ನೈತಿಕತೆ ಮತ್ತು ಸಂವಿಧಾನ ನಿಷ್ಟ ನೈತಿಕತೆಯ ನಡುವೆ ವೈರುಧ್ಯ ಏರ್ಪಟ್ಟರೆ ಆ ಜನಪ್ರತಿನಿಧಿ ಸಾಂವಿಧಾನಿಕ ನೈತಿಕತೆಯನ್ನೇ ಸಾರ್ವಜನಿಕ ಜೀವನದಲ್ಲಿ ಅನುಸರಿಸಬೇಕು.

ಆದ್ದರಿಂದಲೇ ನಮ್ಮ ಸಂವಿಧಾನದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವನ್ನು ಒಳಗೊಂಡ ಭಾರತೀಯ ಪ್ರಭುತ್ವವು, ಯಾವುದೇ ಧರ್ಮಕ್ಕೇ ಸೇರಿದ್ದಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

” ಆದರೆ ಭಾರತಕ್ಕೆ ಈ ಬಗೆಯ ಸಾಂವಿಧಾನಿಕ ನೈತಿಕತೆಯ ಅಭ್ಯಾಸವಿಲ್ಲ” ಎಂದು ಅಂಬೇಡ್ಕರ್ ವ್ಯಾಖ್ಯಾನಿಸುತ್ತಾರೆ . ಆದ್ದರಿಂದ ಅದನ್ನು ವಿಶೇಶ ಮುತುವರ್ಜಿ ಕೊಟ್ಟು ಸಾಮಾಜಿಕ ಜೀವನದಲ್ಲಿ ಅಭ್ಯಾಸ ಮಾಡಿಕೊಳ್ಳಬೇಕು ಮತ್ತು ಅರಗಿಸಿಕೊಳ್ಳಬೇಕು ಎಂದು 1948 ರ ನವಂಬರ್ 25 ರಂದು ದೇಶಕ್ಕೆ ಸಂವಿಧಾನವನ್ನು ಅರ್ಪಿಸಿ ಮಾಡಿದ ಭಾಷಣದಲ್ಲಿ ಸ್ಪಷ್ಟಪಡಿಸುತ್ತಾರೆ. ಹೀಗಾಗಿ ಎಲ್ಲಾಕಿಂತ ಮೊದಲು ನಮ್ಮ ಜನಪ್ರತಿನಿಧಿಗಳು ತಮ್ಮ ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿ ಈ ಸಾಂವಿಧಾನಿಕ ನೈತಿಕತೆಗೆ ಬದ್ಧರಾಗಿರಬೇಕು.

ಈ ಸಾಂವಿಧಾನಿಕ ನೈತಿಕತೆ ಎಂದರೇನು?

ಮೊದಲಿಗೆ ಸಂವಿಧಾನದ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ , ಭ್ರಾತೃತ್ವ ಮತ್ತು ಸಾಮಾಜಿಕ ನ್ಯಾಯಗಳಿಗೆ ಬದ್ದರಾಗಿರುವುದು ಮತ್ತು ಅದನ್ನು ತಮ್ಮ ಸಾರ್ವಜನಿಕ ಜೀವನದಲ್ಲಿ ಪಾಲಿಸುವುದು. ಆದರೆ ಭಾರತೀಯ ಸಮಾಜಕ್ಕೆ ಈ ಬಗೆಯ ನೈತಿಕತೆಯನ್ನು ಪಾಲಿಸಿ ಅಭ್ಯಾಸವೇ ಇಲ್ಲ.

ಹಾಗೆ ನೋಡಿದರೆ ಇತರ ದೇಶಗಳ ಸಂವಿಧಾನಗಳು ಸಾಮಾನ್ಯವಾಗಿ ನಾಗರಿಕರ ಮೂಲಭೂತ ಹಕ್ಕುಗಳ ಮತ್ತು ಮೌಲ್ಯಗಳ ಸನ್ನದಾಗಿ ಮಾತ್ರ ಇರುತ್ತದೆ. ಆದರೆ ಭಾರತದ ಸಂವಿಧಾನದಲ್ಲಿ ಅವನ್ನು ಮಾತ್ರವಲ್ಲದೆ ಆಡಳಿತ ವ್ಯವಸ್ಥೆಯನ್ನೂ ಕೂಡ ಸಂವಿಧಾನದ ಭಾಗವಾಗಿಸಿದೆ. ಇದರ ಬಗ್ಗೆ ಸಂವಿಧಾನ ಸಭೆಯಲ್ಲಿ ಆಕ್ಷೇಪಣೆ ಎತ್ತಿದಾಗ ಅಂಬೇಡ್ಕರ್ ಅವರು:

” ಅದಕ್ಕೆ ಕಾರಣ ನಮ್ಮ ಸಮಾಜಕ್ಕೆ ಸಾರ್ವಜನಿಕ ಜೀವನದಲ್ಲಿ ಶ್ರೇಷ್ತ-ಕನಿಷ್ಟ ಮಾನದಂಡಗಳಿಲ್ಲದೆ ಸಮಾನತೆ , ಸರ್ವ ಸಮಾನ ಕಾನೂನಿನ ಆಡಳಿತ ಇತ್ಯಾದಿಗಳುಳ್ಳ ಸಾಂವಿಧಾನಿಕ ನೈತಿಕತೆಯನ್ನು ಪಾಲಿಸಿ ಅಬ್ಯಾಸವೇ ಇಲ್ಲದಿರುವುದರಿಂದ ಇಡೀ ಆಡಳಿತ ವ್ಯವಸ್ಥೆಯನ್ನು ಸಂವಿಧಾನದ ಭಾಗವಾಗಿ ಮಾಡಬೇಕಾಯಿತು. ಏಕೆಂದರೆ ಆಡಳಿತದ ಸ್ವರೂಪವನ್ನು ಬದಲಾಯಿಸುವ ಮೂಲಕವು ಸಂವಿಧಾನ ವಿರೋಧಿ ಆಶಯಗಳ ಆಡಳಿತ ಜಾರಿಗೆ ತರುವ ಸಾಧ್ಯತೆ ಭಾರತದಲ್ಲಿದೆ” ಎಂದು ವಿವರಿಸಿದ್ದರು.
.
ಹೀಗೆ ಸಾಂವಿಧಾನಿಕ ನೈತಿಕತೆ ಅರ್ಥಾತ್ ಸಾರ್ವಜನಿಕ ನೈತಿಕತೆಯಲ್ಲಿ ಎಲ್ಲರೂ ಸಮಾನರು ಎಂಬ ಮೌಲ್ಯ ಆಡಳಿತದ ಮತ್ತು ರಾಜಕೀಯ ಜೀವನದ ಪ್ರತಿಯೊಂದು ಅಂಗದಲ್ಲೂ ಪ್ರತಿಕ್ಷಣದಲ್ಲೂ ಅಭಿವ್ಯಕ್ತಗೊಳ್ಳುವಂತಿರಬೇಕು.

ಆದ್ದರಿಂದ ಜನರಿಂದ ಆಯ್ಕೆಯಾದ ರಾಜಕೀಯ ಪ್ರತಿನಿಧಿಗಳು ಸಂವಿಧಾನವನ್ನು ಹೇಗೆ ಜಾರಿ ಮಾಡಬೇಕು ಎಂಬ ತರಬೇತಿ ಕೊಡುವಾಗ ತರಬೇತಿ ನೀಡಬೇಕಿದ್ದದ್ದು ಸಾಂವಿಧಾನಿಕ ನೈತಿಕತೆಯ ಬಗ್ಗೆ.
ಪ್ರೇರಣೆ ನೀಡಬೇಕಿದ್ದದ್ದು ಸಾಂವಿಧಾನಿಕ ಮೌಲ್ಯಗಳ ಪ್ರೇರಣೆಗಳು. ಹೀಗಾಗಿ ಶಾಸಕರ ತರಬೇತಿ ವಿಷಯದಲಿ ಪರೋಕ್ಷವಾಗಿಯೂ ಧಾರ್ಮಿಕ ಪ್ರೇರಣೆಯ ಅಂಶವನ್ನು ಸೇರಿಸಲೇಬಾರದಾಗಿತ್ತು.

ಹಿಂದೂತ್ವವೇ ಸಂವಿಧಾನಕ್ಕೂ ಪ್ರೇರಣೆ ಎನ್ನುವ ಕಾಲದಲ್ಲಿ..

ಅದರಲ್ಲೂ ಮೋದಿ ಅಧಿಕಾರಕ್ಕೆ ಬಂದಮೇಲೆ ಈ ದೇಶದ ಸೆಕ್ಯುಲಾರಿಸಂ ಎಂದರೆ ಹಿಂದೂತ್ವವೇ ಎಂದಾಗಿಬಿಟ್ಟಿದೆ. ಏಕೆಂದರೆ ಹಿಂದುತ್ವವಾದಿಗಳ ಪ್ರಕಾರ ಹಿಂದೂತ್ವ ಒಂದು ಮತಧರ್ಮವಲ್ಲ. ಬದಲಿಗೆ ಜೀವನ ದರ್ಶನ. ಭಾರತೀಯ ಜೀವನ ದರ್ಶನ. ಆದ್ದರಿಂದ ಪ್ರಭುತ್ವವು ಹಿಂದೂತ್ವವನ್ನು ಪಾಲಿಸಿದರೆ ಅದು ಸಂವಿಧಾನ ವಿರೋಧಿಯಲ್ಲ ಎಂಬ ವಾದವನ್ನು ಬಹಳ ಪ್ರಬಲವಾಗಿ ಹಿಂದೂತ್ವ ಫ಼್ಯಾಸಿಸ್ಟರು ಬಳಸುತ್ತಿದ್ದಾರೆ. ಹಿಂದೂತ್ವದ ಜೀವನ ದರ್ಶನವೇ ಸಂವಿಧಾನಕ್ಕೊ ಪ್ರೇರಣೆಯೆಂದು ಭಾವಿಸಬೇಕು. ಹೀಗಾಗಿ ಸಂವಿಧಾನಕ್ಕೂ ಉನ್ನತವಾದದ್ದು ಹಿಂದೂತ್ವ. ಅದರಿಂದ ಪ್ರೇರಣೆ ಪಡೆಯುವುದು ಅಸಾಂವಿಧಾನಿಕವಲ್ಲ. ಅಥವಾ ಅದರಂತೆ ಪ್ರಭುತ್ವವನ್ನು ನಡೆಸುವುದು ಕೂಡ ಸಂವಿಧಾನ ಬಾಹಿರವಾಗುವುದಿಲ್ಲ ಎಂಬ ವಿಚಿತ್ರ ಆದರೂ ಆತಂಕಕಾರಿ ವಾದಗಳನ್ನು ಸರ್ವೊಚ್ಚ ನ್ಯಾಯಾಲಯದಲ್ಲಿ ಮಂಡಿಸಲಾಗುತ್ತಿದೆ. ಕೆಲವು ಹಿಂದೂತ್ವವಾದಿ ನ್ಯಾಯಾಧೀಶರು ಅದನ್ನು ಸಂಪೂರ್ಣವಾಗಿ ಪುರಸ್ಕರಿಸಿ ಸಾಂವಿಧಾನಿಕ ಕೋರ್ಟಿನಲ್ಲಿ ತೀರ್ಪುಗಳನ್ನು ಕೊಡುತ್ತಿರುವ ಅಪಾಯಕಾರಿ ಬೆಳವಣಿಗೆ ನಡೆಯುತ್ತಿದೆ. ಅಂದರೆ ಸುಪ್ರೀಂ ಕೋರ್ಟಿನ ತೀರ್ಮಾನಗಳ ಮೂಲಕವೇ ಹಿಂದೂತ್ವವು ಸಂವಿಧಾನಕ್ಕಿಂತ ಉನ್ನತವಾದದ್ದು ಮತ್ತು ಪೇರಣ ಶಕ್ತಿ ಎಂದು ಘೋಷಿಸಿ ಭಾರತವನ್ನು ಹಿಂದು ರಾಷ್ಟ್ರವಾಗಿಸುವ ಹುನ್ನಾರಗಳು ನಡೆಯುತ್ತಿವೆ.

ಇಂಥಾ ಹೊತ್ತಿನಲ್ಲಿ ಸಂವಿಧಾನದ ನಡಾವಳಿಗಳನ್ನು ಕಲಿಸಲು ಸಂವಿಧಾನದಿಂದ ಪ್ರೇರಣೆಯನ್ನು ಪಡೆಯದೆ ನಿರ್ದಿಷ್ಟ ಮತಧರ್ಮಗಳಿಂದ ನೈತಿಕತೆ ಪಡೆದುಕೊಳ್ಳುವ, ಅದರಲ್ಲೂ ಘೋಶಿತ ಹಿಂದೂತ್ವವಾದಿಗಳಿಂದ ಪ್ರೇರಣೆ ಪಡೆದುಕೊಳ್ಳುವ ಯೋಜನೆ ಸಂವಿಧಾನಿಕ ನೈತಿಕತೆಗೆ ತದ್ವಿರುದ್ಧವಾದದ್ದು. ಈ ಬಾರಿ ಕಾಂಗ್ರೆಸ್ ಪಡೆದುಕೊಂಡಿರುವ ಜನಾದೇಶಕ್ಕೂ ತದ್ವಿರುದ್ಧವಾದದ್ದು.

ಆದರೆ ಇದು ಕೇವಲ ಸ್ಪೀಕರ್ ಖಾದರ್ ಸಮಸ್ಯೆ ಮಾತ್ರವಲ್ಲ. ಗ್ಯಾರಂಟಿಗಳ ಜೊತೆಗೆ ಸಂವಿಧಾನ ವಿರೋಧಿ ಹಿಂದೂತ್ವದ ಸರ್ಕಾರ ಕಳೆದ ಐದು ವರ್ಷಗಳಲ್ಲಿ ತೆಗೆದುಕೊಂಡ ಎಲ್ಲಾ ಸಂವಿಧಾನ ಬಾಹಿರ ಕ್ರಮಗಳನ್ನು ರದ್ದು ಮಾಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈ ವಿಷಯದಲ್ಲಿ ಮಾತ್ರ ಹಲವಾರು ರಾಜಿಗಳನ್ನು ಮಾಡಿಕೊಳ್ಳುತ್ತಿದೆ. ಈ ತರಬೇತಿ ಕಾರ್ಯಕ್ರಮದ ಹಿಂದೂತ್ವವಾದಿ ಆಹ್ವಾನಿತರು ಅದಕ್ಕೆ ಒಂದು ಉದಾಹರಣೆಯಷ್ಟೆ.

ಮುಂದುವರೆದಿರುವ ಮೃದು ಹಿಂದೂತ್ವ

ಪಠ್ಯಪುಸ್ತಕಗಳಲ್ಲಿ ಹಿಂದೂತ್ವವಾದಿಗಳು ಸೇರಿಸಿದ್ದ ಅತ್ಯಂತ ಮನುವಾದಿ ಮತ್ತು ಮುಸ್ಲಿಂ ವಿರೋಧಿ ತಿದ್ದುಪಡಿಗಳನ್ನು ತೆಗೆದುಹಾಕುವುದಾಗಿ ಕಾಂಗ್ರೆಸ್ ಆಶ್ವಾಸನೆ ನೀಡಿತ್ತು. ಹಾಗೆಯೇ ಅತ್ಯಂತ ಮನುವಾದಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿ ಜಾರಿಗೊಳಿಸದೇ ಇರುವುದು ರಾಜ್ಯದಲ್ಲಿ ಮತ್ತೆ ಸಾಂವಿಧಾನಿಕ ನೈತಿಕತೆಯನ್ನು ಜಾರಿಗೆ ತರುವಲ್ಲಿ ಕಾಂಗ್ರೆಸ್ ಕೊಟ್ಟ ಎರಡು ಆಶ್ವಾಸನೆಗಳು.

ಆದರೆ ಪಠ್ಯ ಪುಸ್ತಕದಲ್ಲಿ ಮೇಲ್ನೋಟಕ್ಕೆ ಕೆಲವು ತಿದ್ದುಪಡಿಗಳು ಆಗಿವೆಯಾದರೂ, ಶಾಲೆಗಳಿಗೆ ಸರ್ಕಾರವು ಕಳಿಸಿಕೊಟ್ಟಿರುವ ಸುತ್ತೋಲೆಯಲ್ಲಿ ಯಾವುದೇ ಪ್ರಮುಖ ಹಿಂದೂತ್ವವಾದಿ ತಿದ್ದುಪಡಿಗಳನ್ನು ಹಿಂತೆಗೆದುಕೊಂಡೇ ಇಲ್ಲ. ಟಿಪ್ಪು ಸುಲ್ತಾನ್ ಪಠ್ಯವನ್ನಂತೂ ಮುಟ್ಟಿಯೇ ಇಲ್ಲ.

ಹಾಗೆಯೇ ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಗೊಳಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರೂ , “ಈಗ ಅದರಲ್ಲೂ ಒಳ್ಳೆಯ ಅಂಶಗಳಿವೆ. ರದ್ದು ಮಾಡುವ ಬದಲಿಗೆ ಅದರಲ್ಲಿನ ಒಳ್ಳೆಯ ಅಂಶಗಳನ್ನು ಉಳಿಸಿಕೊಂಡು ಹೈಬ್ರಿಡ್ ಶಿಕ್ಷಣ ನೀತಿ ಜಾರಿಗೆ ತರುವುದಾಗಿ” ಘೋಷಿಸುತ್ತಿದೆ. ಬಿಜೆಪಿ ಸರ್ಕಾರದ ಕಾಲದಲ್ಲಿ ಕೇಂದ್ರದ ದುಷ್ಟ ಶಿಕ್ಷಣ ನೀತಿಯನ್ನು ಮೊತ್ತ ಮೊದಲಿಗೆ ಕರ್ನಾಟಕದಲ್ಲೇ ಜಾರಿಗೆ ತರುವ ಹಿಂದುತ್ವ ಬದ್ಧತೆ ತೋರಿದ ಉನ್ನತ ಅಧಿಕಾರಿಗಳನ್ನೇ ಕಾಂಗ್ರೆಸ್ ಸರ್ಕಾರವೂ ಮುಂದುವರೆಸಿದೆ.

ಇನ್ನೊಂದು ಕಡೆ ಗೃಹಮಂತ್ರಿ ಪರಮೇಶ್ವರ್ ಅವರು ಅಧಿಕಾರಕ್ಕೆ ಬಂದ ನಂತರ ಪರಮ ಹಿಂದೂತ್ವವಾದಿ ಪೇಜಾವರ ಮಠೆದ ವಿಶ್ವಪ್ರಸನ್ನ ಸ್ವಾಮಿಯ ಆಶೀರ್ವಾದ ಪಡೆದಿದ್ದಾರೆ. ಮತ್ತು ಭಜರಂಗ ದಳವನ್ನು ನಿಶೇಧಿಸುವ ಪ್ರಸ್ತಾಪವೇ ಇಲ್ಲವೆಂದು ಮತ್ತೊಮ್ಮೆ ಘೋಷಿಸಿದ್ದಾರೆ.

ಮನುವಾದವನ್ನು ಪ್ರತಿಪಾದಿಸಿದ ಉಪಮುಖ್ಯಮಂತ್ರಿ!

ಮತ್ತೊಂದು ಕಡೆ ಮೊನ್ನೆ ಕಾಂಗ್ರೆಸ್ಸಿನ ರಾಜ್ಯ ಅಧ್ಯಕ್ಷರು ಮತ್ತು ಉಪಮುಖ್ಯಮಂತ್ರಿಗಳೂ ಆದ ಡಿಕೆ ಶಿವಕುಮಾರ್ ಅವರು ಮೊನ್ನೆ “ವೀಕೆಂಡ್ ವಿತ್ ರಮೇಶ್ ” ಕಾರ್ಯಕ್ರಮದಲ್ಲಿ ಅವರು ತನಗೆ ಮಾರ್ಗ ದರ್ಶನ ಮಾಡುತ್ತಿರುವುದು ಸಂವಿಧಾನವೆಂದು ಹೇಳದೆ ನಾಡಿನ ಪ್ರಖ್ಯಾತ ಜ್ಯೋತಿಷಿಗಳೂ ಎಂದು ಬಹಿರಂಗವಾಗಿ ಘೋಷಿಸಿದರು. ಅಷ್ಟು ಮಾತ್ರವಲ್ಲ. ಭಾರತದ ಭವಿಷ್ಯ ಕ್ಕಾಗಿ ಭಾರತೀಯ ಸಂಸ್ಕೃತಿಯನ್ನು ಆಚಾರ ವಿಚಾರಗಳನ್ನು ಉಳಿಸಿಕೊಳ್ಳುವುದು ಅತಿ ಮುಖ್ಯ ಎಂದು ಪ್ರತಿಪಾದಿಸಿದರು.

ಮುಂದುವರೆದು ಸಂಸ್ಕೃತಿಯ ಭಾಗವಾಗಿ ಒಂದು ಸಂಸ್ಕೃತ ಶ್ಲೋಕವನ್ನು ಉದ್ಧರಿಸಿದರು ಹಾಗೂ ಅದರ ತಾತ್ಪರ್ಯವನ್ನು ವಿವರಿಸಿದರು . ಅದೇನೆಂದರೆ :

ಹೆಣ್ಣು, ರಾಜ್ಯ ಮತ್ತು ವಿದ್ಯೆಗಳು ಯಾವಾಗಲೂ ರಾಜನ ಅಧೀನದಲ್ಲಿರಬೇಕು. . ಹೆಣ್ಣು ತಾಯಿಯೇ ಆಗಿದ್ದರೂ, ಹೆಂಡತಿಯೇ ಆಗಿದ್ದರೂ , ಮಗಳೆ ಆಗಿದ್ದರೂ ಪುರುಷ ಅವರ ಮೇಲೆ ಸದಾ ಒಂದು ಕಣ್ಣಿಟ್ಟಿರಬೇಕು”
ಎಂದು ಪ್ರತಿಪಾದಿಸಿದರು!

ಹಿಂದುತ್ವವಾದಿಗಳದ್ದೂ ಹಣ್ಣಿನ ಬಗ್ಗೆ ಇದೆ ತಿಳವಳಿಕೆಯಲ್ಲವೇ?

ಇಂಥಾ ಗ್ರಹಿಕೆಯಿಂದಾಗಿಯೇ ಅಲ್ಲವೇ ಮನುವಾದದ ಪ್ರತಿಪಾದನೆ ಕಾಂಗ್ರೆಸ್ಸಿನ ನಾಯಕರಿಗೆ ತಪ್ಪು ಎನಿಸದೆ ಹೋಗುವುದು?

ಮನುವಾದಿಗಳನ್ನು ತಮ್ಮ ವೇದಿಕೆಗಳಿಗೂ ಕರೆಯುವುದು ತಪ್ಪು ಎನಿಸದಿರುವುದು ಇದೆ ಕಾರಣಕ್ಕೆ ಅಲ್ಲವೇ?

ಕಾಂಗ್ರೆಸ್ಸಿನ ಸಂಘಾನುಸಂಧಾನ ನಿಲ್ಲಬೇಕು

ಹೀಗಾಗಿ ಸ್ಪೀಕರ್ ಖಾದರ್ ಅವರು ಮಾಡಿದ ತಪ್ಪು ಅವರ ವೈಯಕ್ತಿಕ ನೆಲೆಯದ್ದಲ್ಲ.

  • ಕಾಂಗ್ರೆಸ್ಸು ಅನುಸರಿಸುತ್ತಾ ಬಂದಿರುವ ಮೃದು ಹಿಂದುತ್ವವಾದಿ ರಾಜಕೀಯದಲ್ಲಿ ಖಾದರ್ ಅವರ ತಪ್ಪುಗಳ ಬೇರುಗಳಿವೆ.
  •  ಹಿಂದುತ್ವದ ವಿರುದ್ಧ ಸಂಘರ್ಷ ಮಾಡದೆ ಅದನ್ನು ಓಲೈಸುತ್ತಾ ಹಿಂದೂ ಓಟುಗಳನ್ನು ಪಡೆದುಕೊಳ್ಳಬೇಕೆಂದೂ ಎಂಥಾ ರಾಜಿಗೂ ಸಿದ್ಧವಾಗುವ ಕಾಂಗ್ರೆಸ್ಸಿನ ರಾಜಿ ರಾಜಕೀಯದಲ್ಲಿ ಖಾದರ್ ಅವರ ತೀರ್ಮಾನದ ನೆಲೆಗಳಿವೆ.
  • ಹಿಂದೂ ಓಟುಗಳನ್ನು ಕಳೆದುಕೊಳ್ಳುವ ಭಯದಲ್ಲಿ ಮುಚ್ಚಿದ್ದ ರಾಮಮಂದಿರದ ಬೀಗವನ್ನು ತೆಗೆದು ಹಿಂದುತ್ವದ ಕೈಗಿತ್ತ ರಾಜೀವ್ ಗಾಂಧಿ ಯವರ ನೇತೃತ್ವದ ಮೃದು ಹಿಂದುತ್ವ ಹಾಗೂ ಅವಕಾಶವಾದಿ ರಾಜಕೀಯದಲ್ಲಿ ಅದರ ಬೇರುಗಳಿವೆ.
  • 1992 ರಲ್ಲಿ ಬಾಬ್ರಿ ಮಸೀದಿ ಕೆಡವಿದ ಬಿಜೆಪಿ ಮತ್ತು ಆರೆಸ್ಸೆಸ್ಸಿನ ಸಂವಿಧಾನ ದ್ರೋಹಿ ಮತ್ತು ಜನವಿರೋಧಿ ಹಿಂದುತ್ವವನ್ನು ಹಿಂದುಗಳ ನಡುವೆ ಬಯಲುಗೊಳಿಸದೆ ಹಿಂದೂ ಓಟುಗಳನ್ನು ಕಳೆದುಕೊಳ್ಳುವ ಭಯದಲ್ಲಿ ಆರೆಸ್ಸೆಸ್ಸಿನ ಮೇಲೆ ನಿಷೇಧವು ತಾನಾಗಿಯೇ ರದ್ದಾಗುವಂತೆ ಮಾಡಿದ ಪಿವಿ ನರಸಿಂಹರಾವ್ ಅವರ ನೇತೃತ್ವದ ಮೃದು ಹಿಂದುತ್ವದ ರಾಜಕೀಯದಲ್ಲಿ ಅದರ ಬೇರುಗಳಿವೆ…
  • ಸುಪ್ರೀಂ ತೀರ್ಮಾನದ ನಂತರ ರಾಮಂದಿರಕ್ಕೆ ಶಿಲಾನ್ಯಾಸವಾದ ನಂತರ, ಇತರ ಎಲ್ಲಾ ವಿರೋಧ ಪಕ್ಷಗಳಂತೆ ಕಾಂಗ್ರೆಸ್ ಕೂಡ ಬಾಬ್ರಿ ಮಸೀದಿ ಕೆಡವಿದ್ದು ತಪ್ಪು ಎಂದು ಹೇಳುವುದನ್ನೇ ಕೈಬಿಟ್ಟು 2020 ರಲ್ಲಿ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಹಣಸಂಗ್ರಹ ಮಾಡಿದ ಮೃದು ಹಿಂದುತ್ವದ ರಾಜಕೀಯದಲ್ಲಿ ಖಾದರ್ ತಪ್ಪುಗಳ ಬೇರುಗಳಿವೆ..
  • ಭಾರತ್ ಜೋಡೋ ಅಭಿಯಾನದಲ್ಲಿ ಶ್ರೀರಂಗಪಟ್ಟಣದಲ್ಲಿ ಮೂರು ದಿನ ತಂಗಿದ್ದರೂ ಹಿಂದುತ್ವದ ಬಾಯಿಗೆ ಬಲಿಯಾಗುತ್ತೇವೆನ್ನುವ ಅಳುಕಿನಲ್ಲಿ ಟಿಪ್ಪು ಮಸೀದಿಗೆ ಭೇಟಿ ನೀಡದ ರಾಹುಲ್ ಗಾಂಧಿಯವರ ನಡೆಯಲ್ಲಿ ಖಾದರ್ ತಪ್ಪುಗಳ ಬೇರುಗಳಿವೆ..
  • ಇದೀಗ ಛತ್ತೀಸ್ ಘಡ ದಲ್ಲಿ ಕಾಂಗ್ರೆಸ್ಸ ಸರ್ಕಾರವೇ ಬಿಜೆಪಿಯೂ ನಾಚುವಂತೆ ಸರ್ಕಾರಿ ಹಣದಲ್ಲಿ ನೂರಡಿ ಎತ್ತರದ ರಾಮ, ಹನುಮ , ಕೌಸಲ್ಯಾರ ಪ್ರತಿಮೆ ಮತ್ತು ದೇವಸ್ಥಾನಗಳನ್ನು ಕಟ್ಟುತ್ತಾ ಹಿಂದುತ್ವ ರಾಜಕಾರಣದ ನಕಲು ಮಾಡುತ್ತಿರುವ ಮೃದು ಹಿಂದುತ್ವದ ರಾಜಕೀಯದಲ್ಲಿ ಖಾದರ್ ತಪ್ಪುಗಳ ಬೇರುಗಳಿವೆ..
  • ಮಧ್ಯಪ್ರದೇಶದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಹಿಂದೂ ಓಟುಗಳನ್ನು ಆಕರ್ಷಿಸುವ ಸಲುವಾಗಿ ಬಾಬಾಗಳನ್ನು ಓಲೈಸುವುದರಲ್ಲಿ ಬಿಜೆಪಿಗೆ ಸಡ್ಡು ಹೊಡೆಯುತ್ತಿರುವ ಕಾಂಗ್ರೆಸ್ಸಿನ ಮೃದು ಹಿಂದುತ್ವದಲ್ಲಿ ಖಾದರ್ ತಪ್ಪುಗಳ ಬೇರುಗಳಿವೆ..
  • ಈ ತಪ್ಪುಗಳ ಮೂಲದಲ್ಲಿರುವುದು ಶತ್ರುವನ್ನು ಶತ್ರುವೆಂದು ಭಾವಿಸದ ಅವಕಾಶವಾದಿ ರಾಜಕೀಯದಲ್ಲಿ.
  • ಹೀಗಾಗಿ ನೈಜ ಪ್ರಜಾತಂತ್ರವಾದಿಗಳಿಗೆ ಇವು ಮತ್ತು ಖಾದರ್ ಆಹ್ವಾನಿಸಿದಂತವರು ಸಂವಿಧಾನದ ಶತ್ರುಗಳು ಎಂದು ಅನಿಸಿದಷ್ಟು ಕಾಂಗ್ರೆಸ್ಸಿಗೆ ಅನಿಸುವುದೇ ಇಲ್ಲ.

ಏಕೆಂದರೆ ಕಾಂಗ್ರೆಸ್ ಬಿಜೆಪಿ ಗಿಂತ ಭಿನ್ನವಾದರೂ ಅವುಗಳ ನಡುವಿನ ಅಂತರವೇನೂ ಜಾಸ್ತಿ ಇಲ್ಲ.

ಆದ್ದರಿಂದ ಕಾಂಗ್ರೆಸ್ಸಿನ ಈ ಮೃದು ಹಿಂದುತ್ವವಾದಿ ತಪ್ಪುಗಳು ಕೇವಲ ಕಾಂಗ್ರೆಸ್ಸನ್ನು ದುರ್ಬಲಗೊಳಿಸಿಲ್ಲ. ಇಡೀ ದೇಶದ ಅಡಿಪಾಯವನ್ನೇ ಅಸ್ಥಿರಗೊಳಿಸಿವೆ.

ಹೀಗಾಗಿ ಖಾದರ್ ತಪ್ಪುಗಳನ್ನು ಮಾತ್ರ ಟೀಕಿಸುತ್ತಾ ಅದರ ಬೇರಿನಲ್ಲಿರುವ ಕಾಂಗ್ರೆಸ್ಸಿನ ಮೃದು ಹಿಂದುತ್ವದ ಅಡಿಪಾಯವನ್ನು ಮರೆತರೆ ಕಾಂಗ್ರೆಸ್ಸಿಗೂ ಒಳ್ಳೆಯದಾಗುವುದಿಲ್ಲ. ದೇಶಕ್ಕೂ ಒಳ್ಳೆಯದಾಗುವುದಿಲ್ಲ.

ಹೀಗಾಗಿ ಕಾಂಗ್ರೆಸ್ ಸರ್ಕಾರದ ಸಂಘಾನುಸಂಧಾನ ನಿಲ್ಲಲು ಬಿಜೆಪಿ-ಫ಼್ಯಾಸಿಸಂ ವಿರೋಧಿಗಳು ತಾವೇ ವಕಾಲತ್ತು ವಹಿಸಿ ಅಧಿಕಾರಕ್ಕೆ ತಂದ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಸಂಘರ್ಷಕ್ಕೆ ಸಿದ್ಧವಾಗಬೇಕು.

ಇಲ್ಲವಾದಲ್ಲಿ ಈ ದ್ರೋಹದಲ್ಲಿ ಪ್ರಜಾತಂತ್ರವಾದಿಗಳ ಪಾಲೇ ಹೆಚ್ಚಾಗಿಬಿಟ್ಟಾತು!

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!