ಹಗಲು ಹೊತ್ತು ಕಚ್ಚುವ ಈಡಿಸ್ ಜಾತಿಯ ಸೊಳ್ಳೆಗಳು ಡೆಂಗಿಯಂತಹ ಮರಣಾಂತಿಕ ಕಾಯಿಲೆಗಳನ್ನುಂಟು ಮಾಡಬಲ್ಲವು.ಆದ ಕಾರಣ ಸೊಳ್ಳೆಗಳ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯೊಂದಿಗೆ ಜನರೂ ಕೈ ಜೋಡಿಸಬೇಕೆಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರ್ ಹೇಳಿದರು.
ಶ್ರೀರಂಗಪಟ್ಟಣ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ಅರಕೆರೆ ಸಮುದಾಯ ಆರೋಗ್ಯ ಕೇಂದ್ರ ವತಿಯಿಂದ ಭಾನುವಾರ ಶ್ರೀರಂಗಪಟ್ಟಣ ತಾಲ್ಲೂಕಿನ ದೊಡ್ಡಪಾಳ್ಯ ಗ್ರಾಮದ ಹೊಸ ಬಡಾವಣೆಯ ಸಾರ್ವಜನಿಕರಿಗಾಗಿ ಏರ್ಪಡಿಸಿದ ಡೆಂಗಿ ಅರಿವು ಮೂಡಿಸುವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಈಡಿಸ್ ಜಾತಿಯ ಸೊಳ್ಳೆಗಳು ಸ್ವಚ್ಛ ನೀರಿನಲ್ಲಿ ತಮ್ಮ ಸಂತಾನ ಅಭಿವೃದ್ಧಿಯನ್ನು ಮಾಡುತ್ತವೆ.ಅದಕ್ಕಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ ಮತ್ತು ಘನ ತ್ಯಾಜ್ಯ ವಸ್ತುಗಳನ್ನು ಸೂಕ್ತವಾಗಿ ವಿಲೇವಾರಿ ಮಾಡಿ ಹಾಗೂ ಮನೆಯಲ್ಲಿ ನೀರು ಸಂಗ್ರಹ ಪಾತ್ರೆ,ವಸ್ತುಗಳನ್ನು ತೆರೆದಿಡಬಾರದು. ವಾರಕ್ಕೊಂದು ದಿನ ಸ್ವಚ್ಛವಾಗಿ ಉಜ್ಜಿ ತೊಳೆದು ಒಣಗಿಸಿ ನೀರನ್ನು ಭರ್ತಿ ಮಾಡಿ ಜೊತೆಗೆ ಭದ್ರವಾಗಿ ಮುಚ್ಚಿಡಿ ಹಾಗೂ ಸ್ವಯಂ ರಕ್ಷಣಾ ವಿಧಾನಗಳನ್ನು ತಪ್ಪದೇ ಅನುಸರಿಸಿ ಡೆಂಗಿಗಾಗಿ ಭಯ ಬೇಡ ಎಚ್ಚರಿಕೆಯಿಂದಿರಿ ಎಂದು ಸಲಹೆ ನೀಡಿದರು.
ಈ ವೇಳೆ ಆಶಾ ಕಾರ್ಯಕರ್ತೆ ಗೀತಾ, ಕಲ್ಪನಾ ಹಾಗೂ ಬಡಾವಣೆಯ ಸಾರ್ವಜನಿಕರು ಉಪಸ್ಥಿತರಿದ್ದರು.