ಹಳ್ಳಿಕಾರ್ ಗೋತಳಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹಬ್ಬಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲ ನಿವಾರಿಸಲು ಡಿ.10ರಂದು ಸಂವಾದ ನಡೆಸಲಾಗುವುದೆಂದು ಪಶುಪಾಲಕ ರವಿ ಪಟೇಲ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.10ರಂದು ಮಧ್ಯಾಹ್ನ 2.30ಕ್ಕೆ ಮಂಡ್ಯನಗರದ ಸಿಲ್ವರ್ ಜ್ಯೂಬಿಲಿ ಉದ್ಯಾನವನದಲ್ಲಿ ಚರ್ಚಾಗೋಷ್ಠಿ ಆಯೋಜಿಸಲಾಗಿದ್ದು, ಹಲವು ತಲೆಮಾರುಗಳಿಂದ ಗೋತಳಿ ಸಂರಕ್ಷಣೆಗೆ ಶ್ರಮಿಸುತ್ತಿರುವ ಹಿರಿಯ ರೈತರು, ಪಶು ವೈದ್ಯರು, ವಿಜ್ಞಾನಿಗಳು ಹಾಗೂ ಇತರೆ ಪಶುಪಾಲಕರು ಭಾಗಿಯಾಗಲಿದ್ದಾರೆಂದು ತಿಳಿಸಿದರು.
ಹಳ್ಳಿಕಾರ್ ಗೋತಳಿಗೆ ಸುಮಾರು 500 ವರ್ಷಗಳ ಇತಿಹಾಸವಿದ್ದು, ತಲೆ-ತಲಾಂತರದಿಂದ ಪಶುಗಳನ್ನು ಸಾಕುವ ರೈತರಿಗೆ ಮುಜುಗರವಾಗುವಂತೆ ವರ್ತೂರು ಸಂತೋಷ್ ಅವರಿಗೆ ಹಳ್ಳಿಕಾರ್ ಒಡೆಯ ಎಂಬ ಬಿರುದು ನೀಡಿರುವುದು ಸರಿಯಲ್ಲ, ಇತಿಹಾಸವಿರುವ ಗೋತಳಿ ಸಂರಕ್ಷಣೆಗೆ ರಾಜ್ಯ ಹಾಗೂ ಜಿಲ್ಲೆಯಲ್ಲಿ ಸಹಸ್ರಾರು ಪಶುಪಾಲಕರು ಹಗಲಿರುಳು ಶ್ರಮಿಸುತ್ತಿದ್ದು, ಏಕಾಏಕಿ ಓರ್ವ ವ್ಯಕ್ತಿಗೆ ಒಡೆಯ ಬಿರುದು ಬಳಕೆ ಮಾಡಿರುವುದಕ್ಕೆ ನಮ್ಮ ಆಕ್ಷೇಪವಿದೆ ಎಂದರು.
ಗೋಷ್ಠಿಯಲ್ಲಿ ರಘು ಕೋಣನಹಳ್ಳಿ, ಕಿಶೋರ್, ಕಿರಣ್ ಕುಮಾರ್ ಉಪಸ್ಥಿತರಿದ್ದರು.