ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 17 ವರ್ಷ ಶಿಕ್ಷೆ ಹಾಗೂ ₹70,000 ದಂಡವಿಧಿಸಿ ಮಂಡ್ಯದ ಅಧಿಕ ಸೆಷನ್ಸ್ ಮತ್ತು ತ್ವರಿತಗತಿ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಕೆ.ಎ.ನಾಗಜ್ಯೋತಿ ಅವರು ತೀರ್ಪು ಪ್ರಕಟಿಸಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕು ಬೆಳ್ಳೂರು ಹೋಬಳಿಯ ಕೆ.ಹೊಸಹಳ್ಳಿ ಗ್ರಾಮದ ಹಾಲಿವಾಸ ಮಂಡ್ಯ ತಾಲ್ಲೂಕಿನ ಸಾತನೂರು ಗ್ರಾಮದ ಲೇ.ಗಂಗಾಧರ ಅವರ ಮಗ ಸಂಪತ್.ಕೆ.ಜಿ (38) ಶಿಕ್ಷೆಗೆ ಗುರಿಯಾದ ವ್ಯಕ್ತಿ.
ಘಟನೆಯ ವಿವರ
ಆರೋಪಿ ಸಂಪತ್ ಮಂಡ್ಯನಗರದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಶಾಲೆಗೆ ಹೋಗುವಾಗ ಮತ್ತು ಬರುವಾಗ ನೋಡುತ್ತಿದ್ದ. ಈ ಬಾಲಕಿ ನವೆಂಬರ್ 8, 2015 ರಂದು ಬೆಳಿಗ್ಗೆ ಶಾಲೆಗೆ ಹೋಗಿದ್ದು, ಮತ್ತೆ ಅದೇ ದಿನ ಬಾಲಕಿ ಶಾಲೆ ಮುಗಿಸಿಕೊಂಡು ಮಂಡ್ಯದ ಕಾಳಿಕಾಂಭ ದೇವಸ್ಥಾನದ ಹತ್ತಿರ ಹೋಗುತ್ತಿದ್ದಾಗ ಆರೋಪಿ ಮೋಟಾರ್ ಸೈಕಲ್ನಲ್ಲಿ ಬಂದು ಬಾಲಕಿಯನ್ನು ನಿಲ್ಲಿಸಿ, ನನ್ನ ತಂಗಿಗೆ ಸೈಕಲ್ ತೆಗೆದುಕೊಂಡಿದ್ದೇನೆ, ಅದನ್ನು ಮನೆಗೆ ತೆಗೆದುಕೊಂಡು ಹೋಗಲು ಸಹಾಯ ಮಾಡು ಎಂದು ಹೇಳಿ ಬಾಲಕಿಯನ್ನು ಫುಸಲಾಯಿಸಿ ಬಾಲಕಿಯ ಸೈಕಲ್ನ್ನು ದೇವಸ್ಥಾನದ ಕಾಂಪೌಂಡ್ ಒಳಗೆ ನಿಲ್ಲಿಸಿ, ಬಾಲಕಿಯನ್ನು ಬಲವಂತದಿಂದ ಮಂಡ್ಯದಿಂದ ಸುಮಾರು 8-10 ಕಿ.ಮಿ. ದೂರದಲ್ಲಿರುವ ಕೆರಗೋಡು ಹೋಬಳಿ, ಹಂಪಾಪುರದ ಬಳಿ ಇರುವ ನೀಲಗಿರಿ ಮರದ ಫಾರೆಸ್ಟ್ನ ನಿರ್ಜನ ಪ್ರದೇಶಕ್ಕೆ ತನ್ನ ಹಿರೋ ಹೊಂಡಾ ಫ್ರೆಂಡರ್ ಬೈಕ್ (ಕೆ.ಎ.51-ವಿ-5881) ನಲ್ಲಿ ಕೆರೆದುಕೊಂಡು ಹೋಗಿದ್ದ.
ನಂತರ ಬಾಲಕಿಯನ್ನು ಕಾಡಿನೊಳಗೆ ಕರೆದೊಯ್ದು ತನ್ನ ಬಳಿ ಇದ್ದ ಚಾಕುವನ್ನು ತೋರಿಸಿ ಹೆದರಿಸಿ, ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳವನ್ನು ನೀಡಿ, ಅತ್ಯಾಚಾರವೆಸಗಿದ್ದ, ಈ ಬಗ್ಗೆ ಮಂಡ್ಯ ಪೂರ್ವ ಪೊಲೀಸ್ ಠಾಣೆಯ ಪಿ.ಎಸ್.ಐ ಆಗಿದ್ದ ಶಿವರುದ್ರ ಅವರು ದೂರು ದಾಖಲಿಸಿಕೊಂಡು, ಆರೋಪಿಯನ್ನು ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿದ್ದರು. ನಂತರ ಪ್ರಕರಣವನ್ನು ಕೆರಗೋಡು ಪೊಲೀಸ್ ರಾಣಿಗೆ ವರ್ಗಾವಣೆ ಮಾಡಲಾಗಿ, ಸರ್ಕಲ್ ಇನ್ಸಪೆಕ್ಟರ್ ಸುರೇಶ್ ಕುಮಾರ್.ಬಿ.ಕೆ. ಅವರು ತನಿಖೆಯನ್ನು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ಈ ಪ್ರಕರಣವನ್ನು ಸ್ಪೆಷಲ್ ಕೇಸ್ ಎಂದು ಪರಿಗಣಿಸಿ ವಿಚಾರಣೆ ನಡೆಸಿದ ಮಂಡ್ಯದ ಅಧಿಕ ಸತ್ರ ಮತ್ತು ತ್ವರಿತಗತಿ 2ನೇ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ನಾಗಜ್ಯೋತಿ.ಕೆ.ಎ. ಅವರು, ಆರೋಪಿಯ ಆರೋಪ ಸಾಬೀತಾದ ಹಿನ್ನೆಲೆ ಫೆ.28ರಂದು ಅಂತಿಮ ತೀರ್ಪನ್ನು ಪ್ರಕಟಿಸಿದರು.
ಅಪರಾಧಿಗೆ “ಭಾದಂಸಂ ಕಲಂ 366 ಅಡಿಯಲ್ಲಿನ ಅಪರಾಧಕ್ಕೆ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 30,000 ರೂ.ಗಳ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 3 ತಿಂಗಳ ಸಾದಾ ಶಿಕ್ಷೆ ಹಾಗೂ ಭಾದಂಸಂ ಕಲಂ 376(2)(ಐ) ಅಡಿಯಲ್ಲಿನ ಅಪರಾಧಕ್ಕೆ 2 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 40,000 ರೂ.ಗಳ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 3 ತಿಂಗಳು ಸಾದಾ ಶಿಕ್ಷೆ ಹಾಗೂ ಭಾದಂಸಂ ಕಲಂ 506 ಅಡಿಯಲ್ಲಿನ ಅಪರಾಧಕ್ಕೆ 2 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ” ಯನ್ನು ವಿಧಿಸಿ ತೀರ್ಪು ತೀರ್ಪು ನೀಡಿದ್ದಾರೆ.
ಅಭಿಯೋಜನೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಹೆಬ್ಬಕವಾಡಿ ನಾಗರಾಜು ವಾದ ಮಂಡಿಸಿದ್ದರು.