ವರದಿ: ಪ್ರಭು ವಿ.ಎಸ್
ರೈತರು ಸದಾ ಒತ್ತಡದ ನಡುವೆ ಬದುಕು ದೂಡುತ್ತಿರುವ ಸಂದರ್ಭಗಳಲ್ಲಿ ಗ್ರಾಮಗಳಲ್ಲಿ ಆಯೋಜಿಸುವ ಇಂತಹ ಗ್ರಾಮೀಣ ಕ್ರೀಡೆಗಳು ರೈತರಿಗೆ ಹೆಚ್ಚು ಖುಷಿಪಡಿಸುವ ಕ್ರೀಡೆಗಳಾಗಿವೆ ಎಂದು ಶಾಸಕ ಕೆ.ಎಂ. ಉದಯ್ ತಿಳಿಸಿದರು.
ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದಲ್ಲಿ ಪ್ರಥಮ ವರ್ಷದ ರಾಜ್ಯಮಟ್ಟದ ಹಸುಗಳ ಹಾಗೂ ಚಕ್ಕಡಿ ಗಾಡಿ ಓಟದ ಸ್ಪರ್ಧೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾವೇ ಸಾಕಾಣಿಕೆ ಮಾಡಿ ಸ್ಪರ್ಧೆಗಿಳಿಯುವ ರೈತರ ಸಾಹಸ ಪ್ರತಿಯೊಬ್ಬರು ಮೆಚ್ಚುವಂತಾಗಿದ್ದು ಕ್ರೀಡಾ ಸ್ಪೂರ್ತಿಯಿಂದ ಪಾಲ್ಗೊಳ್ಳುವುದರಿಂದ ಮಾನಸಿಕ ಸದೃಢದ ಜತೆಗೆ ಸ್ನೇಹ ಬಾಂಧವ್ಯ ಗಟ್ಟಿಗೊಂಡು ತಮ್ಮದೇ ಆದ ಗ್ರಾಮೀಣ ಕ್ರೀಡೆಯನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೂ ಪರಿಚಯಿಸಿದಂತಾಗುತ್ತದೆಂದರು.
ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ನಾಲ್ಕು ಯೋಜನೆಗಳನ್ನು ಜಾರಿಗೊಳಿಸಿದ್ದು ಮತ್ತೊಂದು ಯೋಜನೆಯಾದ ಯುವ ನಿಧಿ ಯೋಜನೆಯನ್ನು ಸರಕಾರ ಜಾರಿಗೊಳಿಸುತ್ತಿದ್ದು ನಿರುದ್ಯೋಗ ಯುವಕರು, ಪದವೀಧರರು ಅರ್ಜಿ ಸಲ್ಲಿಸುವ ಮೂಲಕ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕೆಂದರು.
ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಕ್ಕಿಲ್ಲ
ವಿಧಾನಪರಿಷತ್ ಸದಸ್ಯ ದಿನೇಶ್ ಗೂಳೀಗೌಡ ಮಾತನಾಡಿ, ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಹಲವಾರು ಸಂಕಷ್ಟಗಳನ್ನು ಎದುರಿಸುವಂತಾಗಿದ್ದು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದೆ ರೈತರು ಪರಿತಪಿಸುವಂತಾಗಿದೆ ಎಂದರು.
ದೇಶದ 13 ರಾಜ್ಯಗಳಲ್ಲಿ ತೀವ್ರ ಬರಗಾಲ ವ್ಯಾಪಿಸಿದ್ದು ರಾಜ್ಯದ ಹಲವು ತಾಲೂಕುಗಳನ್ನು ಸರಕಾರ ಈಗಾಗಲೇ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ್ದು ರೈತರು ಸಂಕಷ್ಟದ ನಡುವೆ ಬದುಕನ್ನು ದೂಡುತ್ತಿದ್ದು ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ಸಂತೃಪ್ತಿ ಜೀವನ ನಡೆಸಲೆಂದು ಹಾರೈಸಿದರು.
ಹೈನುಗಾರಿಕೆ ಮತ್ತು ರೇಷ್ಮೆಯಿಂದ ರೈತರು ತಮ್ಮ ದಿನನಿತ್ಯದ ಬದುಕನ್ನು ಕಂಡುಕೊಂಡಿದ್ದು ಜಿಲ್ಲೆಯಲ್ಲಿ ಪ್ರತಿ ದಿನ 9.40 ಲಕ್ಷ. ಲೀಟರ್ ಹಾಲು ಪೂರೈಕೆಯಾಗುತ್ತಿದ್ದು 1 ಲಕ್ಷ ಮಂದಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಸ್ವಾವಲಂಭಿ ಬದುಕನ್ನು ಕಂಡುಕೊಂಡಿದ್ದಾರೆಂದರು.
ಜಿಲ್ಲೆಯಲ್ಲಿ 11 ಲಕ್ಷಕ್ಕೂ ಹೆಚ್ಚು ಜಾನುವಾರುಗಳಿದ್ದು ಜಿಲ್ಲೆ ಮತ್ತು ತಾಲೂಕು ಕೇಂದ್ರದಲ್ಲಿ ಪಶು ಚಿಕಿತ್ಸಾ ಕೇಂದ್ರಗಳಿಲ್ಲದೆ ರೈತರು ತಮ್ಮ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ತೊಂದರೆ ಪಡುತ್ತಿದ್ದು ಇದನ್ನರಿತು ತಾವೂ ಮತ್ತು ಸ್ಥಳೀಯ ಶಾಸಕರು ಸದನದಲ್ಲಿ ಚರ್ಚಿಸಿ ಸಿಬ್ಬಂದಿ ಕೊರತೆಯನ್ನು ನೀಗಿಸುವಂತೆ ಮನವಿ ಮಾಡಿರುವುದಾಗಿ ಹೇಳಿದರು.
ತಾಲೂಕಿನಲ್ಲಿ 43 ಪಶು ಚಿಕಿತ್ಸಾ ಕೇಂದ್ರಗಳಿದ್ದು ಕೇವಲ ಬೆರಳೆಣಿಕೆಯಷ್ಟು ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು ಸುಮಾರು 240 ಮಂದಿ ಸಿಬ್ಬಂದಿ ಕೊರತೆಯಿದ್ದು ಮುಂದಿನ ದಿನಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸಂಬAಧಿಸಿದ ಸಚಿವರಿಗೆ ಮನವಿ ಮಾಡಲಾಗಿದೆ ಎಂದರು.
ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕೆಂಬ ಉದ್ದೇಶದಿಂದ ನೀರಾವರಿ ಸಚಿವ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಿಲ್ಲೆಗೆ 650 ಕೋಟಿ ರೂ.ಗಳನ್ನು ಮಂಜೂರು ಮಾಡಲು ಮುಂದಾಗಿದ್ದು ತಾಲೂಕಿಗೆ 120 ಕೋಟಿ ರೂಗಳನ್ನು ಬಿಡುಗಡೆಗೊಳಿಸಿದ್ದು ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಲಿದೆ ಎಂದರು.
ಮದ್ದೂರು ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಶಾಸಕರು ಮತ್ತು ತಾವು ಜೋಡೆತ್ತಿನಂತೆ ಕಾರ್ಯನಿರ್ವಹಿಸಲಿದ್ದು ನೀರಾವರಿ, ಕುಡಿಯುವ ನೀರು, ನಾಲೆಗಳ ಆಧುನೀಕರಣ, ಕೆರೆಕಟ್ಟೆಗಳಿಗೆ ನೀರು ತುಂಬಿಸುವುದು ಇನ್ನಿತರೆ ಶಾಶ್ವತ ಯೋಜನೆಗಳನ್ನು ಕಲ್ಪಿಸಲಾಗುವುದೆಂದರು.
ಓಟದ ಸ್ಪರ್ಧೆ
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 50ಕ್ಕೂ ಹೆಚ್ಚು ಜೋಡಿ ಹಸುಗಳು ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದವಲ್ಲದೇ ಸ್ಥಳೀಯ ಸಾರ್ವಜನಿಕರು ಗಾಡಿ ಓಟದ ಸ್ಪರ್ಧೆಯ ಸವಾರರನ್ನು ಹುರಿದುಂಬಿಸಿ ಪ್ರೋತ್ಸಾಹಿಸುತ್ತಿದುದ್ದು ಎಲ್ಲೆಡೆ ಕಂಡುಬAದಿತು.
ಈ ವೇಳೆ ಮನ್ಮುಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಗ್ರಾ.ಪಂ. ಅಧ್ಯಕ್ಷೆ ಗೀತಾಸತೀಶ್, ಉಪಾಧ್ಯಕ್ಷ ರವಿಕುಮಾರ್, ಸದಸ್ಯರಾದ ವರಲಕ್ಷ್ಮಿ, ನಾಗರಾಜು, ಸಾಕಮ್ಮ, ಪುರುಷೋತ್ತಮ್, ಆಯೋಜಕರಾದ ಪುಟ್ಟಸ್ವಾಮಿ, ಕಿರಣ್ಕುಮಾರ್, ಸುಂದ್ರೇಶ್, ಶ್ರೀಕಂಠ, ಸಂತೋಷ್, ಮುಖಂಡರಾದ ಮಾರಸಿಂಗನಹಳ್ಳಿ ರಾಮಚಂದ್ರು, ಮನುಕುಮಾರ್, ವೆಂಕಟೇಶ್ ಇತರರಿದ್ದರು.