ನಾಗಮಂಗಲ ಡಿಪೋ ಕೆಎಸ್ ಆರ್ ಟಿಸಿ ನೌಕರ ಜಗದೀಶ್ ಪ್ರಕಣರಕ್ಕೆ ಸಂಬಂಧಿಸಿದಂತೆ ಕೃಷಿ ಸಚಿವ ಚಲುವರಾಯಸ್ವಾಮಿ ಅವರ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡುತ್ತಿರುವ ನಾಗಮಂಗಲ ಮಾಜಿ ಶಾಸಕ ಕೆ.ಸುರೇಶ್ ಗೌಡ ಅವರಿಗೆ ಬುದ್ಧಿಭ್ರಮಣೆಯಾಗಿದೆ ಎಂದು ಕಿಸಾನ್ ಕಾಂಗ್ರೆಸ್ ಪಾಂಡವಪುರ ತಾಲೂಕು ಅಧ್ಯಕ್ಷ ಸಿ.ಆರ್.ರಮೇಶ್ ಕಿಡಿಕಾರಿದ್ದಾರೆ.
ಪಾಂಡವಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಕಳೆದ 2018ರ ಚುನಾವಣೆಯಲ್ಲಿ ಜನರು ಏಳಕ್ಕೆ 7 ಜೆಡಿಎಸ್ ಶಾಸಕರನ್ನು ಗೆಲ್ಲಿಸಿದ್ದರು. 7 ಜನ ಶಾಸಕರು, ಜಿಲ್ಲಾ ಉಸ್ತುವಾರಿ
ಮಂತ್ರಿ ಇದ್ದರು. ಜೊತೆಗೆ 14 ತಿಂಗಳು ಸರ್ಕಾರ ಇತ್ತು. ಆದರೂ ಜಿಲ್ಲೆಗೆ ಏನು ಮಾಡಿದರು ? ಆದ್ದರಿಂದ ಅವರ ಹೇಳಿಕೆಗಳನ್ನು ನೋಡಿದರೆ ನಿಜಕ್ಕೂ ಸುರೇಶ್ ಗೌಡರಿಗೆ ಬುದ್ಧಿ ಭ್ರಮಣೆಯಾಗಿದೆ ಎಂಬರ್ಥವಲ್ಲವೇ ಎಂದರು.
ಕೆಎಸ್ಆರ್ಟಿಸಿ ನೌಕರ ಜಗದೀಶ್ಗೆ ಸಚಿವ ಚಲುವರಾಯಸ್ವಾಮಿ ಅವರು ದುಡ್ಡು ಕೊಟ್ಟು ಹೇಳಿಕೆ ಕೊಡಿಸಿದರೆನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಗೃಹ ಮಂತ್ರಿಗಳು ಈ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸಿದ್ದಾರೆ. ಆದರೆ ಸುರೇಶ್ ಗೌಡರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ದೂರು ಕೊಟ್ಟವರು ಮತ್ತು ಅವರನ್ನು ದುರುಪಯೋಗಪಡಿಸಿಕೊಂಡವರು ಯಾರೆಂದು ಜನರೇ ಮಾತನಾಡುತ್ತಿದ್ದಾರೆಂದು ತಿರುಗೇಟು ನೀಡಿದರು.
ವಿಷ ಸೇವಿಸಿದ ನೌಕರನನ್ನು ಬದುಕಿಸಲು ಪ್ರಯತ್ನಪಡದೆ ಆಂಬುಲೆನ್ಸ್ ತಡೆಯುತ್ತಾರೆಂದರೆ, ಯಾವ ಮಟ್ಟದ ರಾಜಕಾರಣ ಮಾಡುತ್ತಾರೆ ಎಂದು ನಾಗಮಂಗಲ ಕ್ಷೇತ್ರದ ಮತದಾರರು ಅರ್ಥ ಮಾಡಿಕೊಂಡಿದ್ದಾರೆ. ಪತ್ರಿಕೆ ಹೇಳಿಕೆ ಮೂಲಕ ಹೀರೋ ಆಗಲು ಮುಂದಾಗಿರುವ ಸುರೇಶ್ ಗೌಡರನ್ನು ಈಗಾಗಲೇ ಸೋಲಿಸಿ ಮನೆಗೆ ಕಳಿಸಿದ್ದಾರೆ. ಆದ್ದರಿಂದ ಕೆ.ಸುರೇಶ್ ಗೌಡ ಅವರು ಇಂತಹ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು ತೆಪ್ಪಗೆ ಮನೆಯಲ್ಲಿರಬೇಕು ಎಂದು ಕುಟುಕಿದರು.