ಜನರು ಶಾಂತಿ ಮತ್ತು ನೆಮ್ಮದಿಯಿಂದ ಜೀವನ ಸಾಗಿಸಲು ಇರುವ ಕಾನೂನನ್ನು ಪಾಲನೆ ಮಾಡುವ ಕಡೆ ಸಾರ್ವಜನಿಕರ ಗಮನ ನೀಡಬೇಕು ಎಂದು ಪಿಎಸ್ಐ ರವಿಕುಮಾರ್ ತಿಳಿಸಿದರು.
ಮಳವಳ್ಳಿ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಅಪರಾಧ ತಡೆ ಮಾಸ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವ್ಯಕ್ತಿಗೂ ಕಾನೂನಿನ ಪರಿಮಿತಿಯಲ್ಲಿ ಜೀವಿಸುವ ಹಕ್ಕು ಲಭ್ಯವಾಗಿದೆ, ಅದರಂತೆಯೇ ನಡೆದುಕೊಳ್ಳುವುದು ಅತ್ಯಗತ್ಯ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಯುವ ಸಮುದಾಯದ ದಿಕ್ಕನ್ನು ತಪ್ಪಿಸಲು ಅನೇಕ ಆಸೆ ಆಮಿಷಗಳನ್ನು ನೀಡುವುದರ ಮೂಲಕ ಅಪರಾಧ ಲೋಕದ ಕಡೆಗೆ ಸೆಳೆಯಲು ಯತ್ನಿಸುತ್ತವೆ, ಇದರ ಬಗ್ಗೆ ಎಚ್ಚರಿಕೆ ವಹಿಸಬೇಕೆಂದರು.
ಕಾನೂನಿನಲ್ಲಿ ಪ್ರತಿಯೊಂದು ಅಪರಾಧಕ್ಕೂ ತನ್ನದೇ ಆದ ಶಿಕ್ಷೆ ಇರುವುದರಿಂದ ಸಾರ್ವಜನಿಕರು ಅತ್ಯಂತ ಎಚ್ಚರಿಕೆಯಿಂದ ಜೀವಿಸಬೇಕು, ಅಪರಾಧ ಮುಕ್ತ, ಸ್ವಚ್ಛಂದ ಸಮಾಜ ನಿರ್ಮಾಣಕ್ಕೆ ಸಿದ್ಧರಾಗಬೇಕು ಎಂದರು.
ಮಳವಳ್ಳಿ ಪಟ್ಟಣದ ಆಟೋ ಚಾಲಕರಿಗೆ ಕಾನೂನು ಬಗ್ಗೆ ಅರಿವು ನೀಡಲಾಯಿತು. ಪ್ರತಿಯೊಂದು ವಾಹನಕ್ಕೆ ಇನ್ಸೂರೆನ್ಸ್ ಮುಖ್ಯವಾಗಿದೆ. ಅಪಘಾತ ಆದ ಸಮಯದಲ್ಲಿ ಚಾಲಕರು ಹೆದರದೇ ಹತ್ತಿರದ ಪೊಲೀಸ್ ಸ್ಟೇಷನ್ ಗೆ ಹಾಜರಾದರೆ ಅಂತಹ ಅಪಘಾತ ಕೇಸುಗಳು ಬೇಗನೆ ಇತ್ಯರ್ಥವಾಗುತ್ತದೆ ಎಂದು ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಎಎಸ್ಐ ರಮೇಶ್, ಸುರೇಶ್ ಪೇದೆಗಳಾದ ಮಾದೇಶ್, ಹರ್ಷವರ್ಧನ, ಪ್ರಕಾಶ್, ಕುಮಾರ್, ತನುಜ, ಪೂರ್ಣಿಮಾ, ಸಂತೋಷ್, ಪ್ರೇಮ್ ಕುಮಾರ್ ಸೇರಿದಂತೆ ಆಟೋ ಚಾಲಕರು ಹಾಜರಿದ್ದರು.