ಪ್ರಸಿದ್ದ ತತ್ವಜ್ಞಾನಿ ಸಾಕ್ರೆಟೀಸ್ ಹೇಳುವಂತೆ ಮೊದಲು ಮಕ್ಕಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಡಯಟ್ ಕಾಲೇಜಿನ ಪ್ರಾಂಶುಪಾಲ ಶಿವಮಾದಪ್ಪ ಹೇಳಿದರು.
ಮಂಡ್ಯ ನಗರದ ಆರ್ ಸೆಟಿ ಸಭಾಂಗಣದಲ್ಲಿ ಯುನಿಸೆಫ್, ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಮತ್ತು ಭೀಮ್ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಗುರುವಾರ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಸಂಸತ್-2022ರ ಜಿಲ್ಲಾ ಮಟ್ಟದ ಮಕ್ಕಳ ಸಮಾಲೋಚನಾ ಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಶ್ನೆ ಮಾಡುವುದರಿಂದ ಆ ಕೆಲಸದ ಉದ್ದೇಶ ರೀತಿ ನೀತಿ ತಿಳಿಯುತ್ತದೆ, ಆ ಉದ್ದೇಶದಿಂದ ಸಾಕ್ರೇಟಿಸ್ ಈ ಮಾತನ್ನು ಹೇಳಿದ್ದಾರೆ. ವಿಷಯವನ್ನು ಅರ್ಥ ಮಾಡಿಕೊಳ್ಳಲು ಪ್ರಶ್ನೆಗಳನ್ನು ಮಾಡಬೇಕಿದೆ, ಮಕ್ಕಳಿಗೆ ಹೆಚ್ಚು ಮಾತನಾಡಲು ಅವಕಾಶ ಕಲ್ಪಿಸಿಕೊಡುವುದು ಶಿಕ್ಷಣದ ಒಂದು ಅಂಶವಾಗಿದೆ ಎಂದರು.
ಮಿಕ್ಕೆರೆ ವೆಂಕಟೇಶ್ ಮಾತನಾಡಿ, ಜಿಲ್ಲೆಯ ಎಲ್ಲಾ ಮಕ್ಕಳ ಪರವಾಗಿ ಮಕ್ಕಳ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಲು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತದೆ. ಪ್ರತಿ ಜಿಲ್ಲೆಯಿಂದ ಒಂದು ಹೆಣ್ಣು ಮಗು ಹಾಗೂ ಒಂದು ಗಂಡು ಮಗುವನ್ನು ಆಯ್ಕೆಮಾಡಿ ಆ ಮಕ್ಕಳು ಮುಖ್ಯಮಂತ್ರಿಗಳೊಂದಿಗೆ ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳ ಕುರಿತು ಮುಖ್ಯ ಮಂತ್ರಿಗಳನ್ನು ಪ್ರಶ್ನೆ ಮಾಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಡಿಪಿಒ ಹೆಚ್.ಕೆ.ಕುಮಾರಸ್ವಾಮಿ, ಬರ್ಡ್ಸ್ ಸಂಸ್ಥೆಯ ನಿರ್ದೇಶಕ ಮಿಕ್ಕೆರೆ ವೆಂಕಟೇಶ್, ಸಂಯೋಜಕರಾದ ಶೋಭಾವತಿ, ಮಕ್ಕಳ ಸಹಾಯವಾಣಿಯ ಸದಸ್ಯರುಗಳಾದ ಸುಜಾತ, ಅನುಪಮ, ಸಿಂಚನಾ, ಶಿಕ್ಷಣ ಸಂಯೋಜಕರಾದ ಮಧುಸೂದನ್ ಹಾಜರಿದ್ದರು.