ಮುಂಬರುವ ಡಿ.9 ಮತ್ತು 10 ರಂದು ಎರಡು ಅಖಿಲ ಕರ್ನಾಟಕ ಜಾನಪದ ಸಮ್ಮೇಳನ ನಡೆಯಲಿದ್ದು, ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ, ಸಂಶೋಧಕ ಡಾ.ರಾಮೇಗೌಡ (ರಾಗೌ) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಎಂ.ಶ್ರೀನಿವಾಸ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಮಂಡ್ಯ ಜಿಲ್ಲಾ ಘಟಕದಿಂದ ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಸಮಿತಿ ಮಹಾಪೋಷಕರಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ, ಸಂಸದೆ ಸುಮಲತಾ ಅಂಬರೀಷ್, ಟಿ.ತಿಮ್ಮೇಗೌಡ, ಜಿಲ್ಲೆಯ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಪಿ.ಉಮೇಶ್, ನಗರಸಭೆ ಅಧ್ಯಕ್ಷ ಮಂಜು ಸ್ವಾಗತ ಸಮಿತಿಯಲ್ಲಿದ್ದಾರೆ ಎಂದರು.
ಕರ್ನಾಟಕ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಪ್ರೊ.ಹಿ.ಶಿ.ರಾಮಚಂದ್ರೇಗೌಡ ಮಾತನಾಡಿ, ಸಮ್ಮೇಳನಕ್ಕೆ ನಾಡಿನ ವಿವಿಧೆಡೆಯಿಂದ ಕಲಾವಿದರು ಆಗಮಿಸಲಿದ್ದು, ಜಾನಪದ ಸಂಘಟಕರು, ವಿದ್ವಾಂಸರು, ಸಂಶೋಧನಾ ವಿದ್ಯಾರ್ಥಿಗಳು ಸೇರಿದಂತೆ ಜಾನಪದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರನ್ನು ಆಹ್ವಾನಿಸಲಾಗಿದೆ ಎಂದರು.
ನಾಡಿನ ನೂರಕ್ಕೂ ಹೆಚ್ಚು ಜಾನಪದ ಕಲಾ ತಂಡಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ನಗರದ ಪ್ರಮುಖ ಬೀದಿಗಳಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಸಲಾಗವುದು. ಮೂರು ವೇದಿಕೆಗಳಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಜಿಲ್ಲೆಯ ಮತ್ತು ನಾಡಿನ ಹೆಸರಾಂತ ಜನಪದ ಕಲಾತಂಡಗಳಿಂದ ಕಲೆಗಳ ಪ್ರದರ್ಶನ, ಗೀತಾಗಾಯನ, ನಾಟಕಗಳಿರುತ್ತವೆ. ಅಂಬೇಡ್ಕರ್ ಭವನದ ಹೊರಾವರಣದಲ್ಲಿ ಜಾನಪದ ವಸ್ತು ಸಂಗ್ರಹಾಲಯ ಹಾಗೂ ಮಳಿಗೆಗಳನ್ನು ತೆರೆಯಲಾಗುವುದು ಎಂದು ವಿವರಿಸಿದರು.
ಸಮ್ಮೇಳನದ ನಿರ್ವಹಣೆಗಾಗಿ 13 ಉಪಸಮಿತಿಗಳನ್ನು ರಚಿಸಲಾಗಿದ್ದು, ಕಾರ್ಯಕ್ರಮದ ಸ್ಮರಣಾ ಸಂಚಿಕೆ ಹೊರತರಲಾಗುತ್ತಿದೆ. ಸಂಪಾದಕ ಮಂಡಳಿ ಈ ಕೆಲಸ ಪ್ರಾರಂಭಸಿದೆ. ಜನಪದ ಕಲಾವಿದರು, ವಿದ್ವಾಂಸರು, ಸಂಶೋಧಕರು ಮತ್ತು ವಿದ್ಯಾರ್ಥಿ ಯುವಜnರನ್ನು ಒಂದುಗೂಡಿಸುವ ಪ್ರಯತ್ನ, ಈ ಸಮ್ಮೇಳನದ ಮೂಲಕ ಆಗುತ್ತಿದೆ ಎಂದರು.
ಗೋಷ್ಠಿಯಲ್ಲಿ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ, ಹನಕೆರೆ ಎಂ.ಶ್ರೀನಿವಾಸ್, ಪ್ರತಿಷ್ಠಾನದ ಸಂಸ್ಥಾಪಕ ಹೆಚ್.ಎಂ.ರಾಮಚಂದ್ರು, ಶಿವರಾಜು, ಶಿವಪ್ಪ, ಕೀಲಾರ ಕೃಷ್ಣೇಗೌಡ ಉಪಸ್ಥಿತರಿದ್ದರು.