ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಬೇಕು ಅಂದರೆ ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದಂತೆ ಜ್ಞಾನ ಬೆಳೆಸಿಕೊಳ್ಳಬೇಕು.ದಿನ ನಿತ್ಯದ ಬದುಕಿನಲ್ಲಿ ವಿಜ್ಞಾನ ಅಡಕವಾಗಿದೆ ಎಂದು ಡಿಡಿಪಿಐ ಎಸ್.ಟಿ. ಜವರೇಗೌಡ ತಿಳಿಸಿದರು.
ಮಂಡ್ಯದ ಶ್ರೀ ಲಕ್ಷ್ಮಿ ಜನಾರ್ಧನ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಬೆಂಗಳೂರು, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ಇವರ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಸರ್. ಸಿವಿ ರಾಮನ್ ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಸಿವಿ ರಾಮನ್ ಅವರು ವಿಜ್ಞಾನ ಕ್ಷೇತ್ರದಲ್ಲಿ ಪ್ರಪಂಚದಲ್ಲಿ ಯಾರೂ ಮಾಡಲಿಕ್ಕಾಗದೆ ಇರುವಂತಹ ಸಾಧನೆಯನ್ನು ಮಾಡಿದ್ದಾರೆ. ಇಂದಿಗೂ ಸಿವಿ ರಾಮನ್ ರವರು ಅಮರವಾಗಿದ್ದಾರೆ ಎಂದರು.
ಯುವಕ ಯುವತಿಯರು ಸಿವಿ ರಾಮನ್ ರವರ ಹಾದಿಯಲ್ಲಿ ಸಾಗಿ, ಸಮಾಜಕ್ಕೆ ಏನಾದರೂ ಕೊಡುಗೆಯನ್ನು ನೀಡಬೇಕು ಎಂದರು.
ಕಾರವಿಪ ಜಿಲ್ಲಾ ಸಮಿತಿ ಅಧ್ಯಕ್ಷ ಡಾ. ಜಿ.ಪಿ. ಶಿವಶಂಕರ್ ರವರು ಮಾತನಾಡಿ, ವಿಜ್ಞಾನದ ಬಗ್ಗೆ ಅರಿವು ಮತ್ತು ಜ್ಞಾನವನ್ನು ಪಡೆದುಕೊಂಡಾಗ ಆ ಗಳಿಗೆ ತಕ್ಷಣ ಉತ್ತರ ದೊರೆಯುತ್ತದೆ. ವಿಜ್ಞಾನದ ಸ್ಪರ್ಧೆ ಉತ್ತಮವಾದ ಅನುಭವವನ್ನು ಕಲ್ಪಿಸಿಕೊಡುತ್ತದೆ ಎಂದರು.
ಜ್ಞಾನವನ್ನು ಸಂಪಾದನೆ ಮಾಡದೆ, ಬುದ್ಧಿವಂತರಾಗದೆ ಇದ್ದರೆ ನಮ್ಮ ವ್ಯಕ್ತಿತ್ವವನ್ನು ಸರಿಪಡಿಸಿಕೊಳ್ಳದೆ ಹೋದರೆ, ಎಷ್ಟು ಪದವಿ ಪಡೆದರೂ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯವಾಗುವುದಿಲ್ಲ ಎಂದರು.
ಸಿವಿ ರಾಮನ್ ರವರು ಬಡತನದಿಂದ ಬಂದಂತವರು. ದೊಡ್ಡ ವಿಜ್ಞಾನಿಯಾಗಿ ದೇಶ- ವಿದೇಶದಲ್ಲಿ ಇವರ ಹೆಸರು ರಾರಾಜಿಸಿತ್ತು. ಸಮಾಜದಲ್ಲಿ ಅವರಿಗೆ ಮನ್ನಣೆ ಗೌರವ ದೊರೆಯಿತು ಎಂದರು.
ಕಾರ್ಯಕ್ರಮದಲ್ಲಿ ವಿಜ್ಞಾನ ವಿಷಯದ ಪರೀಕ್ಷ ನಂಜರಾಜು, ಗಣಿತ ವಿಷಯದ ಪರಿವೀಕ್ಷಕ ಲೋಕೇಶ್, ರಾಜ್ಯ ಕಾರ್ಯಕಾರಿ ಸಮಿತಿಯ ನಿರ್ದೇಶಕ ರಾಮಚಂದ್ರು , ಶಿಕ್ಷಣಾಧಿಕಾರಿ ಶ್ರೀನಿವಾಸ್, ಸಮಾಜ ಪರಿವೀಕ್ಷಕ ನಾಗರಾಜು,ಶಾಲೆಯ ಮುಖ್ಯ ಶಿಕ್ಷಕರಾದ ಧನಲಕ್ಷ್ಮಿ, ಹೆಚ್. ಎಸ್. ಮಂಜುಳಾ ಹಾಜರಿದ್ದರು.