ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರನ್ನು ಕರ್ನಾಟಕಕ್ಕೆ ಮೇಲುಕೋಟೆ ಕ್ಷೇತ್ರವು ಕೊಡುಗೆಯಾಗಿ ನೀಡಿದೆ. ಅವರ ನಿಧನದ ನಂತರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಕಾಂಗ್ರೆಸ್ ಬೆಂಬಲಿತ ಕರ್ನಾಟಕ ಸರ್ವೋದಯ ಪಕ್ಷದಿಂದ ಸ್ಪರ್ಧಿಸಿದ್ದು ಅವರನ್ನು ಕ್ಷೇತ್ರದ ಜನತೆ ಅಧಿಕ ಮತಗಳಿಂದ ಗೆಲ್ಲಿಸಿ ಕೊಡಬೇಕೆಂದು ಮಾಜಿ ಶಾಸಕ ಹೆಚ್.ಬಿ.ರಾಮು ಮನವಿ ಮಾಡಿದರು.
ಮೇಲುಕೋಟೆ ವಿಧಾನಸಭ ಕ್ಷೇತ್ರದ ಹೊಳಲು ಗ್ರಾಮದಲ್ಲಿ ಶನಿವಾರ ನಡೆದ ಕರ್ನಾಟಕ ಸರ್ವೋದಯ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮೇಲುಕೋಟೆ ಕ್ಷೇತ್ರದಲ್ಲಿ ದುದ್ದ ಹೋಬಳಿಯ ಹೊಳಲು ಗ್ರಾಮವು ಪ್ರತಿಯೊಂದು ಚುನಾವಣೆಯಲ್ಲಿಯೂ ಬಹಳ ಮಹತ್ತರವಾದ ಪಾತ್ರವನ್ನು ವಹಿಸಿದೆ. ಈ ಗ್ರಾಮವು ಹಿರಿಯ ರಾಜಕಾರಣಿ ದಿ.ಹೆಚ್.ಡಿ.ಚೌಡಯ್ಯ ನವರನ್ನೊಳಗೊಂಡಂತೆ ಇನ್ನಿತರ ಗಣ್ಯ ವ್ಯಕ್ತಿಗಳನ್ನು ಕೊಡುಗೆಯಾಗಿ ನೀಡಿದೆ ಎಂದು ಸ್ಮರಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಹೆಚ್.ಎನ್.ರವೀಂದ್ರ ಮಾತನಾಡಿ, ಎಲ್ಲಾ ಜವಾಬ್ದಾರಿಯನ್ನು ಪಕ್ಷದ ಕಾರ್ಯಕರ್ತರೇ ವಹಿಸಿ, ಪ್ರತಿ ಬೂತ್ ಮಟ್ಟದಲ್ಲಿ ಮನೆಮನೆಗೆ ತೆರಳಿ ಮತಯಾಚಿಸಿ, ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಿ, ದರ್ಶನ್ ಪುಟ್ಟಣ್ಣಯ್ಯನವರ ಗೆಲುವಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಯುವಕರು ಹೆಚ್ಚಾಗಿ ಅವರವರ ಮನೆಗಳಲ್ಲಿ ಮತದಾನ ಮಾಡಿಸಿದರೆ, ಈ ಬಾರಿ ದರ್ಶನ್ ಗೆದ್ದಂತೆ. ಆದ್ದರಿಂದ ಕಾಂಗ್ರೆಸ್ ಹಾಗೂ ರೈತಸಂಘದ ಕಾರ್ಯಕರ್ತರು ಅವರ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.
ಕರ್ನಾಟಕ ಸರ್ವೋದಯ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಕೇವಲ ಚುನಾವಣೆಗೆ 10 ದಿನಗಳು ಮಾತ್ರ ಇದೆ. ಆದ್ದರಿಂದ ದೊಡ್ಡ ಮಟ್ಟದ ಬಹಿರಂಗ ಸಭೆಗಳನ್ನು ಮಾಡುವುದಿಲ್ಲ. ಹಿರಿಯ-ಕಿರಿಯ ನಾಯಕರ ಜೊತೆಗೂಡಿ, ಎಲ್ಲರೂ ಹೊಂದಾಣಿಕೆಯಿಂದ ಪ್ರತಿಯೊಂದು ಗ್ರಾ.ಪಂ.ವ್ಯಾಪ್ತಿಯ ಬೂತ್ಮಟ್ಟದ ಕಾರ್ಯಕ್ರಮವನ್ನು ನಡೆಸುತ್ತೇವೆ, ಹೆಚ್ಚಿನ ಜವಾಬ್ದಾರಿ ಕೆಲಸ ಮಾಡಿ, ಬೇರೆಯವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಪ್ರತಿಯೊಬ್ಬರೂ ಗೆಲುವಿಗೆ ಶ್ರಮಿಸಿ ಎಂದು ಮನವಿ ಮಾಡಿದರು.
ಸಭೆಯಲ್ಲಿ ಕೆಪಿಸಿಸಿ ಸದಸ್ಯ ಹೆಚ್.ತ್ಯಾಗರಾಜು, ಕಾಂಗ್ರೆಸ್ ವಕ್ತಾರ ಟಿ.ಎಸ್.ಸತ್ಯಾನಂದ, ಎಂ.ಎಸ್.ಚಿದಂಬರ್, ಕೆಬ್ಬಹಳ್ಳಿ ಆನಂದ್, ಉಮೇಶ್, ರವಿಕುಮಾರ್, ಶಿವರಾಜು, ಗ್ರಾ.ಪಂ. ಅಧ್ಯಕ್ಷ ಹೆಚ್.ಎಲ್.ಅಭಿನಂದನ್, ಸೊಸೈಟಿ ಅಧ್ಯಕ್ಷ ನಿಂಗೇಗೌಡ, ಕಾಂಗ್ರೆಸ್ ಯುವ ಮುಖಂಡ ಹೆಚ್.ಎಸ್.ನಂದೀಶ್, ಜಟ್ಟಿ ಕುಮಾರ್, ರೈತಸಂಘದ ಮುಖಂಡರಾದ ಚೇತನ್, ಚಂದನ್, ಪಟೇಲ್ರಾಮು, ಸೂರಿ, ಸಂತೋಷ್, ಬುಲೆಟ್ ಶಿವಣ್ಣ, ಮಾಜಿ ಗ್ರಾ.ಪಂ. ಅಧ್ಯಕ್ಷೆ ನಿಂಗರಾಜಮ್ಮ, ವಿನತಾ ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ರೈತಸಂಘದ ಕಾರ್ಯಕರ್ತರು, ಮಹಿಳೆಯರು ಭಾಗವಹಿಸಿದ್ದರು.