ಕಳೆದ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಮಂಡ್ಯನಗರದ ಸ್ವರ್ಣಸಂದ್ರ ಬಳಿಯ ಅಗ್ನಿಶಾಮಕ ಠಾಣೆ ಬಳಿ ನಡೆದಿದೆ.
ಮದ್ದೂರು ತಾಲೂಕು ಗೆಜ್ಜಲಗೆರೆ ಗ್ರಾಮದ ನಿವಾಸಿ ಲೇಟ್ ಅಪ್ಪಾಜಿಚಾರಿ ಅವರ ಪುತ್ರ ಜಿ.ಎ.ಸಿದ್ದರಾಜಚಾರಿ ಉರುಫ್ ರಾಜು(29) ಮೃತ ಯುವಕ. ವೃತ್ತಿಯಲ್ಲಿ ಮರಗೆಲಸ ಮಾಡುತ್ತಿದ್ದ ಸಿದ್ದರಾಜಚಾರಿ, ಮಂಡ್ಯ ನಗರದಲ್ಲಿ ಕೆಲಸ ಮುಗಿಸಿ ಸ್ವಗ್ರಾಮಕ್ಕೆ ತೆರಳುವ ಸಂದರ್ಭದಲ್ಲಿ ರಾತ್ರಿ 9.45ರ ಸಮಯದಲ್ಲಿ ಬೈಕ್ ಸ್ಕಿಡ್ ಆಗಿ ರಸ್ತೆ ವಿಭಜಕದಲ್ಲಿನ ಜಾಹೀರಾತು ಫಲಕಕ್ಕೆ ಬೈಕ್ ಡಿಕ್ಕಿಯಾಗಿದೆ.
ಈ ವೇಳೆ ತಲೆಗೆ ತೀವ್ರ ಪೆಟ್ಟು ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಿದ್ದರಾಜಚಾರಿ ಅವರನ್ನು ಸಾರ್ವಜನಿಕರು ಆ್ಯಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ ವೈದ್ಯರು ಸಿದ್ದರಾಜಚಾರಿ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.
ಟ್ರಾಫಿಕ್ ಇನ್ಸ್ಪೆಕ್ಟರ್ ಕೆ.ಸಂತೋಷ್, ಸಬ್ಇನ್ಸ್ಪೆಕ್ಟರ್ ಮಣಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತನ ಸಹೋದರಿ ಜಿ.ಎ.ಜ್ಯೋತಿ ನೀಡಿದ ದೂರಿನ ಮೇರೆಗೆ ಮಂಡ್ಯ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಿಲ್ಲಾಸ್ಪತ್ರೆ ಶವಾಗಾರದ ಆವರಣದಲ್ಲಿ ಮೃತರ ಸಂಬಂಧಿಸಿದ ರೋಧಕ ಮುಗಿಲು ಮುಟ್ಟಿತ್ತು.