ಬಹುಭಾಷಾ ನಟ ಪ್ರಕಾಶ್ ರೈ ಅವರಿಗೆ ಸಂಘಪರಿವಾರದ ಕಾರ್ಯಕರ್ತನೋರ್ವ ಸಾಮಾಜಿಕ ಮಾಧ್ಯಮ ಫೇಸ್ಬುಕ್ ಲೈವ್ನಲ್ಲಿ ಜೀವ ಬೆದರಿಕೆ ಹಾಕಿರುವ ವೀಡಿಯೊ ವೈರಲ್ ಆಗಿದೆ. ಈ ವಿಚಾರವನ್ನು ಪ್ರಕಾಶ್ ರೈ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಗೃಹ ಸಚಿವ ಡಾ.ಜಿ ಪರಮೇಶ್ವರ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಬಗ್ಗೆ ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಪತ್ರಿಕಾ ಸಂವಾದದಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಕಾಶ್ ರೈ ಅವರು, ”ʼಗುಪ್ತಚರ ಇಲಾಖೆಗೆ ಅನುಮಾನಗಳಿದ್ದರೆ ಧರ್ಮಾಧಿಕಾರಿಗಳನ್ನೂ ಮಂಪರು ಪರೀಕ್ಷೆಗೆ ಒಳಪಡಿಸುವುದರಲ್ಲಿ ತಪ್ಪೇನಿದೆ” ಎಂದು ಪ್ರಶ್ನೆ ಮಾಡಿದ್ದರು.
ನೊಡ್ರಪಾ.. ಉತ್ತರ ಕುಮಾರರು .. ಕೊಲೆ ಬೆದರಿಕೆ ಹಾಕ್ತಾ ಇದ್ದಾರೆ .. ಏನ್ ಮಾಡಾಣ ವಸಿ ಯೋಳಿ @siddaramaiah @DrParameshwara @DKShivakumar @DgpKarnataka #KarnatakaPolice #justasking https://t.co/oGUBbmieRD
— Prakash Raj (@prakashraaj) August 16, 2023
“>
ಪ್ರಕಾಶ್ ರೈ ಅವರು ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಸಂಘಪರಿವಾರದ ಕಾರ್ಯಕರ್ತ ಸಂತೋಷ್ ಕಾರ್ತಾಳ್ ಎನ್ನುವವನು, ಫೇಸ್ಬುಕ್ನಲ್ಲಿ ಲೈವ್ ಬಂದು, ”ಧರ್ಮಾಧಿಕಾರಿಗಳ ಕ್ಷಮೆ ಕೇಳದಿದ್ದರೆ 24 ಗಂಟೆಯೊಳಗಡೆ ನಿನ್ನ ಮನೆ ಮುಂದೆ ನಿನ್ನ ಹೆಣ ಬಿದ್ದಿರುತ್ತದೆ” ಎಂದು ಕೊಲೆ ಬೆದರಿಕೆ ಹಾಕಿದ್ದಾನೆ. ಈ ವೀಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈ ವಿಚಾರವನ್ನು ಪ್ರಕಾಶ್ ರೈ ಅವರು ಟ್ವೀಟರ್ನಲ್ಲಿ ಹಂಚಿಕೊಂಡಿದ್ದು, ”ನೊಡ್ರಪಾ.. ಉತ್ತರ ಕುಮಾರರು .. ಕೊಲೆ ಬೆದರಿಕೆ ಹಾಕ್ತಾ ಇದ್ದಾರೆ .. ಏನ್ ಮಾಡಾಣ ವಸಿ ಯೋಳಿ” ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಗೃಹ ಸಚಿವ ಡಾ.ಜಿ ಪರಮೇಶ್ವರ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಟ್ಯಾಗ್ ಮಾಡಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಕರ್ನಾಟಕ ಜನಶಕ್ತಿಯ ಕಾರ್ಯಕಾರಿ ಸಮಿತಿ ಸದಸ್ಯ ಕೆಎಲ್ ಅಶೋಕ್ ಅವರು, ”ನಟ ಪ್ರಕಾಶ್ ರೈ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿರುವ ಈ ಸಂಘಪರಿವಾರದ ಕಾರ್ಯಕರ್ತನನ್ನು ಬಂಧಿಸಬೇಕು. ಈ ರೀತಿ ಕಾನೂನನ್ನು ಕೈಗೆತ್ತಿಕೊಳ್ಳುತ್ತೇವೆ ಎನ್ನುವ ದಾರ್ಷ್ಟ್ಯತನದಿಂದ ಮಾತನಾಡುವವರ ಮೇಲೆ ಪೊಲೀಸ್ ಇಲಾಖೆ ಕಣ್ಗಾವಲು ಇಡಬೇಕು ಮತ್ತು ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದ್ದಾರೆ.
”ಸೆಪ್ಟಂಬರ್ 5ರಂದು ಪತ್ರಕರ್ತೆ, ವಿಚಾರವಾದಿ ಗೌರಿಲಂಕೇಶ್ ಅವರನ್ನು ಹತ್ಯೆ ಮಾಡಲಾದ ದಿನ, ಈ ರೀತಿ ಸಮಾಜದ ಅಂಕು ಡೊಂಕುಗಳನ್ನು ಎತ್ತಿತೋರಿಸುತ್ತ, ಸಮಾಜದಲ್ಲಿ ಸಮಾನತೆ ಬರಬೇಕು ಎಂದು ಹೋರಾಡುವವರನ್ನ, ಸಂವಿಧಾನದ ಪರವಾಗಿ ಮಾತನಾಡುವ ಧ್ವನಿಗಳನ್ನು ಅಡಗಿಸುವ ಸಂಘ ಪರಿವಾರದ ಈ ಷಡ್ಯಂತ್ರ ನಿಲ್ಲಬೇಕು. ಈ ಬಗ್ಗೆ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಕೆಎಲ್ ಅಶೋಕ್ ಅವರು ಒತ್ತಾಯಿಸಿದ್ದಾರೆ.